ನ್ಯಾಯಾಂಗ ನಿಂದನೆ, ಪಿಡಿಒ ತಲೆದಂಡ ಸಾಧ್ಯತೆ

KannadaprabhaNewsNetwork |  
Published : Dec 23, 2025, 03:00 AM IST
ಇರುವೈಲು: ಹೈಕೋರ್ಟ್ ಆದೇಶ ಮೀರಿ ಮನೆ ನಿರ್ಮಾಣನ್ಯಾಯಾಂಗ ನಿಂದನೆ, ಪಿಡಿಒ ತಲೆದಂಡ ಸಾಧ್ಯತೆ | Kannada Prabha

ಸಾರಾಂಶ

ಇರುವೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿರುವ ಮನೆ ತೆರವಿಗೆ ಹೈಕೋರ್ಟ್ ಆದೇಶ ನೀಡಿದೆ.

ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿರುವ ಮನೆ ತೆರವಿಗೆ ಹೈಕೋರ್ಟ್ ಆದೇಶ ನೀಡಿದ್ದು, ಕಾಮಗಾರಿ ಮುಂದುವರಿಸಲು ಅವಕಾಶ ನೀಡಿರುವ ಪಿಡಿಒ ಅವರ ತಲೆದಂಡವಾಗುವ ಸಾಧ್ಯತೆ ಎದುರಾಗಿದೆ.

ಇರುವೈಲಿನ ಕೊಲಾಯಿಕೋಡಿ ಎಂಬಲ್ಲಿ ರವಿಂದ್ರ ಶೆಟ್ಟಿ ಅವರು ಸರ್ವೆ ನಂಬರ್‌ 99/1ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಯಶೋದಾ ಯಮುನಾ ಶೆಟ್ಟಿ ಅವರು ಪಿಡಿಒ ಹಾಗೂ ತಹಸೀಲ್ದಾರ್ ಗೆ ದೂರು ನೀಡಿದ್ದರು. ಆದರೆ ಒಂದು ವರ್ಷದಿಂದಲೂ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಿದ್ದರೂ, ಈ ಅನಧಿಕೃತ ನಿರ್ಮಾಣದ ತೆರವಿಗೆ ಪಿಡಿಒ ಮತ್ತು ತಹಸೀಲ್ದಾರ್‌ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದೂರುದಾರರು ತಮ್ಮ ಹಸುಗಳನ್ನು ಮಾರಿ ಬಂದ ಹಣದಲ್ಲಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರು.

ದೂರು ನೀಡಿದ್ದರೂ ಕ್ರಮಕೈಗೊಳ್ಳದ ಅಧಿಕಾರಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಆರ್. ನಟರಾಜ್ ಅನಧಿಕೃತ ನಿರ್ಮಾಣಕ್ಕೆ ಡಿ. 4ರಂದು ತಡೆಯಾಜ್ಞೆ ನೀಡಿದ್ದಾರೆ. ಪಿಡಿಒ ಪರಿಶೀಲನೆ ನಡೆಸಿ ಅನಧಿಕೃತ ಕಾಮಗಾರಿಯನ್ನು ಪೊಲೀಸರ ನೆರವಿನಿಂದ ತಕ್ಷಣ ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.ರವೀಂದ್ರ ಶೆಟ್ಟಿ ಅವರು ಈ ಹಿಂದೆ ಸದ್ರಿ ಪ್ರದೇಶದ ಬಳಿಯಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಕೋರೆಯೊಂದರ ಕಾರ್ಮಿಕರ ಶೆಡ್ಡಿನ ವಿದ್ಯುತ್ ಸಂಪರ್ಕವನ್ನು ಈ ಅನಧಿಕೃತ ಮನೆಗೆ ವರ್ಗಾಯಿಸಿದ ಆರೋಪವನ್ನೂ ಎದುರಿಸುತ್ತಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ನೀಡಿದ ಮೇಲೂ ತರಾತುರಿಯಿಂದ ಕಾಮಗಾರಿ ಪೂರ್ಣಗೊಳಿಸಿ ಮನೆಯಲ್ಲಿ ವಾಸಿಸಲು ಪ್ರಯತ್ನಿಸುತ್ತಿರುವುದು ನ್ಯಾಯಾಂಗ ನಿಂದನೆಯಾಗಿದೆ.

ಲೋಕಾಯುಕ್ತ, ಜಿಲ್ಲಾಧಿಕಾರಿಗಳಿಗೂ ದೂರು

ಇದೀಗ ಇರುವೈಲಿಗೆ ಹೊಸದಾಗಿ ನೇಮಕಗೊಂಡಿರುವ ಪಿಡಿಒ ನೋಟಿಸ್‌ ನೀಡಿದ್ದರೂ, ಪ್ರತಿವಾದಿ ರವೀಂದ್ರ ಶೆಟ್ಟಿ ಅವರು ತುರಾತುರಿಯಿಂದ ಕಾಮಗಾರಿ ಮುಂದುವರಿಸಲು ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ದೂರುದಾರರು ಲೋಕಾಯುಕ್ತ ಮತ್ತು ದ.ಕ. ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ. ಕಾಮಗಾರಿ ಮುಂದುವರಿಯುತ್ತಿರುವ ಬಗ್ಗೆ ಹೈಕೋರ್ಟಿಗೆ ಮಾಹಿತಿ ನೀಡಲಾಗುತ್ತಿದ್ದು, ಇದರಿಂದ ಇರುವೈಲು ಪಿಡಿಒ ಅವರ ತಲೆದಂಡವಾಗುವ ಸಾಧ್ಯತೆಯಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌