ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕಾರ ಅಗತ್ಯ: ನ್ಯಾ. ಬಸವರಾಜ

KannadaprabhaNewsNetwork | Published : Mar 8, 2025 12:31 AM

ಸಾರಾಂಶ

Cooperation is necessary to eradicate child labor: Justice Basavaraj

-ಬಾಲ್ಯಾವಸ್ಥೆ, ಕಿಶೋರಾವಸ್ಥೆ ಅನಿಷ್ಠ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ

---

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರತಿಯೊಂದು ಇಲಾಖೆಯು ಕೈಜೊಡಿಸಿದಾಗ ಮಾತ್ರ ತಾಲೂಕಿನಾದ್ಯಂತ ಬಾಲಕಾರ್ಮಿಕ ಪದ್ಧತಿ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಸುರಪುರ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿಗಳು ಹಾಗೂ ಹೆಚ್ಚುವರಿ ನ್ಯಾಯಾಧೀಶರಾದ ಬಸವರಾಜ ಅವರು ಹೇಳಿದರು.

ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾದಲ್ಲಿ ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ ಕಾಯ್ದೆ 2016ರ ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಒಂದು ಹೆಜ್ಜೆ ಅಂಗವಾಗಿ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಿ, ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಜ.10ರಿಂದ ಮಾ.31ರವರೆಗೆ ರಕ್ಷಣಾ ಕಾರ್ಯಚರಣೆಗೆ ಸರ್ಕಾರದ ಪ್ರತಿಯೊಂದು ಇಲಾಖೆಯು ಕೈಜೊಡಿಸಿದಾಗ ಮಾತ್ರ ತಾಲೂಕಿನಾದ್ಯಂತ ಬಾಲಕಾರ್ಮಿಕ ಪದ್ಧತಿ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮತ್ತು ಸುರಪುರ ಕಾರ್ಮಿಕ ನಿರೀಕ್ಷಕ ಶಿವಪ್ಪ ಜಮಾದಾರ್ ಮಾತನಾಡಿದರು. ಈ ಸಂದರ್ಭದಲ್ಲಿ ನಗರದ ತಹಸೀಲ್ದಾರ್ ಕಾರ್ಯಾಲಯದಿಂದ ಸುರಪುರ ಮುಖ್ಯರಸ್ತೆ ಅಂಬೇಡ್ಕರ್ ವೃತ್ತದವರೆಗೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್‌ಗಳು ಮತ್ತು ಹೊಟೇಲ್‌ಗಳಲ್ಲಿ ಹಠಾತ್ ದಾಳಿ, ತಪಾಸಣೆ ನಡೆಸಿ 1 ಬಾಲಕಾರ್ಮಿಕ ಮತ್ತು 1 ಕಿಶೋರ ಕಾರ್ಮಿಕನನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು.

ತಪಾಸಣೆ, ಹಠಾತ್ ದಾಳಿ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಸಮಿತಿಯ ಜಿಲ್ಲಾ ಸದಸ್ಯರಾದ ನಿಂಗಣ್ಣ ಬುಡ್ಡ, ಬಲಭೀಮರಾಯ ದೇಸಾಯಿ, ಸಹಾಯಕ ಸರ್ಕಾರಿ ಅಭಿಯೋಜಕ ಸುರೇಶ ಪಾಟೀಲ್, ಯಂಕೋಬ್ ದೇಸಾಯಿ, ಸುರಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಂದಕುಮಾರ ಪಿ.ಕನ್ನಳ್ಳಿ, ವಕೀಲರಾದ ಮಲ್ಲಿಕಾರ್ಜುನ ಮಂಗಿಹಾಳ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಳಪ್ಪ ಎಸ್. ಒಂಟೂರ್, ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫ್ರಾನ್ಸಿಸ್ ಶಾಬು, ಶರಣಪ್ಪ, ಕಾರ್ಮಿಕ ಇಲಾಖೆಯ ಎಲ್.ಎನ್. ಚೌದರಿ, ರಮೇಶ್ ಕೆಲ್ಲೂರು, ಮಾರ್ಗದರ್ಶಿ ಸಂಸ್ಥೆಯ ಆಶಾ ಬೇಗಂ, ಚನ್ನಮ್ಮ ಇದ್ದರು.

---

ಫೋಟೊ: ಸುರಪುರ ತಾಲೂಕಿನ ಕಕ್ಕೇರಾದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ಎಂಬ ಅನಿಷ್ಠ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು.

7ವೈಡಿಆರ್22

Share this article