ಸತತ ಮಳೆ: ಚೌಡೇನಹಳ್ಳಿ ಗ್ರಾಪಂ ಕಚೇರಿಗೆ ಬಂದ್‌..!

KannadaprabhaNewsNetwork | Published : Oct 26, 2024 1:08 AM

ಸಾರಾಂಶ

ಚೌಡೇನಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಈ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿದೆ. ಸತತ ಮಳೆಯಿಂದ ಕಿಕ್ಕೇರಿಯ ಅಮಾನಿಕೆರೆ ಭರ್ತಿಯಾಗಿ ಕೆರೆ ಕೋಡಿ ಮೂಲಕ ಹೆಚ್ಚುವರಿ ನೀರು ಈ ಹಳ್ಳದ ಮೂಲಕ ಹರಿದು ಹೋಗುತ್ತಿದೆ. ಇದೀಗ ಹಳ್ಳದ ಸೇತುವೆ ಕೊಚ್ಚಿ ಹೋಗಿರುವ ಕಾರಣ ಗ್ರಾಮದ ಸಂಪರ್ಕ ಬಂದ್ ಆಗಿದೆ. ರೈತಾಪಿ ಜನ ಪರದಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸತತವಾಗಿ ಸುರಿಯುತ್ತಿರುವ ಮಳೆಗೆ ಹಳ್ಳದ ಸೇತುವೆ ಕೊಚ್ಚಿ ಹೋಗಿ ತಾಲೂಕಿನ ಕಿಕ್ಕೇರಿ ಹೋಬಳಿ ಚೌಡೇನಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರದ ರಸ್ತೆ ಸಂಪರ್ಕ ಬಂದ್ ಆಗಿದ್ದು, ಇದರಿಂದ ಪರಿಣಾಮ ಗ್ರಾಮದ ಜನ ಸುಮಾರು 10 ಕಿ.ಮೀ ಬಳಸಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಗೊಂಡಿದೆ.

ಕೆ.ಆರ್.ಪೇಟೆ- ಚನ್ನರಾಯಪಟ್ಟಣದ ಮುಖ್ಯರಸ್ತೆಯ ಚಿಕ್ಕಳಲೆ ಗೇಟ್ ಬಳಿಯಿಂದ ಗ್ರಾಪಂ ಕೇಂದ್ರ ಚೌಡೇನಹಳ್ಳಿಗೆ ಬರುವ ರಸ್ತೆಯಿದೆ. ಈ ರಸ್ತೆಯಲ್ಲಿ ಹಳ್ಳವೊಂದು ಹರಿಯುತ್ತಿದೆ.

ಚೌಡೇನಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಈ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿದೆ. ಸತತ ಮಳೆಯಿಂದ ಕಿಕ್ಕೇರಿಯ ಅಮಾನಿಕೆರೆ ಭರ್ತಿಯಾಗಿ ಕೆರೆ ಕೋಡಿ ಮೂಲಕ ಹೆಚ್ಚುವರಿ ನೀರು ಈ ಹಳ್ಳದ ಮೂಲಕ ಹರಿದು ಹೋಗುತ್ತಿದೆ. ಇದೀಗ ಹಳ್ಳದ ಸೇತುವೆ ಕೊಚ್ಚಿ ಹೋಗಿರುವ ಕಾರಣ ಗ್ರಾಮದ ಸಂಪರ್ಕ ಬಂದ್ ಆಗಿದೆ. ರೈತಾಪಿ ಜನ ಪರದಾಡುತ್ತಿದ್ದಾರೆ.

ಕೆ.ಆರ್.ಪೇಟೆ, ಕಿಕ್ಕೇರಿ ಮುಂತಾದ ಕಡೆಗೆ ತಮ್ಮ ದೈನಂದಿನ ವ್ಯವಹಾರಗಳಿಗೆ ಬರಬೇಕಾದ ಜನ ಹತ್ತಾರು ಕಿ.ಮೀ ಬಳಸಿ ಬರಬೇಕಾಗಿದೆ. ಗ್ರಾಮದಿಂದ ಪೂರೈಕೆಯಾಗುವ ಹಾಲು ತೆಗೆದುಕೊಂಡು ಹೋಗುವ ಹಾಲಿನ ವ್ಯಾನ್ ಕೂಡ ನಿತ್ಯ ಹತ್ತಾರು ಕಿ.ಮೀ ಬಳಸಿ ಗ್ರಾಮಕ್ಕೆ ಬರುತ್ತಿದೆ.

ಗ್ರಾಮ ಪಂಚಾಯ್ತಿ ಬಂದ್:

ರಸ್ತೆ ಸಂಚಾರ ಕಡಿತಗೊಂಡಿರುವ ಕಾರಣ ಗ್ರಾಮ ಪಂಚಾಯ್ತಿಗೆ ಪಿಡಿಒ ಸೇರಿದಂತೆ ಯಾವುದೇ ಸಿಬ್ಬಂದಿ ಬರುತ್ತಿಲ್ಲ. ಇದರ ಪರಿಣಾಮ ಗ್ರಾಮ ಪಂಚಾಯ್ತಿ ಬಂದ್ ಆಗಿದೆ. ಕಳೆದ ಕೆಲ ದಿನಗಳಿಂದ ಗ್ರಾಪಂ ಆಡಳಿತ ಸಮರ್ಪಕವಾಗಿ ನಡೆಯುತ್ತಿಲ್ಲ.

ಸುತ್ತಿ ಬಳಸಿಯಾದರೂ ಸಾರ್ವಜನಿಕ ಹಿತದೃಷ್ಟಿಯಿಂದ ಪಿಡಿಒ ಗ್ರಾಮ ಪಂಚಾಯ್ತಿ ಕೇಂದ್ರಕ್ಕೆ ಬರಲೇಬೇಕು. ಆದರೆ, ಗ್ರಾಪಂ ಬಾಗಿಲು ತೆಗೆಯದ ಕಾರಣ ಸಾರ್ವಜನಿಕರ ಕೆಲಸಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ತಾಪಂ ಇಒ ಅಥವಾ ಜಿಪಂ ಮೇಲಧಿಕಾರಿಗಳಾಗಲೀ ಸಾರ್ವಜನಿಕರ ಹಿತದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಮಂಗಳವಾರ ಪ್ರತಿಭಟನೆ:

ಹಳ್ಳದ ಸೇತುವೆ ಕುಸಿತಗೊಂಡು ಗ್ರಾಮದ ಸಂಪರ್ಕ ಬಂದ್ ಆಗಿದ್ದರೂ ಸೇತುವೆ ಪುನರ್ ನಿರ್ಮಾಣದ ಬಗ್ಗೆ ನೀರಾವರಿ ಇಲಾಖೆ ಕ್ರಮ ವಹಿಸಿಲ್ಲ. ಹಳ್ಳದ ಸೇತುವೆ ಈ ಹಿಂದೆಯೇ ಶಿಥಿಲವಾಗಿದೆ. ಇದರ ಬಗ್ಗೆ ನೀರಾವರಿ ಇಲಾಖೆಗೆ ಹತ್ತಾರುಬಾರಿ ಮನವಿ ಪತ್ರ ಸಲ್ಲಿಸಿದ್ದರೂ ನೀರಾವರಿ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಅಹವಾಲನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಇದರ ಪರಿಣಾಮ ಈಗ ಹಳ್ಳದ ನೀರಿನಿಂದ ಸೇತುವೆ ಸಂಪೂರ್ಣ ನಾಶವಾಗಿದೆ. ಜನ ಸಂಚಾರಕ್ಕೆ ಅಡ್ಡಿಯಾಗಿದೆ. ಜನರ ಸಮಸ್ಯೆಗೆ ನೀರಾವರಿ ಇಲಾಖೆಯೇ ಸಂಪೂರ್ಣ ಜವಾಬ್ದಾರಿ ಎಂದು ಆರೋಪಿಸಿರುವ ಚೌಡೇನಹಳ್ಳಿ ಗ್ರಾಮದ ರೈತ ಮುಖಂಡ ನಾರಾಯಣಸ್ವಾಮಿ ಕಳೆದ ಹತ್ತಾರು ದಿನಗಳಿಂದ ಗ್ರಾಪಂ ಬಾಗಿಲು ಹಾಕಿದ್ದರೂ ತಾಪಂ ಇಒ ಇದರ ಬಗ್ಗೆ ಕ್ರಮವಹಿಸಿಲ್ಲ. ರಸ್ತೆ ಸಂಪರ್ಕ ಕಡಿತಗೊಂಡು ಜನಸಂಚಾರಕ್ಕೆ ಅಡಚಣೆಯಾಗಿದ್ದರೂ ತಾಲೂಕು ಆಡಳಿತ ಅಥವಾ ಜನ ಪ್ರತಿನಿಧಿಗಳಾಗಲೀ ಸಮಸ್ಯೆಯ ಪರಿಹಾರಕ್ಕೆ ಕ್ರಮ ವಹಿಸಿಲ್ಲ.

ಹಾಳಾಗಿರುವ ಸೇತುವೆಯನ್ನು ತಕ್ಷಣವೇ ಪುನರ್ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಬೇಜಾವ್ದಾರಿ ಪಿಡಿಒ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಅ.29 ರಂದು ಪಟ್ಟಣದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ.

Share this article