ಯುವಕರಿಗೆ ಸಂಸ್ಕಾರ, ಸನ್ನಡತೆ, ಶಿಕ್ಷಣ ಮುಖ್ಯ: ಪ್ರಭಾಕರ ಬೋಧಲೆ ಮಹಾರಾಜ

KannadaprabhaNewsNetwork |  
Published : Nov 21, 2025, 02:15 AM IST
ಕಾರ್ಯಕ್ರಮದಲ್ಲಿ ಪ್ರಭಾಕರ (ದಾದಾ) ಬೋಧಲೆ ಮಹಾರಾಜರು ಮಾತನಾಡಿದರು. | Kannada Prabha

ಸಾರಾಂಶ

ಯುವಕರು ಕೇವಲ ಮನೆ, ಸಮಾಜಕ್ಕೆ ಮಾತ್ರವಲ್ಲ ದೇಶಕ್ಕೆ ಆಸ್ತಿ. ಇಂತಹ ಯುವ ಜನಾಂಗವನ್ನು ದುಶ್ಚಟಗಳಿಂದ ದೂರವಿರಿಸಿ ಸದೃಢವಾಗಿ ಬೆಳೆಸಬೇಕು.

ಗದಗ: ಸ್ಪರ್ಧಾತ್ಮಕ ಇಂದಿನ ಆಧುನಿಕ ದಿನಮಾನಗಳಲ್ಲಿ ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಧರ್ಮದ ಹಾದಿಯಲ್ಲಿ ಮುನ್ನಡೆಸುವ ಮೂಲಕ ಅವರಿಗೆ ಒಳ್ಳೆಯ ಸಂಸ್ಕಾರ ಸನ್ನಡತೆ ರೂಢಿಸಬೇಕು. ಸಂಸ್ಕಾರ-ಸನ್ನಡತೆ ಇಲ್ಲದಿದ್ದರೆ ಶಿಕ್ಷಣಕ್ಕೆ ನೆಲೆ ಬೆಲೆ ಇಲ್ಲ ಎಂದು ಶ್ರೀ ಕ್ಷೇತ್ರ ಪಂಢರಾಪುರದ ಪ್ರಭಾಕರ (ದಾದಾ) ಬೋಧಲೆ ಮಹಾರಾಜರು ಹೇಳಿದರು.

ನಗರದ ವಿಠ್ಠಲ ಮಂದಿರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ 729ನೇ ಸಂಜೀವಿನಿ ಸಮಾಧಿ ನಿಮಿತ್ತ ದಿಂಡಿ ಸೋಹಳಾ ಉತ್ಸವದ ಅಂಗವಾಗಿ ಜರುಗಿದ ಕಾಲಾಕೀರ್ತನೆಯಲ್ಲಿ ಅವರು ಮಾತನಾಡಿದರು.

ಯುವಕರು ಕೇವಲ ಮನೆ, ಸಮಾಜಕ್ಕೆ ಮಾತ್ರವಲ್ಲ ದೇಶಕ್ಕೆ ಆಸ್ತಿ. ಇಂತಹ ಯುವ ಜನಾಂಗವನ್ನು ದುಶ್ಚಟಗಳಿಂದ ದೂರವಿರಿಸಿ ಸದೃಢವಾಗಿ ಬೆಳೆಸಬೇಕು. ಯು ಎಂದರೆ ಯುಧಿಷ್ಠಿರನಲ್ಲಿದ್ದಂತಹ ನೀತಿ, ವ ಎಂದರೆ ವಶಿಷ್ಠನಲ್ಲಿದ್ದಂತಹ ಜ್ಞಾನ ಕ ಎಂದರೆ ಗಾನ, ಕೇಳು ಎಂದರ್ಥ. ಇವೆಲ್ಲವೂ ಸಮ್ಮಿಳಿತಗೊಂಡು ‘ಯುವಕ’ ಎಂದು ಅರ್ಥೈಸಬಹುದಾಗಿದೆ ಎಂದು ಹೇಳಿದರು.

ಶಿಕ್ಷಣ ಪಡೆದ ಎಲ್ಲರೂ ಸರ್ಕಾರಿ ಉದ್ಯೋಗ ಪಡೆಯಲಾಗದು, ಅವಕಾಶ ವಂಚಿತರು ಎದೆಗುಂದದೆ ಅಲ್ಪ ಬಂಡವಾಳದೊಂದಿಗೆ ಸ್ವಂತ ಉದ್ಯೋಗ ಆರಂಭಿಸಿ ಹಂತ ಹಂತವಾಗಿ ಅದರಲ್ಲಿ ಹೊಸತನವನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದರು.

ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವವರಿಗೆ ದೇವರು ಎಂದಿಗೂ ಕೈ ಬಿಡುವುದಿಲ್ಲ, ಅವರಿಗೆ ಭವಿಷ್ಯದಲ್ಲಿ ಫಲ ಪ್ರಾಪ್ತಿಯಾಗುವುದು ನಿಶ್ಚಿತ. ಆದ್ದರಿಂದ ಎಲ್ಲರೂ ಧರ್ಮವಂತರಾಗಿ, ಕಾಯಕ ಮಾಡಿ, ದಾಸೋಹ, ಧರ್ಮ ಕಾರ್ಯ ಮಾಡಿ ಎಂದರು.

ಕಾಲಾಕೀರ್ತನೆ ಬಳಿಕ ಆರತಿ ಮಹಾ ಪ್ರಸಾದ ಜರುಗಿತು. ಸಂಜೆ ದಿಂಡಿಯು ನಗರ ಪ್ರದಕ್ಷಿಣೆಯ ಆನಂತರ ದೇವಸ್ಥಾನಕ್ಕೆ ಮರಳಿತು. ಆರತಿ, ಮಹಾಪ್ರಸಾದ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ