ಕುಂದಾಪುರ: ಕುಂದಾಪ್ರ ಕನ್ನಡದ ಅಸ್ಮಿತೆಯ ಉಳಿವು ಅದರ ಬಳಕೆಯಲ್ಲಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ನಮ್ಮ ಮೂಲ ಸಂಸ್ಕೃತಿ, ಆಚಾರ, ವಿಚಾರ ಮತ್ತು ಭಾಷೆ ಅತ್ಯಂತ ಸಂಪದ್ಭರಿತ ಆಸ್ತಿ. ಹಣ ಸಂಪತ್ತನ್ನು ಯಾವಾಗ ಬೇಕಾದರೂ ಸಂಪಾದಿಸಬಹುದು. ಆದರೆ ಸಂಸ್ಕೃತಿಯು ಯಾವುದೇ ಬೆಲೆಬಾಳುವ ಆಸ್ತಿಗಿಂತಲೂ ಮೌಲ್ಯಯುತವಾದುದು ಎಂದು ಕಿರುತೆರೆ ನಿರ್ದೇಶಕ - ನಟ ಚೇತನ್ ನೈಲಾಡಿ ಹೇಳಿದರು.
ವಿದ್ಯಾರ್ಥಿಗಳು ಕುಂದಾಪ್ರ ಕನ್ನಡದಲ್ಲಿ ಕವನ ವಾಚನ ಮಾಡಿದರು. ಆಸಾಡಿ ಹಬ್ಬದ ಕುರಿತಂತೆ ಕುಂದಾಪುರ ಕನ್ನಡದ ಕಿರು ನಾಟಕವನ್ನು ಪ್ರಸ್ತುತಪಡಿಸಿ ಸಭಿಕರ ಮೆಚ್ಚುಗೆ ಗಳಿಸಿದರು. ವಿದ್ಯಾರ್ಥಿನಿಯರಾದ ಶಮಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ರಾಧಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕುಂದಾಪುರದ ಅಸ್ಮಿತೆಯನ್ನು ಬಿಂಬಿಸುವ ಆಸಾಡಿ ಗಮ್ಮತ್ ಎಂಬ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಸೇರಿದಂತೆ ಸುಮಾರು 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಂದಾಪುರ ಸಮಾಜದ ಜನಜೀವನ, ರೂಢಿ, ಸಂಪ್ರದಾಯ, ಆಚಾರ ವಿಚಾರ ಹಾಗೂ ಭಾಷೆಯ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಈ ಕಾರ್ಯಕ್ರಮ ಪ್ರಭಾವಶಾಲಿಯಾಯಿತು.