ಹೊಸಪೇಟೆ: ಸಮಕಾಲೀನದಲ್ಲಿ ಭಾಷೆಗಳು ಸಂಕುಚಿತಗೊಳ್ಳುತ್ತಿವೆ. ಇವು ಕಣ್ಣಿಗೆ ಕಾಣದ ಹಿಂಸೆಯಾಗಿ ಪರಿವರ್ತನೆಗೊಂಡಿವೆ. ಜತೆಗೆ ಕತೆ, ಕವಿತೆಗಳು ನಿವೇದನಾತ್ಮಕ ಕಾವ್ಯಗಳಾಗಿ ರೂಪುಗೊಂಡಿವೆ ಎಂದು ಕವಿ ಮತ್ತು ಅನುವಾದಕ ಆರಿಫ್ ರಾಜಾ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಕವಿತೆಗಳ ಓದು ಹಾಗೂ ಸಂವಾದ ಸಮಕಾಲೀನ ಭಾರತೀಯ ಕಾವ್ಯ ಸಂವೇದನೆಯ ಸ್ವರೂಪ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ದಲಿತ ಕಾವ್ಯಗಳು 90ರ ದಶಕದ ನಂತರ ಸಾಹಿತ್ಯದಲ್ಲಾದ ಏರುಪೇರುಗಳತ್ತ ಗಮನಹರಿಸಬೇಕು. ಕಾವ್ಯಗಳು ಕಲಾತ್ಮಕ ಮೌಲ್ಯಕ್ಕಿಂತ ಆತ್ಮಾವಲೋಕನಕ್ಕೆ ಹೆಚ್ಚು ಒತ್ತು ನೀಡಿದೆ. ಇನ್ನು ಅಮೂರ್ತ ಚಿಂತನೆಗೆ ನಾವು ಹೆಚ್ಚು ಒತ್ತು ನೀಡಬಾರದು. ಹೆದರುವಂತಹ ಲೇಖಕ ಸಮಾಜಕ್ಕೆ ಯಾವುದೇ ಕೊಡುಗೆಗಳನ್ನು ನೀಡುವುದಿಲ್ಲ ಎಂದರು.
ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ.ಎಫ್.ಟಿ. ಹಳ್ಳಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೇಪಾಳಿ ಸಾಹಿತ್ಯದ ಘಟನೆಗಳನ್ನು ನಾವೆಲ್ಲರೂ ಅರಿಯಬೇಕು. ಕಾವ್ಯಗಳ ಅಧ್ಯಯನದ ಜೊತೆಗೆ ಅಲ್ಲಿನ ಸ್ಥಳೀಯ ಭಾಷೆಯ ಧೋರಣೆಯನ್ನು ನಾವು ಅಧ್ಯಯನ ಮಾಡಿದಾಗ ಸ್ಥಳೀಯ ಜೀವನ ಮತ್ತು ಬದುಕನ್ನು ನಾವು ತಿಳಿಯಬಹುದು ಎಂದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.