ಮೂಲ್ಕಿ: ಹೊಸದಾಗಿ ಏಳನೇ ಮೇಳದೊಂದಿಗೆ ನ.16ರಿಂದ ತಿರುಗಾಟಕ್ಕೆ ಸಿದ್ಧವಾಗುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದತ ದಶಾವತಾರ ಯಕ್ಷಗಾನ ಮಂಡಳಿಯ ಹೊಸ ವೇಷಭೂಷಣಗಳು ತಯಾರಾಗಿವೆ.
ಜೂನ್ 15ರಿಂದ ಮಣಿ ಸಾಮಾನು, ಆಭರಣಗಳನ್ನು ತಯಾರಿಸುವ ಹನ್ನೆರಡು ಮಂದಿ ಕಲಾವಿದರು ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಉಲ್ಲಾನ್ ಡಾಬು ಸಪೂರಡಾಬು ಎದೆಪದಕ (ಕಿರೀಟ) ಪುಂಡು ಎದೆಪದಕ, ವೀರಗಸೆ-ಕಿರೀಟ, ವೀರಗಸೆ-ಪುಂಡು, ತೋಳುಕಟ್ಟು-ಕಿರೀಟ, ಕೈಕಟ್ಟು-ಕಿರೀಟ, ತೋಳುಕಟ್ಟು-ಪುಂಡು, ಕೈ ಕಟ್ಟು- ಪುಂಡು, ಕರ್ಣಪತ್ರ-ಕಿರೀಟ, ಕರ್ಣಪತ್ರ- ಪುಂಡು, ಭುಜಕಿರೀಟ, ಕೆನ್ನೆ ಹೂ ಕಿರೀಟ ಪುಂಡು, ಕಿರೀಟ, ಪಗಡಿ, ಕಿರಾತ ಪಗಡಿ, ದಂಬೆ, ಓಲೆ, ಧರ್ಮರಾಯ ಕಿರೀಟ, ಹನುಮಂತ ಕಿರೀಟ, ಕುತ್ತರಿ, ಭೀಮನಮುಡಿ, ಕೇಸರಿತಟ್ಟಿ, ತುರಾಯಿ, ಅಗಲ ಅಡ್ಡಿಗೆ, ಸಪೂರ ಅಡ್ಡಿಗೆ, ನಾಟಕೀಯ ಕಿರೀಟ, ಗೆಜ್ಜೆ, ನಾಟಕೀಯ ಪದಕ, ಜಾಲರಿಡಾಬು, ಪಗಡಿ ಹೀಗೆ ವಿವಿಧ ಮಣಿಸಾಮಾನು ತಯಾರಾಗಿವೆ. ಏಳನೆಯ ಮೇಳಕ್ಕೆ ಎಲ್ಲ ಹೊಸದಾಗಿ ವೇಷಭೂಷಣಗಳು ನಿರ್ಮಾಣವಾಗಿವೆ.ಇದಲ್ಲದೆ ಬಾಲುಮುಂಡು, ದಗಲೆ, ಇಜಾರು, ನಾಟಕೀಯ ನೆರಿ, ಚಂಡಮುಂಡರ ನೆರಿ, ಇತ್ಯಾದಿ ಮೇಳಗಳಿಗೆ ಬಟ್ಟೆಗಳನ್ನೂ ಮಾಡಲಾಗಿದೆ. ದೇವೀಮಾಹಾತ್ಮೆ ವೇಷಗಳಿಗೆ ಬೇಕಾದ ಬಟ್ಟೆಯ ಪರಿಕರಗಳು ಹೊಸದಾಗಿ ಮಾಡಲಾಗಿದೆ.ಪ್ರತಿ ಮೇಳಕ್ಕೆ ಪ್ರಭಾವಳಿ ಪೆಟ್ಟಿಗೆ, ವೇಷಧಾರಿಗಳ ಪೆಟ್ಟಿಗೆ, ಮಣಿಸಾಮಾನುಗಳ ದೊಡ್ಡ ಪೆಟ್ಟಿಗೆ, ಆಯುಧ ಮೆಟ್ಟಿಗೆ, ರಂಗಿನ ಪೆಟ್ಟಿಗೆ, ವೀರಗಾಸೆ ಪೆಟ್ಟಿಗೆ, ಕಿರೀಟ ಪೆಟ್ಟಿಗೆ, ಬೆಳ್ಳಿ ಬಂಗಾರ ಇರುವ ಪೆಟ್ಟಿಗೆ ಹೀಗೆ ಮರದ ಪೆಟ್ಟಿಗೆಗಳೂ ಹೆಸರುಗಳನ್ನು ಬರೆಯಿಸಿಕೊಳ್ಳಲು ಸಿದ್ಧವಾಗಿವೆ.ದೇವರಿಗೆ ಬಂಗಾರ, ಬೆಳ್ಳಿಯ ವಸ್ತುಗಳು:
ದೇವರ ಎರಡು ಬಂಗಾರದ ಕಿರೀಟಗಳು, ಬಂಗಾರದ ಸುದರ್ಶನ ಚಕ್ರ, ಬೆಳ್ಳಿಯ ಉಯ್ಯಾಲೆ, ದೇವರ ಬೆಳ್ಳಿಯ ಮಣೆ, ದೇವರ ಪೆಟ್ಟಿಗೆ, ಅಡ್ಡ ಹಲಗೆ, ಪ್ರಭಾವಳಿ, ಎರಡು ಸಿಂಹ, ಹೂವಿನ ಮಾಲೆ ಹೀಗೆ ಹದಿನೆಂಟು ಬಗೆ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ತಯಾರಾಗಿದ್ದು ಇವನ್ನೆಲ್ಲ ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ.