ಹರಪನಹಳ್ಳಿ: ತಾಲೂಕಿನ ಹೊಸಕೋಟೆ ಗ್ರಾಮದ ಸಹಕಾರ ಸಂಘದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯಕರ್ತರು ಸೋಮವಾರ ಸಹಕಾರ ಸಂಘದ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಅಖಿಲ ಭಾರತದ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ ಮಾತನಾಡಿ, ರೈತರ ಪಿಗ್ಮಿ ಠೇವಣಿ ಮತ್ತು ಸಾಲಗಾರರ ಸಾಲದ ಮೊತ್ತ ಒಂಬತ್ತು ತಿಂಗಳಿನಿಂದ ರೈತರಿಗೆ ನೀಡಬೇಕಾಗಿದ್ದ ಹಣವನ್ನು ಹಿಂದಿರುಗಿಸದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಲೆಮರೆಸಿಕೊಂಡಿದ್ದಾರೆ. ರೈತರ ಪಿಗ್ನಿದಾರ, ಠೇವಣಿದಾರರ ಹಣವನ್ನು ಹಿಂದಿರುಗಿಸುವವರೆಗೂ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರ ನೀಡಿದರೂ ಕಾರ್ಯದರ್ಶಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ಹಣ ಹಿಂದಿರುಗಿಸಿಲ್ಲ. ಈ ಹಣವನ್ನು ಹಿಂದಿರುಗಿಸುವವರೆಗೂ ನಿರಂತರ ಧರಣಿ ಮಾಡಲಾಗುವುದು ಎಂದು ತಿಳಿಸಿದರು.
ರೈತ ಮುಖಂಡ ಬೊಮ್ಮಲಿಂಗಪ್ಪ ಮಾತನಾಡಿ, ರೈತರ ಹಣವನ್ನು ದುರುಪಯೋಗ ಮಾಡಿಕೊಂಡು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಕಷ್ಟು ಆಸ್ತಿಗಳನ್ನು ಮಾಡಿದ್ದಾನೆ. ರೈತರು ಹಣ ಕೇಳಿದರೆ ನಾನು ಯಾವುದೇ ಹಣವನ್ನು ದುರುಪಯೋಗ ಪಡಿಸಿಕೊಂಡಿಲ್ಲ; ಸಂಘದಲ್ಲಿ ಇದೆ ಎಂದು ವಾದಿಸುತ್ತಾರೆ ಎಂದು ಹೇಳಿದರು.ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳವಾಗಿದೆ. ಈ ಹಿಂದಿನ ಆಡಳಿತ ಮಂಡಳಿಯವರ ಕಾಲಘಟ್ಟದಲ್ಲಿ ಅವ್ಯವಹಾರವಾಗಿದೆ. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅವ್ಯವಹಾರ ನಡೆದಿಲ್ಲ. ನೀವು ಕೊಟ್ಟಿರುವ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
ನಿರ್ದೇಶಕ ಕೆ.ಸಿದ್ದಲಿಂಗನಗೌಡ ಮಾತನಾಡಿ, ಈ ಸಹಕಾರ ಸಂಘದ ರೈತರಿಗೆ 2023-24ನೇ ಸಾಲಿನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿಗೆ ಮೂರು ಬಾರಿ ನೋಟಿಸ್ ನೀಡಿದ್ದು, ನಿಮ್ಮ ಹೋರಾಟಕ್ಕೆ ಸಂಘದ ಆಡಳಿತ ಮಂಡಳಿಯೂ ಸಂಪೂರ್ಣ ಬೆಂಬಲವನ್ನು ನೀಡುತ್ತವೆ. ಖಾಸಗಿ ಕಾರ್ಯಕ್ರಮಕ್ಕೆ ಗ್ರಾಮಕ್ಕೆ ಆಗಮಿಸಿದ ಹರಿಹರ ಶಾಸಕ ಬಿ.ಪಿ.ಹರೀಶ ಮನವಿ ಸ್ವೀಕರಿಸಿ ವಿಜಯ ನಗರ ಜಿಲ್ಲೆಯ ಸಹಕಾರಿ ಸಂಘಗಳ ಲೆಕ್ಕ ಪರಿಶೋಧಕರಿಗೆ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಅವರಗೆರೆಮನಿ ರುದ್ರಮುನಿ, ಬೂದಿಹಾಳ ಸಿದ್ದೇಶ, ಕಲ್ಲಳ್ಳಿ ಮಹೇಶ್, ಅಂಜನಪ್ಪ ಕೆ.ಎಂ., ಸಂತೋಷ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಜಾತಪ್ಪ, ಬಸವರಾಜ ಹೊಸ್ಮನೆ, ನಾಗರಾಜಪ್ಪ, ಹುಣಸಿಕಟ್ಟೆ ಮರುಳು ಸಿದ್ದಪ್ಪ ಪಾಲ್ಗೊಂಡಿದ್ದರು.