ವಿಶೇಷ ವರದಿ
ಗದಗ: ಮುಳ್ಳು, ಕಡ್ಡಿ, ಕೆಸರುಗಳಿಂದ ಗೂಡು ಕಟ್ಟುತ್ತಿದ್ದ ಕಾಗೆಗಳು ಇಂದು ತಂತಿಗಳ ಮೂಲಕ ಗೂಡು ನಿರ್ಮಿಸಿದ ಅಪರೂಪದ ಪ್ರಕರಣ ಜಿಲ್ಲೆಯ ನರಗುಂದದಲ್ಲಿ ಪತ್ತೆಯಾಗಿದೆ.ನರಗುಂದದ ಹಳೆ ಎಪಿಎಂಸಿ ಆವರಣದಲ್ಲಿರುವ ಜ್ಞಾನ ಮುದ್ರಾ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ತೆಂಗಿನ ಮರವೊಂದರಲ್ಲಿ ಶಾಲೆಯ ನಿರ್ದೇಶಕ ಶಿವಪ್ರಕಾಶ ಹೊಸಕೇರಿಮಠರವರು ತೆಂಗಿನ ಮರದಿಂದ ಒಣಗಿದ ತೆಂಗಿನ ಕಾಯಿ ಕೀಳುವ ಸಂದರ್ಭದಲ್ಲಿ ತಂತಿಯಿಂದ ನಿರ್ಮಿತವಾದ ಕಾಗೆಯ ಗೂಡು ಕಂಡು ಬಂದಿದೆ.
ಏಪ್ರಿಲ್ದಿಂದ ಜುಲೈವರೆಗೂ ಕಾಗೆಗಳು ಸಂತಾನಭಿವೃದ್ಧಿ ಕಾಲಾವಧಿಯಾಗಿದ್ದು, ತೆಂಗಿನ ಮರದಲ್ಲಿ ದೊರೆತ ಈ ಗೂಡು ಕಳೆದ ವರ್ಷದ ಸಂತಾನ ಋತುವಿನಲ್ಲಿ ನಿರ್ಮಿತವಾಗಿದ್ದು, ಕಾಗೆಗಳು ಒಮ್ಮೆ ನಿರ್ಮಿಸಿದ ಗೂಡುಗಳನ್ನು ಪುನಃ ಬಳಸದೆ ಮುಂದಿನ ಸಂತಾನ ಋತುವಿಗೆ ಹೊಸಗೂಡು ನಿರ್ಮಿಸುವುದರಿಂದ ಈ ವಿಶೇಷ ಗೂಡನ್ನು (850ಗ್ರಾಂ) ತೆರವುಗೊಳಿಸಿ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿರಿಸಲಾಗಿದ್ದು, ಶಾಲೆಯ ಕಿರಣ ಚಿಕ್ಕಮಠ, ವಿ.ಜಿ. ಮಮಟಗೇರಿ ರಕ್ಷಣೆಗೆ ವಿಶೇಷ ಗಮನ ನೀಡಿದ್ದಾರೆ.ಹಲವಾರು ಅಪನಂಬಿಕೆ: ಹಿಂದೂ ಸಂಪ್ರದಾಯದ ಪ್ರಕಾರ ಪಿತೃಪಕ್ಷದಲ್ಲಿ ಕಾಗೆಗೆ ವಿಶೇಷವಾದ ಗೌರವ ಇದೆ. ಪಿತೃತರ್ಪಣ ಸಮಯದಲ್ಲಿ ಪೂಜಾವಿಧಿಗಳ ನಡುವೆ ಮೊದಲ ಭೋಜನ ಕಾಗೆಗೆ ನೀಡಲಾಗುತ್ತದೆ. ಪುರಾಣ ಕಥೆಗಳ ಪ್ರಕಾರ ಸೂರ್ಯ ಶನಿ ದೇವರನ್ನು ಕೊಲ್ಲಲೆಂದು ಶನಿ ಇರುವ ಇಡಿ ಕಾಡಿಗೆ ಬೆಂಕಿ ಹಾಕಿದನು. ಆದರೆ ಕಾಗೆಯು ಬೆಂಕಿಯಿಂದ ಶನಿ ದೇವನನ್ನು ಕಾಪಾಡಿದ್ದರಿಂದ ಅಂದಿನಿಂದ ಶನಿದೇವರಿಗೆ ಕಾಗೆ ಪ್ರಿಯವಾಗಿ ಶನಿ ದೇವನ ವಾಹನ ವಾಯಿತೆಂದು ನಂಬಿಕೆಯೂ ಇದೆ.
ಬದಲಾದ ಪರಿಸರಕ್ಕೆ ಹೊಂದಾಣಿಕೆ: ಬಾಲ್ಯದಲ್ಲಿ ಪಠ್ಯಪುಸ್ತಕದಲ್ಲಿ ಬಾಯಾರಿದ ಬುದ್ಧಿವಂತ ಕಾಗೆ ಬಗ್ಗೆ ಕಥೆಯನ್ನು ಓದದವರಿಲ್ಲ, ನಗರಿಕರಣದಿಂದಾಗಿ ಮರಗಳ ಸಂಖ್ಯೆ ಕಡಿಮೆ ಆಗುತ್ತಿರುವ ಕಾರಣದಿಂದಾಗಿ ಕಾಗೆಗಳು ಬದಲಾದ ಪರಿಸರಕ್ಕೆ ಎಷ್ಟು ಹೊಂದಿಕೊಂಡಿವೆ ಎನ್ನುವುದಕ್ಕೆ ಸುಮಾರು ವರ್ಷಗಳ ಪಕ್ಷಿಗಳ ಗೂಡು ನಿರ್ಮಿಸುವ ಕೌಶಲ್ಯಗಳ ಅಧ್ಯಯನದಿಂದ ತಿಳಿದು ಬಂದಿದೆ.ರಾಜ್ಯದ ವಿವಿಧ ಭಾಗಗಳಲ್ಲಿ ಗೋಚರಿಸಿದ ಸಂಗತಿ ಎಂದರೆ ಕಾಗೆಗಳು ಗೂಡು ನಿರ್ಮಿಸಲು ಸಾಮಾನ್ಯವಾಗಿ ಗಿಡಮರಗಳ ಕಟ್ಟಿಗೆ ತುಂಡುಗಳನ್ನು ಬಳಸುವ ಬದಲು ಕಟ್ಟಡ ನಿರ್ಮಾಣ ಮಾಡಲು ಬಳಸುವ ಲೋಹದ ತಂತಿಗಳಿಂದ ಗೂಡುಗಳ ನಿರ್ಮಾಣ ಮಾಡುವ ಪ್ರವೃತ್ತಿಗೆ ತಮ್ಮನ್ನು ತಾವು ಹೊಂದಾಣಿಕೆ ಮಾಡಿಕೊಂಡಿವೆ. ಸೂಕ್ತ ಕಡ್ಡಿಗಳು ದೊರಕದ ಪರಿಣಾಮವೋ ಅಥವಾ ಗೂಡು ಸುಭದ್ರವಾಗಿರುತ್ತದೆಂಬ ಕಾರಣದಿಂದಾಗೆ ಕಾಗೆಗಳು ಸೆಂಟ್ರಿಂಗ್ ಕಾಮಗಾರಿಗೆ ಬಳಸುವ ಸಣ್ಣ ಸಣ್ಣ ಕಬ್ಬಿಣ ತಂತಿಗಳಿಂದ ತನ್ನ ಗೂಡುಗಳನ್ನು ನಿರ್ಮಿಸಿರುವುದ ವಿಚಿತ್ತವಾದರೂ ಸತ್ಯ. ರಾಜ್ಯದ ಬೇರೆ ಬೇರೆ ಭಾಗದಲ್ಲಿ ಕಾಗೆಗಳು ಕಬ್ಬಿಣದ ತಂತಿಗಳಿಂದ ಕಟ್ಟಿದ ಗೂಡುಗಳು 800 ಗ್ರಾಂ ನಿಂದ 1500ಗ್ರಾಂ ವರೆಗಿನ ತೂಕವಿರುವುದು ಕಂಡು ಬರುತ್ತವೆ ಎನ್ನುತ್ತಾರೆ ಪಕ್ಷ ತಜ್ಞರು.
ಕಾಗೆ ಸಾಮರ್ಥ್ಯಕ್ಕೆ ಸಾಕ್ಷಿ: ಕಾಗೆಗಳು ಸಾಮಾನ್ಯವಾಗಿ ಕಟ್ಟಿಗೆಗಳಿಂದ ಗೂಡು ನಿರ್ಮಿಸುತ್ತವೆ. ಕೆಲವು ಸಂದರ್ಭದಲ್ಲಿ ಗೂಡು ನಿರ್ಮಿಸಲು ಕಟ್ಟಿಗೆಗಳು ದೊರಕದಿದ್ದಾಗ ಈ ರೀತಿ ಲೋಹದ ತಂತಿಗಳಿಂದ ಗೂಡನ್ನು ನಿರ್ಮಿಸುವುದು ಸಾಮಾನ್ಯವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ತಂತಿಗಳಿಂದ ನಿರ್ಮಿಸಿದ ಗೂಡಗಳನ್ನು ಗಮನಿಸಿರುವೆ. ಅಂಟಾರ್ಟಿಕಾ ಹೊರತು ಪಡಿಸಿ ವಿಶ್ವದ ಎಲ್ಲ ಭಾಗಗಲ್ಲಿ ಕಾಗೆಗಳು ಹಂಚಿಕೆಯಾಗಿದ್ದು ಇದು ಕಾಗೆಗಳು ಪರಿಸರಕ್ಕೆ ಹೊಂದಾಣಿಕೆಯಾಗುವ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ಹೇಳುತ್ತಾರೆ.