ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಬಳಿಕ ನಡೆದ ಮೊದಲ ಉದ್ಘಾಟನಾ ಪಂದ್ಯಾವಳಿಯಲ್ಲಿ ಮಹದೇವಪುರದ ವಿಕಾಸ್ ಗೆ ದಾವಣಗೆರೆಯ ಕಿರಣ್ಮುಖಾಮುಖಿಯಾದರು. 30 ನಿಮಿಷಗಳಿಗೆ ನಿಗದಿಯಾಗಿದ್ದ ಈ ಪಂದ್ಯಾವಳಿಯು 21 ನಿಮಿಷ, 50 ಸೆಕೆಂಡುಗಳಲ್ಲಿ ಈ ಕುಸ್ತಿ ಸಮಾಪ್ತಿಯಾಯಿತು. ನಿರಂತರ ಹೋರಾಟ ಮತ್ತು ಪಟ್ಟುಗಳ ನಡುವೆ ವಿಕಾಸ್ ಜಯಗಳಿಸಿದರು.
ಬಳಿಕ ಗಾಣಿಗನ ಕೊಪ್ಪಲಿನ ನಂದಿನಿ ಮತ್ತು ಬೆಂಗಳೂರಿನ ಪುಷ್ಪ ಮುಖಾಮುಖಿಯಾದರು. ಈ ವೇಳೆ ನಂದಿನಿ ಅವರು ಕೇವಲ 1 ನಿಮಿಷ, 10 ಸೆಕೆಂಡುಗಳಲ್ಲು ಪುಷ್ಪಾ ಅವರನ್ನು ಸೋಲಿಸಿದರು. ಅಂತೆಯೇ ಬನ್ನೂರಿನ ಎಂ. ಚೈತನ್ಯ ಮತ್ತು ಚೈತನ್ಯ (ಮಿಲ್ಟ್ರಿ) ನಡುವಿನ ಪಂದ್ಯದಲ್ಲಿ ಚೈತನ್ಯ (ಮಿಲ್ಟ್ರಿ) ಜಯಗಳಿಸಿದರು.ಸಯ್ಯದ್ಹುಸೇನ್ ಮತ್ತು ಮನೋಜ್ ನಡುವೆ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸೈಯದ್ ಹುಸೇನ್ 7 ನಿಮಿಷಗಳ ಹೋರಾಟದ ಮೂಲಕ ಜಯಗಳಿಸಿದರು.
ಗಗನ್ ಮತ್ತು ಯೋಗೇಶ್ ನಡುವಿನ ಪಂದ್ಯಾವಳಿಯಲ್ಲಿ ಗಗನ್ ಜಯಗಳಿಸಿದರೆ, ಅಶೋಕಪುರಂನ ವಿಶಾಲ್ಅವರು, ಮಹದೇವಪುರದ ಸಂಜಯ್ ಅವರನ್ನು ಸೋಲಿಸಿದರು. ಶಿವು ಮತ್ತು ಅಬೂಬಕರ್ ನಡುವಿನ ಪಂದ್ಯಾವಳಿಯಲ್ಲಿ ಶಿವು ಅವರು ಕೇವಲ 41 ನಿಮಿಷದಲ್ಲಿ ಅಬೂಬಕರ್ ಅವರನ್ನು ಸೋಲಿಸಿ ಗೆಲುವಿನ ದಡ ಸೇರಿದರು.