ರಬಕವಿ-ಬನಹಟ್ಟಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೇರದಾಳ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದು ಕೊಣ್ಣೂರರನ್ನು ಆಯ್ಕೆ ಮಾಡಿದ್ದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಾ.ಪದ್ಮಜೀತ ನಾಡಗೌಡ ಪಾಟೀಲ ನೇತೃತ್ವದ ನೂರಾರು ಕಾರ್ಯಕರ್ತರನ್ನು ಮರಳಿ ಪಕ್ಷಕ್ಕೆ ಕರೆತರುವ ವಿಚಾರದಲ್ಲಿ ಕಾರ್ಯಕರ್ತರ ಪರ-ವಿರೋಧ ಚರ್ಚೆಗಳು ನಡೆದು ಕೆಲಕಾಲ ಸಭೆಯಲ್ಲಿ ಗೊಂದಲ ಉಂಟಾಯಿತು.
ಪಕ್ಷದ ಮುಖಂಡ ನೇಮಣ್ಣ ಸಾವಂತನ್ನವರ ಮಾತನಾಡಿ, ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿದೆ. ಕಳೆದ ವಿಧಾನಸಭೆಯಲ್ಲಿ ತಪ್ಪು ತಡೆಗಳಾಗಿರಬಹುದು. ವಿಶ್ವಾಸಕ್ಕೆ ತಂದು ಪಕ್ಷದಿಂದ ದೂರ ಉಳಿದಿರುವ ಮುಖಂಡರ ನೇತೃತ್ವದ ಕಾರ್ಯಕರ್ತರ ಪಡೆ ವಾಪಸ್ ಪಕ್ಷಕ್ಕೆ ತಂದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಢ್ಯವಾಗಲಿದೆ ಎಂದರು.
ಇದೆಲ್ಲವನ್ನೂ ಅವಲೋಕಿಸಿದ ಜಿಲ್ಲಾಧ್ಯಕ್ಷ ನಂಜಯ್ಯನಮಠ, ಈ ಸಭೆಯಲ್ಲಿ ತೀರ್ಮಾಣಿಸುವ ಬದಲು ಮತ್ತೊಮ್ಮೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಸ್ಪಷ್ಟ ನಿರ್ಧಾರ ಕೈಗೊಳ್ಳೋಣವೆಂದು ಹೇಳಿ ಸಭೆ ಮೊಟಕುಗೊಳಿಸಿದರು.