ಕನ್ನಡಪ್ರಭ ವಾರ್ತೆ ಕುಂದಾಪುರ
ದೇಶ ಸುಭೀಕ್ಷವಾಗಿರಬೇಕಾದರೆ, ಜನರು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅಗತ್ಯ ಇದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.ಅವರು ಮಂಗಳವಾರ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಿಜೆಪಿ ಪರ ರೋಡ್ ಶೋಗಳಲ್ಲಿ ಭಾಗವಹಿಸಿ ಮಾತನಾಡಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದವರು. ಯಾವುದೇ ಭ್ರಷ್ಟಾಚಾರದ ಕಳಂಕ ಇಲ್ಲದೆ ಇರುವ ರಾಜಕಾರಣಿಗಳು ಗೆಲ್ಲಬೇಕು. ಇಲ್ಲಿಯೂ ಕೋಟ ದೊಡ್ಡ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಈ ಬಾರಿಯ ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಅಭ್ಯರ್ಥಿಗಳು ಸಚಿವರ ಮನೆಯವರಾಗಿದ್ದಾರೆ. ಈ ರೀತಿಯ ಪರಿವಾರವಾದ ದೇಶದ ಇನ್ಯಾವ ರಾಜ್ಯದಲ್ಲಿಯೂ ಆಗಿಲ್ಲ ಎಂದ ಅವರು ಜನ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸುವ ಸಮಯ ಹತ್ತಿರವಾಗಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಯುವ ಮುಖಂಡ ಅಣ್ಣಾಮಲೈ ಅವರು ಇಲ್ಲಿಗೆ ಬಂದು ನಮ್ಮ ಅಭ್ಯರ್ಥಿಯ ಪರ ಮತಯಾಚನೆ ಮಾಡಿರುದು ಉಡುಪಿ ಜಿಲ್ಲೆಗೆ ಆನೆ ಬಲ ಬಂದಿದೆ ಎಂದರು.ಕುಂದಾಪುರ ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ ಶೆಟ್ಟಿ, ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್., ಸತೀಶ್ ಪೂಜಾರಿ ವಕ್ವಾಡಿ, ಅಭಿಯಾನ ಪ್ರಮುಖರಾದ ಸುಪ್ರಸಾದ ಶೆಟ್ಟಿ ಬೈಕಾಡಿ, ಶಂಕರ ಅಂಕದಕಟ್ಟೆ ಮೊದಲಾದವರು ಇದ್ದರು.
ಮಾಬುಕಳದಿಂದ ಕುಂದಾಪುರ ವರೆಗೆ ಸಾವಿರಾರು ಬೈಕ್ಗಳಲ್ಲಿ ಬಿಜೆಪಿ ಕಾರ್ಯಕರ್ತರು ರ್ಯಾಲಿಯಲ್ಲಿ ಆಗಮಿಸಿದ್ದರು. ನಂತರ ಅಣ್ಣಾಮಲೈ ಅವರು ಬ್ರಹ್ಮಾವರ ಹಾಗೂ ಹೆಬ್ರಿಯಲ್ಲಿಯೂ ರೋಡ್ ಶೋನಲ್ಲಿ ಭಾಗವಹಿಸಿ ಮತಯಾಚನೆ ನಡೆಸಿದರು.