ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿರುವ ಸೂಚನೆಗಳ ಆಧಾರದಲ್ಲಿ ಶಾಲೆಗಳು ಪುನರಾರಂಭವಾಗಬೇಕಾಗಿದ್ದ ಮೇ 29 ಹಾಗೂ 30ರಂದು ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಪುನರಾರಂಭ ಎರಡು ದಿನ ಮುಂದೂಡಲಾಗಿದೆ. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಎರಡು ದಿನ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿರುವ ಸೂಚನೆಗಳ ಆಧಾರದಲ್ಲಿ ಶಾಲೆಗಳು ಪುನರಾರಂಭವಾಗಬೇಕಾಗಿದ್ದ ಮೇ 29 ಹಾಗೂ 30ರಂದು ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಎರಡು ದಿನಗಳನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವ ನಿಬಂಧನೆಗೆ ಒಳಪಟ್ಟು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಎಸ್ಎಸ್ಎಲ್ಸಿ ಪರೀಕ್ಷೆ ಎರಡು ಈಗಾಗಲೇ ನಿಗದಿಯಾಗಿರುವಂತೆ ನಡೆಯುತ್ತವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.ಕೊಡಗು ಜಿಲ್ಲೆಯಲ್ಲಿ, ಹೆಚ್ಚಿನ ಗಾಳಿ-ಮಳೆ ಮುಂದುವರಿದಿರುವುದರಿಂದ ಅಂಗನವಾಡಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ, ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಮುಂಜಾಗೃತಾ ಕ್ರಮವಾಗಿ ಮೇ 29 ಹಾಗೂ 30ರಂದು ಎರಡು ದಿನಗಳಿಗೆ ಸೀಮಿತವಾಗಿ ಅಂಗನವಾಡಿ ಕೇಂದ್ರಗಳಿಗೆ ರಜೆ ವಿಸ್ತರಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ಚೆಕ್ ವಿತರಣೆ:
ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲದಲ್ಲಿ ಭಾರಿ ಮಳೆಯಿಂದ ಮರ ಬಿದ್ದು ರೈತ ಬೆಳ್ಯಪ್ಪ ಮೃತಪಟ್ಟಿದ್ದು, ಬೆಳ್ಯಪ್ಪ ಕುಟುಂಬದವರಿಗೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಐದು ಲಕ್ಷ ರು. ಪರಿಹಾರ ಚೆಕ್ ವಿತರಿಸಿದರು.ಬಿಡುವು ನೀಡಿ ಆಗಾಗ್ಗೆ ಸುರಿದ ಮಳೆ:
ಕೊಡಗು ಜಿಲ್ಲಾದ್ಯಂತ ಬುಧವಾರ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ ಕೂಡ ಬಿಡುವು ನೀಡಿ ಆಗಾಗ್ಗೆ ಸುರಿಯಿತು. ಮಳೆಯಿಂದ ಜನರು ಪರದಾಡುವಂತಾಯಿತು.
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 62.67 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 65.83 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 34.30 ಮಿ.ಮೀ. ಮಳೆಯಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 42.27 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 121.45 ಮಿ.ಮೀ. ಮಳೆಯಾಗಿದೆ. ಕುಶಾಲನಗರ ತಾಲೂಕಿನಲ್ಲಿ 49.50 ಮಿ.ಮೀ. ಮಳೆಯಾಗಿದೆ.ಹೋಬಳಿ ವಿವರ : ಮಡಿಕೇರಿ ಕಸಬಾ 82, ನಾಪೋಕ್ಲು 66.80, ಸಂಪಾಜೆ 11, ಭಾಗಮಂಡಲ 103.50, ವಿರಾಜಪೇಟೆ 33.60, ಅಮ್ಮತ್ತಿ 35, ಹುದಿಕೇರಿ 66, ಶ್ರೀಮಂಗಲ 61, ಪೊನ್ನಂಪೇಟೆ 24, ಬಾಳೆಲೆ 18.07, ಸೋಮವಾರಪೇಟೆ 124, ಶನಿವಾರಸಂತೆ 124, ಶಾಂತಳ್ಳಿ 175, ಕೊಡ್ಲಿಪೇಟೆ 62.80, ಕುಶಾಲನಗರ 26, ಸುಂಟಿಕೊಪ್ಪ 73 ಮಿ.ಮೀ.ಮಳೆಯಾಗಿದೆ.ಹಾರಂಗಿಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2840.55 ಅಡಿಗಳು. ಕಳೆದ ವರ್ಷ ಇದೇ ದಿನ 2824.12 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 40.40 ಮಿ.ಮೀ., ಇಂದಿನ ನೀರಿನ ಒಳಹರಿವು 3852 ಕ್ಯುಸೆಕ್, ಕಳೆದ ವರ್ಷ ಇದೇ ದಿನ 230 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 100 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್.
ಕೊಡಗು ವಿವಿ ಅಡಿಯಲ್ಲಿರುವ ವಿದ್ಯಾಲಯಗಳಿಗೂ ರಜೆ
ಮಳೆ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲ ಘಟಕ, ಸರ್ಕಾರಿ ಹಾಗೂ ಸಂಯೋಜಿತ ಮಹಾವಿದ್ಯಾಲಯಗಳಿಗೆ ಮೇ 29 ಮತ್ತು 30ರಂದು ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ರಜೆ ಘೋಷಿಸಿ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಆದೇಶ ಹೊರಡಿಸಿದ್ದಾರೆ.