ಕನ್ನಡಪ್ರಭ ವಾರ್ತೆ ಜಮಖಂಡಿವಿದ್ಯಾರ್ಥಿಗಳು ಕೇವಲ ನೌಕರಿಗಳನ್ನು ಪಡೆಯಲು ಸಾಧನೆ ಮಾಡದೇ ಭವಿಷ್ಯದಲ್ಲಿ ಉದ್ಯೋಗಪತಿಗಳಾಗುವತ್ತ ಸಾಧನೆ ಮಾಡಿರಿ, ಉದ್ಯೋಗಿಗಳಾಗಿ ನೀವೇ ನೌಕರಿಗಳನ್ನು ಕೊಡುವ ಮಟ್ಟಿಗೆ ಬೆಳೆಯಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಜೆ.ಎಸ್.ನ್ಯಾಮಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಣಿಗ ಸಮಾಜ ಎಲ್ಲರ ಜೊತೆ ಸೇರಿ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಿದ್ದು ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಸುಮಾರು 166 ವಿದ್ಯಾರ್ಥಿಗಳು ಸನ್ಮಾನಿತರಾಗಿದ್ದಾರೆ. ಇವರಂತೆ ಉಳಿದ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ ಮಾತನಾಡಿ, ಸಮಾಜದ ಮಕ್ಕಳು ಇತರರಿಗೆ ಮಾದರಿಯಾಗಿ ಬೆಳೆಯಬೇಕು, ವಿದ್ಯಾರ್ಥಿನಿಯರು ಹೆಚ್ಚು ಸಂಖ್ಯೆಯಲ್ಲಿ ಸಾಧನೆ ಮಾಡಿದ್ದು ಖುಷಿ ತಂದಿದೆ. ಎಲ್ಲ ಮಕ್ಕಳು ಉತ್ತಮ ಸಾಧನೆ ಮಾಡಿ ಸಮಾಜದ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.ಸಮಾಜದ ಮುಖಂಡ ಎಂ.ಎನ್.ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್ಎಸ್ಎಲ್ಸಿ, ಪಿಯುಸಿ, ಸಿಬಿಎಸ್ಸಿ, ಎಲ್ಲ ಮಾಧ್ಯಮಗಳ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗದ ಮಕ್ಕಳನ್ನು ಗುರುತಿಸಿ ಸಮಾಜದ ದಾನಿಗಳಿಂದ ದೇಣಿಗೆ ಪಡೆದು ಸನ್ಮಾನ ಕಾರ್ಯಕ್ರಮ ಕಳೆದ 17 ವರ್ಷಗಳಿಂದ ನಡೆಯುತ್ತಿದೆ. ವಧು ವರರ ಸಮಾವೇಶ, ಸಮಾಜದ ಕಡು ಬಡವರಿಗೆ ಆರ್ಥಿಕ ಸಹಾಯ ಮುಂತಾದ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ್ದಸಿದ್ಧ ಮುತ್ಯಾ ಶ್ರೀಗಳು ಆಶೀರ್ವಚನ ನೀಡಿದರು. ಜಿ.ಎಸ್. ಕಡಕೋಳ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಕನ್ನಡ ಶಾಲೆಯ ಅಧ್ಯಕ್ಷ ಸಿದ್ದರಾಮ ಜಂಬಗಿ, ನೌಕರರ ಸಂಘದ ಅಧ್ಯಕ್ಷ ಜಗದೇವ ಪಾಸೊಡಿ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ನ್ಯಾಮಗೌಡ, ಉಪಾಧ್ಯಕ್ಷ ನಾಗಪ್ಪ ಮುತ್ತಕ್ಕನವರ, ಯುವ ಘಟಕದ ವಿರೇಂದ್ರ ಕಲೂತಿ, ಮಹಿಳಾ ಯುವ ಘಟಕದ ಅಧ್ಯಕ್ಷೆ ರಾಜಶ್ರೀ ನ್ಯಾಮಗೌಡ ಸೇರಿದಂತೆ ಸಮಾಜದ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.