ಕೆಂಬಾಳೆ, ತೊಗರಿ, ಸಿರಿಧಾನ್ಯಗಳಿಗೆ ಮಾರುಕಟ್ಟೆ ಕಲ್ಪಿಸಿ: ಪ್ರಿಯಾಂಕ್‌ ಖರ್ಗೆ

KannadaprabhaNewsNetwork |  
Published : Dec 21, 2023, 01:15 AM IST
ಫೋಟೋ- 20ಜಿಬಿ9 ಮತತು 20ಜಿಬಿ10ಕಲಬುಗಿಯಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯ ನೋಟಗಳು | Kannada Prabha

ಸಾರಾಂಶ

ಕಲಬುರಗಿಯ ಕಮಲಾಪೂರದಲ್ಲಿ ಬೆಳೆಯುವ ಕೆಂಬಾಳೆ, ಏಶಿಯಾದಲ್ಲಿಯೆ ಗುಣಮಟ್ಟದಿಂದ ಕೂಡಿರುವ ಇಲ್ಲಿ ಬೆಳೆಯುವ ತೊಗರಿ, ಸಿರಿಧಾನ್ಯ ಸೇರಿದಂತೆ ಕೃಷಿ, ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತ ವೇದಿಕೆ ಮತ್ತು ಬ್ಯಾಂಡಿಂಗ್ ಗೆ ಎಕ್ಸಿಲೆನ್ಸ್ ಸೆಂಟರ್ ಸ್ಥಾಪನೆಗೆ ಮುಂದಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯ ಕಮಲಾಪೂರದಲ್ಲಿ ಬೆಳೆಯುವ ಕೆಂಬಾಳೆ, ಏಶಿಯಾದಲ್ಲಿಯೆ ಗುಣಮಟ್ಟದಿಂದ ಕೂಡಿರುವ ಇಲ್ಲಿ ಬೆಳೆಯುವ ತೊಗರಿ, ಸಿರಿಧಾನ್ಯ ಸೇರಿದಂತೆ ಕೃಷಿ, ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತ ವೇದಿಕೆ ಮತ್ತು ಬ್ಯಾಂಡಿಂಗ್ ಗೆ ಎಕ್ಸಿಲೆನ್ಸ್ ಸೆಂಟರ್ ಸ್ಥಾಪನೆಗೆ ಮುಂದಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಯಾವ ರಾಜ್ಯದಲ್ಲಿಯೂ ಇರದ ಕೃಷಿ, ತೋಟಗಾರಿಕೆ, ಪಶುಸಂಗೋನೆ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು ಇಲ್ಲಿ ಹೆಚ್ಚಿವೆ. ಇವೆಲ್ಲದರ ಸಹಕಾರ ಪಡೆಯಬೇಕು. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಬ್ರ್ಯಾಂಡಿಂಗ್ ಗೆ ಸರ್ಕಾರ, ಕೆ.ಕೆ.ಆರ್.ಡಿ.ಬಿ. ಮಂಡಳಿ ಎಲ್ಲಾ ರೀತಿಯ ನೆರವು ನೀಡಲಿದೆ. ಡಿಟೇಲ್ ಪ್ರಾಜೆಕ್ಟ್‌ಪ್ಜಕ್ಟ್ ರಿಪೋರ್ಟ್ ದೊಂದಿಗೆ ಬನ್ನಿ ಎಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬುಧವಾರ ಇಲ್ಲಿ ನಡೆದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಚರ್ಚೆ ವೇಳೆಯಲ್ಲಿ ಮಾತನಾಡಿದ ಅವರು ಕಳೆದ ಕೋವಿಡ್ ಸಮದರ್ಭದಲ್ಲಿ ಬಹಳಷ್ಟು ರೈತರು ಮಾರುಕಟ್ಟೆ ಇಲ್ಲದೆ ಸಂಕಟಕ್ಕೆ ಒಳಗಾಗಿದ್ದರು. ಮುಂದೆ ಹೀಗಾಗಬಾರದು. ಏನಾದರು ವಿನೂತನ ಪ್ರಯತ್ನ ಮಾಡಿ. ಇದರಿಂದ ರೈತರ ಆದಾಯ ದ್ವಿಗುಣವಾಗಬೇಕು ಎಂದರು.

ಇತ್ತೀಚೆಗೆ ತೆಲಂಗಾಣಕ್ಕೆ ಹೋಗಿದ್ದಾಗ ಇಲ್ಲಿನ ತೊಗರಿ ಅಲ್ಲಿ ಮೂರು ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಂಸ್ಕರಣೆ, ಮಾರುಕಟ್ಟೆಗೆ ವೇದಿಕೆ ಕಲ್ಪಿಸಿದಲ್ಲಿ ನಮ್ಮ ರೈತರ ಆದಾಯ ವೃದ್ಧಿ ಜೊತೆಗೆ ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಆಳಂದ, ಕಲಬುರಗಿ ಸೇರಿದಂತೆ ಜಿಲ್ಲೆಯ ಅವಶ್ಯಕತೆ ಇದ್ದ ಕಡೆ ತೋಟಗಾರಿಕೆ ಬೆಳೆ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು. ಶಾಸಕ ಎಂ.ವೈ.ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶ ವಿಸ್ತರಣೆ ಆಗುತ್ತಿಲ್ಲ. ಯಾವುದೇ ಕ್ರಿಯಾತ್ಮಕ ಚಟುವಟಿಕೆ ಇಲಾಖೆಯಿಂದ ಕಂಡುಬರುತ್ತಿಲ್ಲ ಎಂದರು.

ತೋಟಗಾರಿಕೆ ಇಲಾಖೆಯಲ್ಲಿ ಬೋಗಸ್‌ ಬಿಲ್‌ ಹಾವಳಿ: ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಫಲಾನುಭವಿಗಳ ಆಯ್ಕೆ ಪಾರರ್ದರ್ಶಕತೆ ನಡೆಯುತ್ತಿಲ್ಲ, ಭೋಗಸ್ ಬಿಲ್ಲು ಪಾವತಿ ಆಗುತ್ತಿದೆ ಎಂಬ ಅರೋಪ ಕೇಳಿಬಂದಿದ್ದು, ಇದಕ್ಕೆಲ್ಲ ಕಡಿವಾಣ ಹಾಕಬೇಕು. ಇದು ಪುನರಾವರ್ತನೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ: ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, ಮುಂದಿನ‌ ವರ್ಷ 2024-25ನೇ ಸಾಲಿನಲ್ಲಿ ರೈತರ ಹಿತಕಾಯುವ ನಿಟ್ಟಿನಲ್ಲಿ ಕೃಷಿ ವಲಯಕ್ಕೆ ಮಂಡಳಿ ಹೆಚ್ಚಿನ ಒತ್ತು ನೀಡಲು ಹೆಚ್ಚಿನ‌ ಅನುದಾನ ಮೀಸಲಿರಿಸಲು ಚಿಂತನೆ ನಡೆದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.62 ರಷ್ಟು ಕೃಷಿ ಅವಲಂಬನೆ ಇದೆ. ಪ್ರದೇಶದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಿನ‌ ಒಂದು ತಿಂಗಳೊಳಗೆ ಕೃಷಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಡಿ.ಪಿ.ಆರ್. ಸಲ್ಲಿಸಬೇಕೆಂದರು.

ಶಾಸಕರಾದ ಬಿ.ಆರ್.ಪಾಟೀಲ, ಎಂ.ವೈ.ಪಾಟೀಲ, ಕನೀಜ್ ಫಾತಿಮಾ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಅಲ್ಲಮಪ್ರಭು ಪಾಟೀಲ, ಎಂಎಲ್‌ಸಿ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ್, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕಾರಾಗೃಹದಲ್ಲಿ ಆರೋಪಿಗಳಿಗೆ ರಾಜಾತಿಥ್ಯ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ವಿವಿಧ ಪ್ರಕರಣದಲ್ಲಿ ಬಂಧನಕ್ಕೊಳಗಾದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಅರೋಪ ಕೇಳಿಬರುತ್ತಿದ್ದು, ಈ ಕುರಿತು ನಾಳೆಯೊಳಗೆ ಸಮಗ್ರ ವರದಿ ಸಲ್ಲಿಸವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ ಕುಮಾರ ಮತ್ತು ಎಸ್.ಪಿ. ಅಡ್ಡೂರು ಶ್ರೀನುವಾಸಲು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಖಡಕ್ ಸೂಚನೆ ನೀಡಿದರು.ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅರಂಭವಾಗುತ್ತಿದ್ದಂತೆ, ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ರಂಗನಾಥ ಅವರನ್ನು ಜೈಲಿನಲ್ಲಿ ಏನು ನಡಿತಾ ಇದೆ. ಅಕ್ರಮವಾಗಿ ಗುಟಕಾ ಪೂರೈಸಲಾಗುತ್ತಿದೆಯಂತೆ ಎಂದು ಪ್ರಶ್ನಿಸಿದರು. ಇದೆಲ್ಲದಕ್ಕು ಕಡಿವಾಣ ಹಾಕಬೇಕು. ಯಾವುದೇ ಅಕ್ರಮ ಚಟುಚಟಿಕೆ ಜೈಲು ಅಡ್ಡವಾಗಬಾರದು. ಅಲ್ಲಿನ ಸಿ.ಸಿ.ಟಿ.ವಿ. ಫೂಟೇಜ್ ತರಸಿ ಎಂದು ಸೂಚಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ