ಕನ್ನಡಪ್ರಭ ವಾರ್ತೆ ಕೋಲಾರತಂಬಾಕು ಉತ್ಪನ್ನಗಳ ಮತ್ತು ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡುವ ಮೂಲಕ ಸ್ವಾಸ್ಥ್ಯಸಮಾಜದ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಹೇಳಿದರು.ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷಿದ್ಧ
ಶೈಕ್ಷಣಿಕ ಸಂಸ್ಥೆಗಳ ೧೦೦ ಗಜ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ಕಡ್ಡಾಯವಾಗಿ ಹಿಂಬದಿ ಮತ್ತು ಮುಂಬದಿ ಎರಡು ಬದಿಯಲ್ಲಿ ಶೇ.೮೫ರಷ್ಟು ಆರೋಗ್ಯಕರ ಎಚ್ಚರಿಕೆಯ ಚಿಹ್ನೆಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದು ತಿಳಿಸಿದರು.ತಂಬಾಕಿನಿಂದ ಮಾರಣಾಂತಿಕ ರೋಗ
ಆರೋಗ್ಯಕ್ಕೆ ಮಾರಕವಾಗಿ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳಿಗೆ ಕಾರಣವಾಗುವ ತಂಬಾಕು ಉತ್ಪನ್ನಗಳಿಂದ ದೂರವಿರಿ, ಸದೃಢ ಸಮಾಜ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಅಂಬೇಡ್ಕರ್ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯ ಮೇಲೆ ಉಂಟಾಗುವ ದುಷ್ಟಪರಿಣಾಮಗಳೆಂದರೆ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಧ್ವನಿ ಪೆಟ್ಟಿಗೆ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಕುರುಡುತನ, ಚರ್ಮವು ವಯಸ್ಸಾದಂತೆ ಕಂಡುಬರುವುದು, ದಂತಕ್ಷಯ ಉಂಟಾಗುತ್ತದೆ ಎಂದು ಎಚ್ಚರಿಸಿದರು.ತಂಬಾಕು ಬಳಸಬೇಡಿ
ಧೂಮಪಾನವು ಪುರುಷರಲ್ಲಿ ವೀರ್ಯ ಉತ್ಪತ್ತಿಯನ್ನು ಕಡಿಮೆ ಮತ್ತು ವಿಕೃತಿಗೊಳಿಸುತ್ತದೆ. ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗುವುದು. ಗ್ಯಾಂಗ್ರಿನ್, ಹೃದಯಾಘಾತ ಉಂಟಾಗುತ್ತದೆ. ಆದ್ದರಿಂದ ತಂಬಾಕು ಸೇವನೆಯಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.ತಂಬಾಕು ನಿಯಂತ್ರಣ ಘಟದಕ ಆಪ್ತ ಸಮಾಲೋಚಕ ಮಹಮದ್ ಮಾತನಾಡಿ, ಔಷದೋಪಚಾರ, ಮಾನಸಿಕ ಬೆಂಬಲ, ಸಲಹೆ ಮತ್ತು ಸಹಕಾರ, ಅನುಪಾಲನೆ, ಮಾನಸಿಕ ಆರೋಗ್ಯದ ಚಿಕಿತ್ಸೆಗಾಗಿ ತಮ್ಮನ್ನು ಸಂಪರ್ಕಿಸಲು ಕೋರಿದರು.ಪ್ರತಿಜ್ಞಾ ವಿಧಿ ಬೋಧನೆಕಾಯಕ್ರಮದಲ್ಲಿ ಕೋಟ್ಪಾ ಮತ್ತು ಎನ್ಡಿಪಿಎಸ್ ಕಾಯಿದೆ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಸಂಚಾಲಕ ಡಾ. ರಂಗನಾಥಯ್ಯ, ಕಾಲೇಜಿನ ಕಾನೂನು ಅರಿವು ಸಮಿತಿಯ ಡಾ.ಗೋಪಾಲ, ರೋವರ್ಸ್ ಸಂಚಾಲಕ ಡಾ.ಎನ್.ಸುಬ್ರಮಣಿ, ಜಿಲ್ಲಾ ತಂಬಾಕು ನಿಯತ್ರಣ ಘಟಕದ ಸಮಾಲೋಚಕ ಮಹಮದ್ ಇದ್ದರು.