ಸಿಲಿಂಡರ್‌ ಸ್ಫೋಟ : ವೃದ್ಧೆ ಸಾವು, ಮನೆ ನೆಲಸಮ

KannadaprabhaNewsNetwork |  
Published : Oct 26, 2025, 02:00 AM IST
Cylinder Explosion

ಸಾರಾಂಶ

ಆಕಸ್ಮಿಕವಾಗಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ವೃದ್ಧೆಯೊಬ್ಬರು ಮೃತಪಟ್ಟು, ಮಗ ಹಾಗೂ ಮೊಮ್ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

 ಬೆಂಗಳೂರು :  ಆಕಸ್ಮಿಕವಾಗಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ವೃದ್ಧೆಯೊಬ್ಬರು ಮೃತಪಟ್ಟು, ಮಗ ಹಾಗೂ ಮೊಮ್ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್‌. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ದೇವಸಂದ್ರ ಸಮೀಪದ ತ್ರಿವೇಣಿ ನಗರದ ನಿವಾಸಿ ಅಕ್ಕಯಮ್ಮ (80) ಮೃತ ದುರ್ದೈವಿ ವೃದ್ಧೆ. ಘಟನೆಯಲ್ಲಿ ಗಾಯಗೊಂಡಿರುವ ಮೃತಳ ಮಗ ಶೇಖರ್‌, ಮೊಮ್ಮಕ್ಕಳಾದ ಕಿರಣ್ ಕುಮಾರ್ ಹಾಗೂ ಚಂದನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಪೈಕಿ ಚಂದನಾ ಪರಿಸ್ಥಿತಿ ಗಂಭೀರವಾಗಿದ್ದು, ಆಕೆ ಜೀವನ್ಮರಣ ಹೋರಾಡುತ್ತಿದ್ದಾಳೆ. ಅಡುಗೆ ಮನೆಯಲ್ಲಿ ಬೆಳಗ್ಗೆ ಸಾಂಬಾರು ಬಿಸಿ ಮಾಡಲು ಚಂದನಾ ಸ್ಟೌವ್ ಹಚ್ಚಿದ ಕೂಡಲೇ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ನೆಲಸಮಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವರ್ಷದ ಹಿಂದೆ ಬಂದಿದ್ದ ಕುಟುಂಬ: 

ಬೈಯ್ಯಪ್ಪನಹಳ್ಳಿ ಸಮೀಪ ನೆಲೆಸಿದ್ದ ಶೇಖರ್ ವರ್ಷದ ಹಿಂದಷ್ಟೇ ದೇವಸಂದ್ರದ ತ್ರಿವೇಣಿ ನಗರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ರಸ್ತೆ ಬದಿ ಎಗ್ ರೈಸ್‌ ಹೋಟೆಲ್ ನಡೆಸಿಕೊಂಡು ಶೇಖರ್ ಅವರ ಪುತ್ರ ಕಿರಣ್‌ ಕುಟುಂಬವನ್ನು ಸಲಹುತ್ತಿದ್ದರು. ಶುಕ್ರವಾರ ರಾತ್ರಿ ಊಟ ಮಾಡಿದ ಬಳಿಕ ಕುಟುಂಬ ಸದಸ್ಯರು ನಿದ್ರೆಗೆ ಜಾರಿದ್ದರು. ಆಗ ಅಡುಗೆ ಸಿಲಿಂಡರ್ ಅನಿಲ ಸೋರಿಕೆಯಾಗಿ ಮನೆ ಆವರಿಸಿದೆ. ಈ ಬಗ್ಗೆ ಅರಿಯದೆ ಶನಿವಾರ ಬೆಳಗ್ಗೆ 7.30ಕ್ಕೆ ಎದ್ದು ಅಡುಗೆ ಮನೆಗೆ ತೆರಳಿದ ಚಂದನಾ, ಸ್ಟವ್ ಹಚ್ಚಿ ಸಾಂಬಾರ್ ಬಿಸಿ ಮಾಡಲು ಮುಂದಾಗಿದ್ದಾರೆ. ಸ್ಟವ್ ಹಚ್ಚಿದ ಕೂಡಲೇ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಇಡೀ ಮನೆ ನೆಲಸಮಗೊಂಡಿದೆ. ಅಲ್ಲದೆ ನೆರೆ ಮನೆಯ ಮಹಿಳೆಯೊಬ್ಬರಿಗೆ ಗಾಯವಾಗಿದೆ. ಕೂಡಲೇ ಘಟನೆ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯ ನೆರವಿನಲ್ಲಿ ಮನೆ ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆ ಮಾಡಿ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಆದರೆ ಘಟನೆಯಲ್ಲಿ ಗಂಭೀರ ಸ್ವರೂಪವಾಗಿ ಗಾಯಗೊಂಡು ಅಕ್ಕಯಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಮನೆ ಬಿದ್ದು ಹೊಸ ನೆಲೆ ಅರಸಿ ಬಂದಿದ್ದ ಕುಟುಂಬ!

ವರ್ಷದ ಹಿಂದೆ ಸಹ ಬೈಯ್ಯಪ್ಪನಹಳ್ಳಿಯಲ್ಲಿ ಶೇಖರ್ ಕುಟುಂಬ ನೆಲೆಸಿದ್ದ ಮನೆ ಕುಸಿದು ಬಿದ್ದಿತ್ತು. ಆಗ ಹೊಸ ನೆಲೆ ಅರಸಿಕೊಂಡು ಬಂದು ಅವರು ದೇವಸಂದ್ರದ ತಿವ್ರೇಣಿ ನಗರದಲ್ಲಿ ವಾಸವಾಗಿದ್ದರು. ವಿಪರ್ಯಾಸವೆಂದರೆ ಈ ಮನೆ ಸಹ ಸಿಲಿಂಡರ್ ಸ್ಫೋಟಕ್ಕೆ ನೆಲಸಮಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!