ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಪಂ ವ್ಯಾಪ್ತಿಯ ಬಲಿಗೆ ಗ್ರಾಮದಲ್ಲಿ ಭಾರಿ ಮಳೆಗೆ ಭೂ ಕುಸಿತ
ಕಾಫಿಯ ನಾಡಿನಲ್ಲಿ ಮಂಗಳವಾರವೂ ಮಳೆ ಮುಂದುವರಿದಿತ್ತು. ಆದರೆ, ಅಬ್ಬರದ ಪ್ರಮಾಣ ಇಳಿಮುಖವಾಗಿತ್ತು.
ಮಲೆನಾಡಿನ ತಾಲೂಕುಗಳಾದ ಶೃಂಗೇರಿ, ಕಳಸ, ಕೊಪ್ಪ ಹಾಗೂ ಮೂಡಿಗೆರೆಯಲ್ಲಿ ಎಂದಿನಂತೆ ಮಳೆ ಮುಂದುವರೆದಿತ್ತು. ಆದರೆ, ಚಿಕ್ಕಮಗಳೂರು, ಎನ್.ಆರ್.ಪುರ ತಾಲೂಕುಗಳಲ್ಲಿ ಮಳೆಯ ಸ್ವಲ್ಪಮಟ್ಟಿಗೆ ಇಳಿಮುಖವಾಗಿತ್ತು. ಮಧ್ಯಾಹ್ನದ ನಂತರ ಆಗಾಗ ಬಿಸಿಲು ಕಂಡು ಬಂದಿತು. ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಗಳಲ್ಲಿ ಮೋಡ ಕವಿದ ವಾತಾವರಣದ ನಡುವೆ ಆಗಾಗ ತುಂತುರು ಮಳೆ ಬರುತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ಇದೇ ಪರಿಸ್ಥಿತಿ ಮುಂದುವರಿದಿತ್ತು.ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಪಂ ವ್ಯಾಪ್ತಿಯ ಬಲಿಗೆ ಗ್ರಾಮದಲ್ಲಿ ಭಾರಿ ಮಳೆಗೆ ಭೂ ಕುಸಿತವಾಗಿದ್ದು. ತಾಲೂಕು ಆಡಳಿತ 5 ಕುಟುಂಬಗಳನ್ನು ಬಲಿಗೆ ಗ್ರಾಮದ ಶಾಲೆ, ಅಂಗನವಾಡಿ, ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆದಿದ್ದು. ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತವೇ ನೀಡಿದೆ. ಬಲಿಗೆ ಗ್ರಾಮದ ಭಾಸ್ಕರ, ಲಕ್ಷ್ಮಿ, ವೆಂಕಯ್ಯ, ಮುಕುಂದ, ಶೇಖರ ಎಂಬುವವರ ಕುಟುಂಬಗಳನ್ನು ಬಲಿಗೆ ಶಾಲೆಯಲ್ಲಿ ತೆರೆದ ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ. 2019ರಲ್ಲಿ ಈ ಭಾಗದಲ್ಲಿ ಭಾರಿ ಪ್ರಮಾಣದ ಭೂಕುಸಿತವಾಗಿದ್ದು ಹಲವಾರು ಮಂದಿ ಮನೆ ಹಾಗೂ ಆಸ್ತಿಪಾಸ್ತಿ ಕಳೆದುಕೊಂಡಿದ್ದರು. ಮುಂಜಾ ಗ್ರತಾ ಕ್ರಮವಾಗಿ ಐದು ಕುಟುಂಬಗಳನ್ನು ಮಂಗಳವಾರ ಸ್ಥಳಾಂತರ ಮಾಡಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಕಂಚಿನಕಲ್ ದುರ್ಗದಲ್ಲಿ ರಸ್ತೆ ಮೇಲೆ ಮರ ಹಾಗೂ ವಿದ್ಯುತ್ ಕಂಬ ಉರುಳಿ ಬಿದ್ದಿತ್ತು. ಹುಯಿಗೆರೆ ಗ್ರಾಮದ ಬಳಿಯೂ ಮರ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಕಳಸ ತಾಲೂಕಿನ ಮರಸಣಿಗೆ ಗ್ರಾಮದ
ಪ್ರೇಮ ಎಂಬುವರ ಮೇಲೆ ಮರದ ಟೊಂಗೆ ಬಿದ್ದು ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿದ್ದರು.ಮಳೆ ಮುಂದುವರಿದಿದ್ದರಿಂದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕಿನ ಅಂಗನ ವಾಡಿಗಳಿಗೆ ಮಂಗಳವಾರ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಒಟ್ಟಾರೆ ಮಳೆ ಪ್ರಮಾಣ ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. 17 ಕೆಸಿಕೆಎಂ 5ಮೂಡಿಗೆರೆ ತಾಲೂಕಿನ ಬಲಿಗೆ ಗ್ರಾಮದಲ್ಲಿರುವ ಐದು ಮನೆಗಳ ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ಮಂಗಳವಾರ ಸ್ಥಳಾಂತರ ಮಾಡಲಾಯಿತು.