ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿ.ಟಿ.ರವಿ ಪದ ಬಳಕೆ ಮಾಡಿರುವ ಯಾವುದೇ ದಾಖಲೆಗಳು ಇಲ್ಲ ಎಂದು ರೂಲಿಂಗ್ ಕೊಟ್ಟಿದ್ದಾರೆ. ಪೊಲೀಸರು ಬಂಧಿಸಿದ್ದು ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯ ಮೇಲೆ ಘನತೆ ಧಕ್ಕೆಯಾಗಿರುವುದು ಗಂಭೀರವಾಗಿ ಇರುವ ಆರೋಪ. ಇದು ಸಂಪೂರ್ಣ ತನಿಖೆಯಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಎಫ್ಎಸ್ಎಲ್ಗೆ ಕಳುಹಿಸಿ ಪರೀಕ್ಷೆಯಾಗಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಒತ್ತಾಯಿಸಿದರು.ಸಭಾಪತಿ ರೂಲಿಂಗ್ ಕೊಟ್ಟ ಮೇಲೂ ಸಿ.ಟಿ.ರವಿ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ಸೌಧದ ಒಳಗಡೆ ನುಗ್ಗಿ ಗೂಂಡಾವರ್ತನೆ ಮಾಡಿದ್ದಾರೆ. ಸಿ.ಟಿ.ರವಿ ಮಾಜಿ ಸಚಿವ, ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ಪೊಲೀಸರು ಹೊತ್ತಾಕ್ಕೊಂಡು ಹೋಗಿ ಬಾಗಲಕೋಟೆ, ಗದಗ, ರಾಮದುರ್ಗ ಎಲ್ಲಾ ಕಡೆ ರಾತ್ರಿಯಿಡೀ ಆತಂಕವಾದಿಗಳ ರೀತಿ ಸುತ್ತಾಡಿಸಿದ್ದು ಸರ್ಕಾರ ನಡೆದುಕೊಂಡ ರೀತಿ ಖಂಡನಾರ್ಹ ಎಂದು ವಾಗ್ದಾಳಿ ನಡೆಸಿದರು.ಸರ್ಕಾರ ಪೊಲೀಸರ ಮೂಲಕ 410ಕ್ಕೂ ಕಿಮೀ ರಾತ್ರಿಯಿಡೀ ಸಿ.ಟಿ ರವಿಯನ್ನು ಸುತ್ತಾಡಿಸಿ ಪೊಲೀಸರು ದಬ್ಬಾಳಿಕೆ ಮಾಡಿ ದೌರ್ಜನ್ಯ ನಡೆಸುವುದು ಖಂಡನೀಯ. ಸಿ.ಟಿ.ರವಿ ಬಂಧನ ಮಾಡಿರುವ ಕುರಿತು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡುವ ಕರೆ ನೀಡಲಾಗಿದೆ. ಹಿಂದೆಂದೂ ಕೂಡ ನಮ್ಮ ರಾಜ್ಯದಲ್ಲಿ ದೇಶದಲ್ಲಿ ಇಂಥ ಘಟನೆ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿ.ಟಿ.ರವಿಗೆ ತಲೆಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ವಕೀಲರು, ವಿಪಕ್ಷ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ಕಾರ್ಯಕರ್ತರು ಭೇಟಿಗೆ ಅವಕಾಶ ಕೊಡದೆ ದೌರ್ಜನ್ಯ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು.