ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಡಿಸಿಗೆ ಅವಹೇಳನೆ: ಎಂಎಲ್ಸಿ ರವಿಕುಮಾರ್‌ ವಿಚಾರಣೆ

KannadaprabhaNewsNetwork | Published : Jun 2, 2025 11:56 PM

ಕಲಬುರಗಿ ಡೀಸಿ ಫೌಜಿಯಾ ತರನ್ನುಮ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸೋಮವಾರ ಬಿಜೆಪಿ ಎಂಎಲ್ ಸಿ, ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಕಲಬುರಗಿ ಎಸಿಪಿ ಮುಂದೆ ವಿಚಾರಣೆಗೆ ಹಾಜರಾದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಡೀಸಿ ಫೌಜಿಯಾ ತರನ್ನುಮ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸೋಮವಾರ ಬಿಜೆಪಿ ಎಂಎಲ್ ಸಿ, ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಕಲಬುರಗಿ ಎಸಿಪಿ ಮುಂದೆ ವಿಚಾರಣೆಗೆ ಹಾಜರಾದರು.

ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಎಸಿಪಿ ಕಛೇರಿಗೆ ಆಗಮಿಸಿದ ಬಿಜೆಪಿ ಎಂಎಲ್ ಸಿ.ಎನ್. ರವಿಕುಮಾರ್‌ ಕಲಬುರಗಿ ದಕ್ಷಿಣ ವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಮುಂದೆ ವಿಚಾರಣೆಗೆ ಹಾಜರಾದರು. ವಿಚಾರಣೆಗೆ ಹಾಜರಾಗುವಂತೆ ನಿನ್ನೆಯೇ ರವಿಕುಮಾರಗೆ ಎಸಿಪಿ ಸುಬೇದಾರ್ ಅವರು ಎರಡನೇ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ಜಾರಿ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ಬಗ್ಗೆ ರವಿಕುಮಾರ್ ವಿವರಣೆ ನೀಡಿದ್ದಾರೆ.

ಈಗಾಗಲೇ ಈ ಮಾತು ಹಿಂಪಡೆದುಕೊಂಡು ನಾನು ಕ್ಷಮೆ ಕೇಳಿದ್ದೇನೆ. ಎನ್ನುವುದನ್ನು ಸತತ 5 ಗಂಟೆ ನಡೆದ ವಿಚಾರಣೆಯಲ್ಲಿ ವಿಚಾರಣಾಧಿಕಾರಿ ಗಮನಕ್ಕೆ ರವಿಕುಮಾರ ತಂದಿದ್ದಾರೆ. ಕಲಬುರಗಿಯ ಐವಾನ್ ಶಾಹಿ ಅತಿಥಿ ಗೃಹದಿಂದ ರವಿಕುಮಾರ್ ಜೊತೆ ಆಗಮಿಸಿದ ಬಿಜೆಪಿ ಮುಖಂಡರಿಗೆ ಕಛೇರಿ ಹೊರಗಡೆ ಪೊಲೀಸರು ತಡೆದರು.

ಏಕಾಂಗಿಯಾಗಿ ಎಸಿಪಿ ಕಛೇರಿಗೆ ಹೋಗಿ ವಿಚಾರಣೆಗೆ ಹಾಜರಾದ ಎನ್.ರವಿಕುಮಾರ್‌ ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ. ಮುಂಜಾಗ್ರತೆಯಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಕ್ಕೆ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದರು. ರವಿಕುಮಾರ್‌ ವಿಚಾರಣೆಗೆ ಹೋದ ನಂತರ ಹೊರಗಡೆ ಬಿಜೆಪಿ ಮುಖಂಡ ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲೇನು ಆತಂಕವಾದಿಗಳು ಬಂದಿದ್ದಾರಾ? ಎಷ್ಟೊಂದು ಪೊಲೀಸರನ್ನು ಕರೆಸಿದ್ದೀರಿ ? ನಾವೇನಿದ್ರೂ ಭಾರತ ಮಾತಾಕಿ ಜೈ ಎನ್ನುವವರು ಎಂದರು.

ಪೊಲೀಸರು ಸಚಿವ ಖರ್ಗೆ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ, ಪೊಲೀಸರೇ, ಪ್ರೀಯಾಂಕ್ ಖರ್ಗೆ ಅವರೇ ಶಾಶ್ವತವಾಗಿ ಮಂತ್ರಿ ಆಗಿ ಇರೋದಿಲ್ಲ ನಮ್ಮದೂ ಸರಕಾರ ಅಧಿಕಾರಕ್ಕೆ ಬರುತ್ತೆ ನೆನಪಿರಲಿ ಎಂದು ತೆಲ್ಕೂರ್ ಗುಡುಗಿದರು. ಕಲಬುರಗಿ ದಕ್ಷಿಣ ವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಮುಂದೆ ವಿಚಾರಣೆಗೆ ಹಾಜರಾದ ರವಿಕುಮಾರ್‌ ಮೇ 24 ರಂದು ನಡೆದ ಕಲಬುರಗಿ ಚಲೋ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಇಲ್ಲಿನವರೋ ಅಥವಾ ಪಾಕಿಸ್ತಾನದಿಂದ ಬಂದವರೋ ಎಂಬ ರವಿಕುಮಾರ್ ಹೇಳಿಕೆ ವಿವಾದ ಹುಟ್ಟು ಹಾಕಿತ್ತು.

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಗ್ಗೆ ರವಿಕುಮಾರ್ ಹೇಳಿಕೆ ನೀಡಿದ್ದು, ವಿವಾದವಾಗಿತ್ತು. ಜೊತೆಗೆ ಜಿಲ್ಲೆಯ ಕೆಲ ದಲಿತ ಪೊಲೀಸ್ ಅಧಿಕಾರಿಗಳ ವಿರುದ್ದವೂ ಗುಡುಗಿದ್ದ ರವಿಕುಮಾರ ವಿರುದ್ಧ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಹಾಗೂ ನಿಂದನೆ ಕೇಸ್ ದಾಖಲಾಗಿತ್ತು.

ಎಫ್ ಐ ಆರ್ ದಾಖಲು ಹಿನ್ನೆಲೆ ನೋಟಿಸ್ ಜಾರಿ ಮಾಡಿ ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿ‌ ನೋಟೀಸ್ ನೀಡಿದ್ದರು. ಎನ್.ರವಿಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈ ಕೋರ್ಟ್ ಸಹ ಪೊಲೀಸರಿಗೆ ಸೂಚನೆ ನೀಡಿತ್ತು. ನಮಗೆ ಇವತ್ತು ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದಾರೆ ವಿಚಾರಣೆಗಾಗಿಯೇ ಬಂದಿದ್ದೇನೆ. ವಿಚಾರಣೆ ಮುಗಿಸಿ ಬಂದ ಮೇಲೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಕಲಬುರಗಿಯಲ್ಲಿ ಬಿಜೆಪಿ ಎಂ.ಎಲ್.ಸಿ ಎನ್ ರವಿಕುಮಾರ್‌ ಹೇಳಿದ್ದಾರೆ.