₹10 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ: ಶಾಸಕ

KannadaprabhaNewsNetwork | Published : Jan 12, 2025 1:18 AM

ಸಾರಾಂಶ

ನೀರು ಹರಿಯುವಂತಹ ಕಾಲುವೆಗಳ ಮೇಲೆ ಮೇಲ್ಸೇತುವೆ ನಿರ್ಮಾಣ ಮಾಡಲು ಮನವಿ ಮಾಡುತ್ತಿದ್ದರು. ಕೃಷಿ ಚಟುವಟಿಕೆ ಸೇರಿದಂತೆ ಹಲವು ಕೆಲಸಗಳಿಗೆ ತೆರಳಲು ಸ್ಥಳೀಯರು ಸಮಸ್ಯೆ ಪಡುತ್ತಿದ್ದರು. ಇದರಿಂದಾಗಿ ನಮ್ಮ ಸರ್ಕಾರದೊಂದಿಗೆ ಮಾತನಾಡಿ ಸುಮಾರು 10 ಕೋಟಿಯಷ್ಟು ಅನುದಾನವನ್ನು ಶಾಸಕರು ಬಿಡುಗಡೆ ಮಾಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕಿನ ವ್ಯಾಪ್ತಿಯ ನಲ್ಲಗೊಂಡಯ್ಯಗಾರನಹಳ್ಳಿ, ಆದಿನಾರಾಯಣಹಳ್ಳಿ ಹಾಗೂ ದಪ್ಪರ್ತಿ ಒಡ್ಡು ಬಳಿ ಹರಿಯುವಂತಹ ಕಾಲುವೆಗಳ ಮೇಲೆ ಸೇತುವೆ ನಿರ್ಮಾಣ ಮಾಡಲು ಸುಮಾರು 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಈ ಮೂರು ಗ್ರಾಮಗಳಲ್ಲಿ ಹರಿಯುವ ಕಾಲುವೆಯ ಮೇಲೆ ಸೇತುವೆ ನಿರ್ಮಾಣ ಮಾಡುವ ಸಂಬಂಧ ಸ್ಥಳ ಪರಿಶೀಲನೆ ಮಾಡಿ ಶಾಸಕರು ಮಾತನಾಡಿದರು.

ಜನತೆಯ ಬಹುದಿನಗಳ ಬೇಡಿಕೆ

ಸುಮಾರು ದಿನಗಳಿಂದ ಈ ಭಾಗದ ಜನರು ನೀರು ಹರಿಯುವಂತಹ ಕಾಲುವೆಗಳ ಮೇಲೆ ಮೇಲ್ಸೇತುವೆ ನಿರ್ಮಾಣ ಮಾಡಲು ಮನವಿ ಮಾಡುತ್ತಿದ್ದರು. ಕೃಷಿ ಚಟುವಟಿಕೆ ಸೇರಿದಂತೆ ಹಲವು ಕೆಲಸಗಳಿಗೆ ತೆರಳಲು ಸ್ಥಳೀಯರು ಸಮಸ್ಯೆ ಪಡುತ್ತಿದ್ದರು. ಇದರಿಂದಾಗಿ ನಮ್ಮ ಸರ್ಕಾರದೊಂದಿಗೆ ಮಾತನಾಡಿ ಸುಮಾರು 10 ಕೋಟಿಯಷ್ಟು ಅನುದಾನ ಬಿಡುಗಡೆ ಮಾಡಿಸಿರುವುದಾಗಿ ಹೇಳಿದರು.

ಈಗಾಗಲೇ ಆದಿನಾರಾಯಣಹಳ್ಳಿ ಬಳಿಯ ಸೇತುವೆಗೆ ಟೆಂಡರ್ ಆಗಿದೆ ಶೀಘ್ರದಲ್ಲೇ ಗುದ್ದಲಿ ಪೂಜೆಯನ್ನು ನೆರವೇರಿಸಲಾಗುವುದು. ಉಳಿದ ನಲ್ಲಗೊಂಡಯ್ಯಗಾರಹಳ್ಳಿ ಹಾಗೂ ದಪ್ಪರ್ತಿ ಒಡ್ಡು ಬಳಿ ಮೇಲ್ಸುತುವೆ ನಿರ್ಮಾಣಕ್ಕಾಗಿ ಸದ್ಯ ಸ್ಥಳ ಪರಿಶೀಲನೆ ಮಾಡಲಾಗಿದೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಯಾವ ರೀತಿ ಕಾಮಗಾರಿ ನಡೆಯಬೇಕು ಎಂಬುದನ್ನು ಅರಿತುಕೊಳ್ಳಲು ಎಂಜಿನಿಯರ್‌ಗಳ ಜೊತೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎ₹ದರು.

ಕೋಡಿ ಅಭಿವೃದ್ಧಿಗೆ ₹4 ಕೋಟಿ

ಈ ಎರಡೂ ಕಾಮಗಾರಿಗಳೂ ಸಹ ಶೀಘ್ರದಲ್ಲೇ ನೆರವೇರಲಿವೆ. ಗುಡಿಬಂಡೆ ಕೆರೆ ಕೋಡಿಯ ಅಭಿವೃದ್ದಿಗೆ 4 ಕೋಟಿ ಅನುದಾನ ನೀಡಲಾಗಿದೆ. ಅಲ್ಲಿ ಕಾಮಗಾರಿ ನಡೆಸಲು ಈ ಅನುದಾನ ಸಾಕಾಗುವುದಿಲ್ಲ. ಈ ಬಜೆಟ್ ನಲ್ಲಿ ಮತ್ತಷ್ಟು ಅನುದಾನ ಒದಗಿಸಲು ಮನವಿ ಮಾಡುತ್ತೇನೆ. ಅನುದಾನವನ್ನು ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಿಸಲು ಶ್ರಮಿಸುತ್ತೇನೆ ಎಂದರು.

ಗುಣಮಟ್ಟ ಕಾಪಾಡಲು ಸೂಚನೆ

ಜನರೂ ಸಹ ಕಾಮಗಾರಿ ನಡೆಯುವಾಗ ಆಗಾಗ ಪರಿಶೀಲನೆ ನಡೆಸುತ್ತಿರಬೇಕು. ಕಾಮಗಾರಿ ಗುಣಮಟ್ಟ ಕಾಪಾಡುವುದು ಸ್ಥಳೀಯರ ಜವಾಬ್ದಾರಿಯಾಗಿದೆ ಕಾಮಗಾರಿಯಲ್ಲಿ ಕಳಪೆ ಕಂಡುಬಂದರೇ ಕೂಡಲೇ ನನಗೆ ಮಾಹಿತಿ ನೀಡಬೇಕು. ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಲು ನಾನು ಸೂಚನೆ ನೀಡುತ್ತೇನೆ. ಇನ್ನೂ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ತಾವು ಸದಾ ಸಿದ್ದನಾಗಿರುರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಸುನೀಲ್, ಮುಖಂಡರಾದ ಆದಿರೆಡ್ಡಿ, ಆನಂದರೆಡ್ಡಿ, ಮಂಜುನಾಥ, ದಪ್ಪರ್ತಿ ನಂಜುಂಡ, ಹಳೇಗುಡಿಬಂಡೆ ಮಂಜುನಾಥ, ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.

Share this article