ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬಯಲಾಟದ ಭಾಗವತ ಸಿದ್ದಪ್ಪ ದಳವಾಯಿಗೆ ಮನ್ನಣೆ

KannadaprabhaNewsNetwork | Updated : Nov 01 2023, 01:03 AM IST

ತಾಯಿ ಗಂಗಮ್ಮ ಸಹ ಶೋಭಾನೆ ಹಾಡುಗಾರ್ತಿಯಾಗಿದ್ದರಿಂದ ಹೆತ್ತವರ ಜಾನಪದ ಕಲೆಯ ಸ್ಫೂರ್ತಿಯಿಂದ ಬಾಲ್ಯದಿಂದಲೇ ಬಯಲಾಟದ ಕಡೆ ದಳವಾಯಿ ಸಿದ್ದಪ್ಪ ಆಕರ್ಷಿತರಾಗಿದ್ದರು.

ಭೀಮಣ್ಣ ಗಜಾಪುರ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಅಲಕ್ಷಿತ ಹಂಡಿ ಜೋಗಿ ಸಮುದಾಯದ ಸಿದ್ದಪ್ಪ ದಳವಾಯಿ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ತಾಲೂಕಿನಲ್ಲಿ ಅಲ್ಲದೇ ಅಖಂಡ ಬಳ್ಳಾರಿ ಜಿಲ್ಲೆಯ ಜನತೆಗೆ ಕಲಾವಿದರಿಗೆ ಸಂಭ್ರಮದ ಕ್ಷಣವಾಗಿದೆ.

ಉತ್ತರ ಕರ್ನಾಟಕದ ಬಯಲಸೀಮೆಯ ಪ್ರಸಿದ್ಧಿ ರಂಗಕಲೆಯಾದ ಬಯಲಾಟಕ್ಕೆ ನೀಡಿದ ಆಮೋಘ ಸೇವೆಯನ್ನು ಪರಿಗಣಿಸಿ ಈ ಬಾರಿ ಕನ್ನಡ ರಾಜೋತ್ಸವ ಪ್ರಶಸ್ತಿಯನ್ನು ಕುಗ್ರಾಮದ ಕಲಾವಿದನೊಬ್ಬನಿಗೆ ನೀಡುವ ಮೂಲಕ ನಿರ್ಲಕ್ಷಿತ ಸಮುದಾಯಗಳ ಸಾಧಕರನ್ನು ಗೌರವಿಸಿದಂತಾಗಿದೆ.

ತಾಲೂಕಿನ ಬಿಷ್ಣಹಳ್ಳಿ ಗ್ರಾಮದ ಸಿದ್ದಪ್ಪ ದಳವಾಯಿ ಅವರು 1951ರಲ್ಲಿ ಜನಿಸಿದರು. 4 ನೇತರಗತಿವರಿಗೆ ವಿದ್ಯಾಭ್ಯಾಸ ಕಲಿತರು. ತಂದೆ ದಳವಾಯಿ ರಾಮಪ್ಪ ಬಯಲಾಟ ಮತ್ತು ಸಮುದಾಯದ ವೃತ್ತಿಯಾಗಿ ಜೋಗಿ ಪದಗಳ ಕಲಾವಿದರಾಗಿದ್ದರು. ತಾಯಿ ಗಂಗಮ್ಮ ಸಹ ಶೋಭಾನೆ ಹಾಡುಗಾರ್ತಿಯಾಗಿದ್ದರಿಂದ ಹೆತ್ತವರ ಜಾನಪದ ಕಲೆಯ ಸ್ಫೂರ್ತಿಯಿಂದ ಬಾಲ್ಯದಿಂದಲೇ ಬಯಲಾಟದ ಕಡೆ ದಳವಾಯಿ ಸಿದ್ದಪ್ಪ ಆಕರ್ಷಿತರಾಗಿದ್ದರು.

ಹೆತ್ತವರೇ ಸ್ಫೂರ್ತಿ:

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಬಿಷ್ಣಹಳ್ಳಿ ಗ್ರಾಮದ ಬಡ ಕೃಷಿಕರಾದ ಸಿದ್ದಪ್ಪ ದಳವಾಯಿಯ ಸಿದ್ದಪ್ಪನವರು ೧೫ನೇ ವಯಸ್ಸಿನಲ್ಲಿ ಬಯಲಾಟದಲ್ಲಿ ಸ್ತ್ರೀ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಪ್ರವೇಶ ಮಾಡಿದರು. ಮೊದಲು ದ್ರೌಪದಿ ವಸ್ತ್ರಾಭರಣ ನಾಟಕದಲ್ಲಿ ಗಾಂಧಾರಿ ಪಾತ್ರ, ಮೋಹಿನಿ ಭಸ್ಮಾಸುರ ನಾಟಕದಲ್ಲಿ ಭಸ್ಮಾಸುರನಾಗಿ, ಶ್ರೀದೇವಿ ಮಹಾತ್ಮೆ ನಾಟಕದಲ್ಲಿ ಶಂಭರಾಸುರ ಪಾತ್ರಧಾರಿಯಾಗಿದ್ದರು. ಅಲ್ಲದೆ, ಹಂಡಿಜೋಗಿ ಸಮುದಾಯದ ಜೋಗಿ ಪದಗಳ ಹಾಡುಗಾರಿಕೆಯ ನಿಸ್ಸಿಮರಾದರು.

ಭಾಗವತರಾಗಿ ಸೇವೆ:

ಸಿದ್ದಪ್ಪ ದಳವಾಯಿವರು 18ನೇ ವಯಸ್ಸಿನಲ್ಲಿ ಹಿರಿಯ ಭಾಗವತರಾದ ಚಿಕ್ಕಪ್ಪ ಸಣ್ಣರಾಮಪ್ಪ ಜತೆಯಾಗಿ ಮೊದಲು ಹಿನ್ನೆಲೆ ಗಾಯಕರಾಗಿ ರಂಗಪ್ರವೇಶ ಮಾಡಿದರು. ನಂತರ ಮೊದಲ ಬಾರಿಗೆ ದುಶ್ಯಾಸನ ನಾಟಕದ ಮೂಲಕ ಭಾಗವತರಾಗಿ ಕಲಾಸೇವೆ ಪ್ರಾರಂಭಿಸಿದರು. ಬಯಲಾಟದ ಮೇಸ್ಟ್ರಾಗಿ ಅನಕ್ಷರಸ್ಥ ಕಲಾವಿದರನ್ನು ಕೂಡಿಸಿ ಬಯಲಾಟ ಕಲಿಸಿದ ಕೀರ್ತಿ ಸಿದ್ದಪ್ಪನವರಿಗೆ ಸಲ್ಲುತ್ತದೆ.

200ಕ್ಕೂ ಪ್ರಯೋಗ:

ಇವರು ಬಯಲಾಟ ಮೇಸ್ಟ್ರಾಗಿ ದುಶ್ಯಾಸನ, ವೀರ ಅಭಿಮನ್ಯು ಕಾಳಗ, ಕರ್ಣಾರ್ಜುನ ಕಾಳಗ, ಶ್ರೀದೇವಿ ಮಹಾತ್ಮೆ, ವಿರಾಟ ಪರ್ವ, ನುಂಕಮಲ್ಲೇ ಸಿದ್ದೇಶ್ವರ ಮಹಾತ್ಮೆ, ಕನಕಾಂಗಿ ಕಲ್ಯಾಣ, ಬಬ್ರುವಾಹನ ಕಾಳಗ, ಇಂದ್ರ ಐರಾವತ, ಲಕ್ಷಣಿ ಸ್ವಯಂವರ, ಇಂದ್ರಜಿತು ಕಾಳಗ, ಕೌಡ್ಲಿಕನ ವಧೆ, ಮೋಹಿನಿ ಭಸ್ಮಾಸುರ, ಕಾಳಾಸುರನ ವಧೆ, ಶಂಭರಾಸುರ, ದುಶ್ಯಾಸನ ವಧೆ, ದುರ್ಯೋಧನ ಗರ್ವಭಂಗ ಸೇರಿದಂತೆ ಹಲವು ಬಯಲಾಟಗಳನ್ನು ವಿಜಯನಗರ, ದಾವಣಗೆರೆ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ಹಬ್ಬಹರಿದಿನಗಳ ಅನಕ್ಷರಸ್ಥ ಕಲಾವಿದರಿಗೆ ನಾಟಕ ಕಲಿಸುವ ಮೂಲಕ 200ಕ್ಕೂ ನಾಟಕಕ್ಕೆ ಭಾಗವತರಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು.

ಗೌರವ:

ಸಿದ್ದಪ್ಪ ದಳವಾಯಿ ಬಯಲಾಟ ಕಲಾಸೇವೆ ಗುರುತಿಸಿ ಬಳ್ಳಾರಿ ಜಿಲ್ಲಾ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯು ಕಲಾವಿದರ ಮಾಸಾಶನ ನೀಡುತ್ತದೆ. ಅಲ್ಲದೆ, ಸರ್ಕಾರಿ ಕಾರ್ಯಕ್ರಮ ಅಹ್ವಾನ ನೀಡುತ್ತಾ ಬಂದಿದೆ. 72ರ ಇಳಿವಯಸ್ಸಿನ ಸಿದ್ದಪ್ಪ ದಳವಾಯಿಗೆ ರಾಜೋತ್ಸವ ಪ್ರಶಸ್ತಿ ಬಂದಿರುವುದು ಮತ್ತೆ ಅಧುನಿಕ ಭರಾಟೆಯಲ್ಲಿ ಅವಾಸನದ ಹಂಚಿನಲ್ಲಿರುವ ಬಯಲಾಟಕ್ಕೆ ಬೆಲೆ ಬಂದಂತಾಗಿದೆ.

ಸಂತೋಷ ಆಗ್ತಿದೆ:

ಹೆತ್ತವರು ಮತ್ತು ಚಿಕ್ಕಪ್ಪನವರು ಜೋಗಿ ಪದಗಳ ಗಾಯಕರಾಗಿದ್ದು, ಅವರ ಸ್ಫೂರ್ತಿಯಿಂದ ನಾನು ಮೊದಲು ಜೋಗಿ ಪದಗಳನ್ನು ಹಾಡುತ್ತಾ ಹತ್ತಾರು ಹಳ್ಳಿ ಸುತ್ತಿರುವೆ. ನಂತರ ಬಯಲಾಟ ಕಡೆ ಅಸಕ್ತಿ ಬಂತು. ಪ್ರಶಸ್ತಿ ಬಂದಿರುವ ಮಾಹಿತಿ ತಿಳಿದು ತುಂಬ ಸಂತೋಷ ಆಗ್ತಿದೆ ಎಂದರು ಸಿದ್ದಪ್ಪ ದಳವಾಯಿ.