ದೇಶೀಯ ಬೀಜಗಳ ಸಂರಕ್ಷಣೆಯಿಂದ ವೆಚ್ಚ ಕಡಿತ-ಡಾ. ಗುರುಪ್ರಸಾದ

KannadaprabhaNewsNetwork | Published : Nov 13, 2024 1:32 AM

ದೇಶೀಯ ಬೀಜಗಳ ಸಂರಕ್ಷಣೆಯಿಂದ ರೈತರಿಗೆ ವೆಚ್ಚ ಕಡಿತಗೊಳಿಸಲು ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಗುರುಪ್ರಸಾದ ಹೇಳಿದರು.

ರಾಣಿಬೆನ್ನೂರು: ದೇಶೀಯ ಬೀಜಗಳ ಸಂರಕ್ಷಣೆಯಿಂದ ರೈತರಿಗೆ ವೆಚ್ಚ ಕಡಿತಗೊಳಿಸಲು ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಗುರುಪ್ರಸಾದ ಹೇಳಿದರು. ತಾಲೂಕಿನ ಜೋಯಿಸರಹರಳ್ಳಿ ಗ್ರಾಮದಲ್ಲಿ ಸ್ಥಳೀಯ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಹೈದ್ರಾಬಾದ್‌ನ ವಾಸ್ಸಾನ್ ಮತ್ತು ಸಹಜ ಸಮೃದ್ಧಿಯ ತಾಂತ್ರಿಕ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿದ್ದ ದೇಶೀಯ 13 ವಿಧದ ಬೆಂಡಿ ಮತ್ತು 22 ವಿಧದ ರಾಗಿ ಬೆಳೆಯ ಭಾಗವಹಿಸುವ ವೈವಿಧ್ಯ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರು ಆರೋಗ್ಯಕರ ಆಹಾರಕ್ಕಾಗಿ ಮತ್ತು ಹೆಚ್ಚಿನ ಪೌಷ್ಟಿಕಾಂಶಕ್ಕಾಗಿ ಧಾನ್ಯಗಳನ್ನು ಬಳಸುತ್ತಾರೆ ಎಂದರು.ಕೃಷಿ ಇಲಾಖೆಯ ಬತ್ತಿಕೊಪ್ಪ ಮಾತನಾಡಿ, ಸರ್ಕಾರ ಈಗ ಹೆಚ್ಚು ರೈತರನ್ನು ಪ್ರೋತ್ಸಾಹಿಸುತ್ತಿದೆ ಮತ್ತು ರೈತರ ಕೃಷಿ ವೆಚ್ಚವನ್ನು ಕಡಿತಗೊಳಿಸುತ್ತಿದೆ ಎಂದರು. ವನಸಿರಿ ಸಂಸ್ಥೆಯ ಎಸ್.ಡಿ. ಬಳಿಗಾರ ಮಾತನಾಡಿ, ನಮ್ಮ ಸಂಸ್ಥೆಯು ರೈತರ ಹಿತಕ್ಕಾಗಿ ದೇಶೀಯ ಬೀಜಗಳ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕಾಗಿ ಕೆಲಸ ಮಾಡುತ್ತಿದೆ. ದೇಶೀಯ ಬೀಜಗಳ ಪ್ರಯೋಗವನ್ನು ರೈತರ ಹಿತಕ್ಕಾಗಿ ಮಾಡುತ್ತಿದ್ದೇವೆ. ದೇಶೀಯ ಬೀಜಗಳ ಬ್ಯಾಂಕ್ ಪಾಲಿಸಿಯನ್ನು ಪ್ರಚಾರ ಮಾಡುತ್ತಿದ್ದೇವೆ. ಇದರಿಂದ ರೈತರ ಕೃಷಿ ವೆಚ್ಚ ಕಡಿಮೆಯಾಗುತ್ತದೆ ಮತ್ತು ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ ಹಾಗೂ ನಶಿಸುತ್ತಿರುವ ದೇಶಿಯ ಬೀಜಗಳನ್ನು ಸಂರಕ್ಷಣೆ ಹಾಗೂ ಸಾವಯವ ಕೃಷಿಗೆ ಒತ್ತು ನೀಡಿ ಮಣ್ಣು ನೀರು ಸಂರಕ್ಷಣೆ ಮಾಡಲು ನರೇಗಾ ಮೂಲಕ ರೈತರಿಗೆ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನ ಮಾಡಲು ಸಹಕಾರ ನೀಡುತ್ತದೆ ಎಂದರು.ರಾಗಿ ಮತ್ತು ಬೆಂಡಿಯ ಉತ್ತಮ ವೈವಿಧ್ಯಗಳ ಆಯ್ಕೆಯ ಬಗ್ಗೆ ಸಹಜ ಸಮೃದ್ಧಿಯ ನಿಶಾಂತ್ ತಿಳಿಸಿದರು. ತೋಟಗಾರಿಕಾ ಇಲಾಖೆಯ ಪರಶುರಾಮ್, ಕೃಷಿ ವಿಜ್ಞಾನ ಕೇಂದ್ರದ ಬೆಳೆ ವಿಜ್ಞಾನಿ ಸಿದ್ಧಗಂಗಮ್ಮ, ಬಸಮ್ಮ ರೈತರಿಗೆ ಅಗತ್ಯ ಮಾಹಿತಿ ನೀಡಿದರು ಸುಮಾರು 75 ರೈತರು, ಮಹಿಳಾ ಸ್ವ ಸಹಾಯ ಸಂಘದ ಪ್ರತಿನಿಧಿಗಳು , ಭೂಮಿಕಾ ರೈತರ ಉತ್ಪಾದಕರ ಸಂಘದ ಪ್ರತಿನಿಧಿಗಳು, ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.