ಬೆಳೆ ಸಮೀಕ್ಷೆ ಕಾರ್ಯ, ನಿಖರ ಮಾಹಿತಿ ನಮೂದಿಸಿ: ಪ್ರಶಾಂತಕುಮಾರ್ ಮಿಶ್ರಾ

KannadaprabhaNewsNetwork |  
Published : Sep 04, 2024, 01:49 AM IST
ಬೆಳೆ ಸಮೀಕ್ಷೆಯ ಕುರಿತು ಬಳ್ಳಾರಿ ಜಿಲ್ಲೆಯ ತಹಶೀಲ್ದಾರರ ಜೊತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ವಿಡೀಯೋ ಸಂವಾದ ಸಭೆ ನಡೆಸಿದರು.  | Kannada Prabha

ಸಾರಾಂಶ

ಬೆಳೆ ಸಮೀಕ್ಷೆ ಪ್ರಕ್ರಿಯೆಯನ್ನು ಮೊಬೈಲ್ ಆ್ಯಪ್‌ ಬಳಸಿ ಮಾಡಲಾಗುತ್ತಿದ್ದು, ಗ್ರಾಮ ನಕಾಶೆ ಅಳವಡಿಸಿರುವುದರಿಂದ ಆಯಾ ತಾಲೂಕಿನ ಗಡಿ ರೇಖೆಯೊಳಗೆ ಹೋಗಿ ಜಿಪಿಎಸ್ ನಿಖರತೆ ಪಡೆದು ಛಾಯಾಚಿತ್ರದೊಂದಿಗೆ ಬೆಳೆಯ ವಿವರಗಳನ್ನು ದಾಖಲು ಮಾಡಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಳ್ಳಾರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಚಾಲ್ತಿಯಲ್ಲಿದ್ದು, ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರು ರೈತರ ಜಮೀನು ಬೆಳೆಗಳ ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು. ಇದಕ್ಕೆ ಆಯಾ ತಾಲೂಕು ತಹಸೀಲ್ದಾರರು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ಬೆಳೆ ಸಮೀಕ್ಷೆಯ ಕುರಿತು ಮಂಗಳವಾರ ಜಿಲ್ಲೆಯ ತಹಸೀಲ್ದಾರರೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು. ಬೆಳೆ ಸಮೀಕ್ಷೆ ಪ್ರಕ್ರಿಯೆಯನ್ನು ಮೊಬೈಲ್ ಆ್ಯಪ್‌ ಬಳಸಿ ಮಾಡಲಾಗುತ್ತಿದ್ದು, ಗ್ರಾಮ ನಕಾಶೆ ಅಳವಡಿಸಿರುವುದರಿಂದ ಆಯಾ ತಾಲೂಕಿನ ಗಡಿ ರೇಖೆಯೊಳಗೆ ಹೋಗಿ ಜಿಪಿಎಸ್ ನಿಖರತೆ ಪಡೆದು ಛಾಯಾಚಿತ್ರದೊಂದಿಗೆ ಬೆಳೆಯ ವಿವರಗಳನ್ನು ದಾಖಲು ಮಾಡಬೇಕು. ಆಯಾ ತಾಲೂಕಿನಲ್ಲಿ ಎಲ್ಲ ಬೆಳೆಗಳ ವಿವರಗಳನ್ನು ಕಡ್ಡಾಯವಾಗಿ ದಾಖಲು ಮಾಡಬೇಕು ಎಂದು ಅವರು ತಿಳಿಸಿದರು.

ತಾಲೂಕು ಮಟ್ಟದ ಸಮಿತಿಯ ಮೂಲಕ ಬೆಳೆ ಸಮೀಕ್ಷೆ ಚಟುವಟಿಕೆ ನಡೆಸಲು ಗ್ರಾಮವಾರು ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರನ್ನು ನೇಮಿಸಬೇಕು. ಅವರಿಗೆ ಅಗತ್ಯ ತರಬೇತಿ ನೀಡಬೇಕು ಎಂದು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಎಲ್ಲ ವಿಧದ ಬೆಳೆಗಳು ಮತ್ತು ಮಿಶ್ರ ಬೆಳೆಗಳ ಮಾಹಿತಿ ನಮೂದಿಸಬೇಕು. ಇದಕ್ಕೆ ರೈತರ ಸಹಕಾರ ಪಡೆಯಬೇಕು ಎಂದು ತಿಳಿಸಿದರು.

ಬೆಳೆ ಸಮೀಕ್ಷೆಯ ಕಾರ್ಯ ಸೆ. 31ರ ವರೆಗೆ ನಡೆಯಲಿದ್ದು, ಗ್ರಾಮವಾರು ಪಟ್ಟಿ ಮಾಡಿಕೊಂಡು ಗುರಿ ನಿಗದಿಪಡಿಸಿ ಪೂರ್ಣಗೊಳಿಸಬೇಕು. ಆಯಾ ತಹಸೀಲ್ದಾರರು ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಡಾ. ಸೋಮಸುಂದರ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ 3.50 ಲಕ್ಷ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಗುರಿ ನಿಗದಿಯಾಗಿದೆ. ಬಳ್ಳಾರಿ ತಾಲೂಕಿನಲ್ಲಿ 1,21,488, ಕಂಪ್ಲಿ ತಾಲೂಕಿನಲ್ಲಿ 42,507, ಕುರುಗೋಡಿನಲ್ಲಿ 54,093, ಸಂಡೂರು ತಾಲೂಕಿನಲ್ಲಿ 50,134 ಹಾಗೂ ಸಿರುಗುಪ್ಪ ತಾಲೂಕಿನಲ್ಲಿ 1,33,054 ತಾಕುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿದ್ದು, ಪ್ರಸ್ತುತ 86,177 ತಾಕುಗಳಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು, ಬೆಳೆ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ಅವರು ಸಭೆಗೆ ತಿಳಿಸಿದರು.

ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಬೆಳೆ ನಷ್ಟ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಪಹಣಿಯಲ್ಲಿ ಬೆಳೆ ನಮೂದು ಮಾಡಲು, ಬೆಳೆ ವಿಮಾ ಯೋಜನೆ, ಬೆಳೆ ಸಾಲ ಇತ್ಯಾದಿ ಸೌಲಭ್ಯ ಒದಗಿಸಲು ಬಳಸಲಾಗುವುದು.

ರೈತರು ತಮ್ಮ ಬೆಳೆಗಳ ಮಾಹಿತಿ ನಮೂದು ಮಾಡಬಹುದು. ಒಂದು ವೇಳೆ ಸ್ವತಃ ರೈತರೆ ತಮ್ಮ ಬೆಳೆ ದಾಖಲು ಮಾಡಲು ಗೊಂದಲವಿದ್ದಲ್ಲಿ ಗ್ರಾಮಕ್ಕೆ ನಿಯೋಜಿಸಿರುವ ಖಾಸಗಿ ನಿವಾಸಿ (ಪಿ.ಆರ್.)ಗಳನ್ನು ಸಂಪರ್ಕಿಸಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಪಿ.ಆರ್. ಆ್ಯಪ್ ಮೂಲಕ ದಾಖಲಿಸಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಎಎಸ್ಪಿ ನವೀನ್ ಕುಮಾರ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!