ಕನ್ನಡಪ್ರಭ ವಾರ್ತೆ ಕೋಲಾರಶಿಕ್ಷಣದ ಹಕ್ಕು ಬಳಸಿಕೊಂಡು ಸಾಧಕರಾಗಿ ಹೊರಹೊಮ್ಮಿ, ಕಾನೂನುಗಳ ಅರಿವು ಪಡೆದು ಸಮಾಜಕ್ಕೆ ಕೊಡುಗೆ ನೀಡಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಕರೆ ನೀಡಿದರು. ನಗರದ ಕೀಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗಮನ ಮಹಿಳಾ ಸಮೂಹ ಸಂಸ್ಥೆಯಿಂದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದುಶ್ಚಟಗಳಿಂದ ದೂರವಿರಿ
ಬಾಲ್ಯವಿವಾಹ, ಮಾದಕ ವಸ್ತುಗಳ ನಿರ್ಮೂಲನೆ ,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದ ಅವರು, ಯುವಕರು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅರಿವುಂಟಾಗುವಂತೆ ಸಮಾಜಕ್ಕೆ ಸಂದೇಶಗಳನ್ನು ನೀಡುವಂತಾಗಬೇಕು ಎಂದರು.ಚಾಕೋಲೇಟ್ಗಳಲ್ಲಿ ಹೇರಾಯಿನ್, ಕೋಕಾ ಮುಂತಾದ ಅಮಲು, ನಿಶೆ ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಿ ಕೊನೆಗೆ ಅವರನ್ನು ಸಮಾಜಘಾತುಕ, ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವಂತೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ವಿಷಾದಿಸಿದರು. ಇದೇ ಸಂದರ್ಭದಲ್ಲಿ ಎನ್ಎಲ್ಎಸ್ಎ ಸಹಾಯವಾಣಿ ೧೫೧೦೦ ಬಳಕೆ ಕುರಿತು ನ್ಯಾಯಾಧೀಶರು ಮಾಹಿತಿ ನೀಡಿದರು.
ಪೊಷಕರಿಗೆ ಹೊರೆಯಾಗದಿರಿಜೀವನ ಅಮೂಲ್ಯವಾಗಿದ್ದು, ಬದುಕಿದ್ದಷ್ಟು ದಿನ ಸಮಾಜಕ್ಕೆ ಏನಾದರೂ ಮಾಡೋಣ ಆದರೆ ಸಮಾಜ ಘಾತಕರಾಗಿ ಸಮಾಜ ಮತ್ತು ಪೋಷಕರಿಗೆ ಹೊರೆಯಾಗಬಾರದು ಎಂದು ತಿಳಿಸಿ, ಬಿಟ್ಟು ದುಶ್ಚಟಗಳಿಗೆ ದಾಸರಾಗಿ ಇಡೀ ನಿಮ್ಮ ಜೀವನ ನಾಶಮಾಡಿಕೊಳ್ಳಲು ನೀವೇ ಕಾರಣರಾಗದಿರಿ ಎಂದು ಎಚ್ಚರಿಸಿದರು.ಮುಖ್ಯಶಿಕ್ಷಕಿ ಸರೋಜಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ತರಬೇತಿ ನೀಡುವುದು ನೀವು ಉತ್ತಮ ಜೀವನ ಪಡೆಯಿರಿ ಎಂದು, ಜತೆಗೆ ನೀವು ಕಾನೂನುಗಳ ಅರಿವು ಪಡೆದು ಅಪರಾಧ ಮುಕ್ತ ಸಮಾಜಕ್ಕೆ ನೆರವಾಗಿ ಎಂದರು.ಪ್ರತಿಜ್ಞಾವಿಧಿ ಬೋಧನೆ
ಇದೇ ಸಂದರ್ಭದಲ್ಲಿ ಬಾಲ್ಯವಿವಾಹ ತಡೆ ಕುರಿತು ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾಯಕ್ರಮದಲ್ಲಿ ಅರೆಕಾಲಿಕ ಸ್ವಯಂ ಸೇವಕರಾದ ಟಿ.ಎಲ್. ಅನಿತಾ, ಶಿಕ್ಷಕರಾದ ಕಲಾವತಿ, ಅನಿಲ್, ಲಕ್ಷ್ಮಕ್ಕ, ರತ್ನಬಾಯಿ, ಸ್ವಪ್ನ, ಮಂಜುಳಾ, ವಿಶ್ವನಾಥ್ ಇದ್ದರು.