ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಕೈಗಾರಿಕೋದ್ಯಮ ಆರಂಭಕ್ಕೆ ಬಹಳಷ್ಟು ಅವಕಾಶವಿವೆ. ಇಂದಿನ ಯುವಕರು ಉದ್ಯೋಗ ಅರಸಿ ಬೇರೆಡೆ ಹೋಗದೆ, ಉದ್ಯಮಿಯಾಗಿ ಇತರರಿಗೆ ಉದ್ಯೋಗ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಾನು ಉದ್ಯಮಿಯಾಗಿ ಉದ್ಯೋಗ ನೀಡುಬೇಕು ಎಂಬ ತತ್ವ ಅಳವಡಿಸಿಕೊಂಡವನು. ಉದ್ಯಮಿಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕೈಗಾರಿಕೋದ್ಯಮಿ ರಾಜಕಾರಣಿ, ಟ್ರೇಡರ್ ಆಗಲು ಗಾಡ್ಫಾದರ್ ಬೇಕಾಗಿಲ್ಲ. ನಮ್ಮಲ್ಲಿನ ಯೋಚನೆಗಳು ಬದಲಾಗಬೇಕು. ಈ ನಿಟ್ಟಿನಲ್ಲಿ ಮುಂದೆ ಸಾಗಬೇಕು ಎಂದರು.
ಹುಬ್ಬಳ್ಳಿ ಉತ್ತರ ಕರ್ನಾಟಕದ ಗೇಟ್ವೇ ಆಫ್ ಇಂಡಿಯಾ ಇದ್ದಂತೆ. ನನಗೆ ಬಾಗಲಕೋಟೆಗಿಂತ ಹೆಚ್ಚು ಪ್ರೀತಿ ಹುಬ್ಬಳ್ಳಿಯ ಮೇಲಿದೆ. ಹಾಗಾಗಿಯೇ ನನ್ನ ಷಷ್ಟ್ಯಬ್ದ ಮೊದಲ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿರುವುದು ಸಂತಸ ತಂದಿದೆ. ಇಲ್ಲಿಯವರ ಋಣವನ್ನು ನಾನು ಎಂದಿಗೂ ತೀರಿಸಲಾಗದು ಎಂದರು.ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲೇ ''''''''ಆತ್ಮನಿರ್ಭರ ಭಾರತ'''''''' ಆರಂಭಿಸಿದ್ದರು. ಸ್ವಾವಲಂಬನೆ ಎಂದರೆ ಏನು ಎಂಬುದನ್ನು ಅಂದಿನ ಕಾಲದಲ್ಲೇ ತೋರಿಸಿಕೊಟ್ಟಿದ್ದಾರೆ. ನೂರು ವರ್ಷದ ಹಿಂದೆ ಟಾಪ್ ಟೆನ್ ಶ್ರೀಮಂತರಲ್ಲಿ ಮೈಸೂರಿನ ಮಹಾರಾಜರಿದ್ದರು. ನಮ್ಮ ರಾಜ್ಯದಲ್ಲಿರುವ ಅವಕಾಶ, ಸೌಲಭ್ಯ, ಯುವ ಸಮುದಾಯ, ಗುಜರಾತ್, ಉತ್ತರಪ್ರದೇಶ ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿಲ್ಲ. ಆದರೂ ಅದನ್ನು ಸದುಪಯೋಗ ಪಡಿಸಿಕೊಳ್ಳದೆ ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆ. ಉದ್ಯಮಿಗಳು ಕೈಗಾರಿಕಾ ಸೌಲಭ್ಯ ಪಡೆದು ತಮ್ಮ ಪ್ರದೇಶದಲ್ಲಿಯೇ ಉದ್ಯಮ ಆರಂಭಿಸುವಂತೆ ಸಲಹೆ ನೀಡಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಪ್ರೊ. ಅಶೋಕ ಶೆಟ್ಟರ್ ಮಾತನಾಡಿದರು. ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿಕಾಸ ಸೊಪ್ಪಿನ, ಅಶೋಕ ಗಡದ ಸೇರಿದಂತೆ ಹಲವರಿದ್ದರು.