ಕನ್ನಡಪ್ರಭ ವಾರ್ತೆ ಹಾಸನ
ನಗರದಲ್ಲಿ ಗಾಂಜಾ, ಡ್ರಗ್ಸ್ ಸೇರಿದಂತೆ ಇನ್ನಿತರೆ ಚಟುವಟಿಕೆ ನಡೆಸಲಾಗುತ್ತಿದ್ದು, ಇದಕ್ಕೆ ಯುವಕರು ಹಾಳಾಗುತ್ತಿದ್ದಾರೆ. ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಒಂದು ತಂಡ ರಚಿಸಿ ತಡೆಹಿಡಿಯಬೇಕು ಎಂದು ಯಂಗ್ ಇಂಡಿಯಾ ಯೂತ್ ಅಧ್ಯಕ್ಷ ಮೆಹರಾಜ್ ಪಾಷಾ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಹಾಸನ ನಗರದ ೮೦ ಫೀಟ್ ರಸ್ತೆ, ಚಿಕ್ಕಕಟ್ಟೆ ಫೀಲ್ಡ್, ಬಾಪೂಜಿ ಶಾಲೆ ಫೀಲ್ಡ್, ಚಿಪ್ಪಿನಕಟೆ ಶಾಲೆಯ, ಗದ್ದೆಹಳ್ಳ ಆವರಣದಲ್ಲಿ ಹಾಗೂ ಕೆ.ಆರ್. ಪುರಂನಲ್ಲಿ ಗಾಂಜಾ, ಡ್ರಗ್ಸ್, ಇಂಜೆಕ್ಷನ್ ಈ ರೀತಿಯ ಹಲವಾರು ನಶೆಯನ್ನು ಈಗಿನ ಯುವಕರು ಮಾಡುತ್ತಿದ್ದಾರೆ. ಇದನ್ನು ಕೇಳುವವರು ಯಾರೂ ಇಲ್ಲ. ಹಾಸನದಲ್ಲಿ ಡ್ರಗ್ಸ್ ಎಲ್ಲಿಂದ ಯಾವಾಗ ಬರುತ್ತದೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಈ ನಶೆ ಹೆಚ್ಚಾಗಿ ಹಲವು ಕಳ್ಳತನವಾಗುತ್ತಿದೆ. ನಿಂತಿರುವ ಗಾಡಿಗಳಿಗೆ ಬೆಂಕಿ ಹಾಕುತ್ತಿದ್ದಾರೆ. ಶಾಲೆಯ ಮಕ್ಕಳು ತಿರುಗಾಡಲು ತೊಂದರೆ ಆಗುತ್ತಿದೆ. ಇದನ್ನು ಕೇಳುವವರು ಯಾರು ಇಲ್ಲ. ಸಾರ್ವಜನಿಕರು ಯಾರು ಮುಂದೆ ಬಂದು ದೂರು ಕೊಡುತ್ತಿಲ್ಲ. ದೂರು ಮಾಡಲು ಹೋದರೆ ನಮ್ಮ ಮೇಲೆ ಶೋಷಣೆಯ ಕೇಸ್ ಮಾಡಿಸಲು ಮುಂದಾಗುತ್ತಾರೆ ಎಂದರು.
ಡ್ರಗ್ಸ್ ಸಪ್ಲೈ ಮಾಡುವ ತಂಡದಲ್ಲಿ ನಮ್ಮನ್ನು ಸೇರಿಸಿ ತೊಂದರೆ ಕೊಡ್ತಾರೆ ಎನ್ನುವ ಭಯವಿದೆ. ಹಾಸನ ನಗರದಲ್ಲಿ ಈ ಚಟುವಟಿಕೆ ಹೆಚ್ಚಾಗಿದೆ. ದಯಮಾಡಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆರಕ್ಷಕ ನಿರೀಕ್ಷಕರು ಇದರ ಬಗ್ಗೆ ಗಮನಹರಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಹಾಸನ ನಗರವು ಡ್ರಗ್ಸ್ ಮುಕ್ತ ಮಾಡಲು ಸಾಧ್ಯವಾಗುವುದಿಲ್ಲ. ಮತ್ತೆ ಹಲವಾರು ಸಣ್ಣ ಯುವಕರು ೧೫ ವರ್ಷ, ೧೬ನೇ ಯುವ ವಯಸ್ಸಿನ ಯುವಕರು ಹಾಳಾಗುತ್ತಿದ್ದಾರೆ. ಯುವಕರ ಭವಿಷ್ಯ ನಿಮ್ಮ ಕೈಲಿ ಇದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಯಾಜ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.