ಕನ್ನಡಪ್ರಭ ವಾರ್ತೆ ಮಂಗಳೂರು2023ನೇ ವರ್ಷ ದ.ಕ.ಜಿಲ್ಲೆಯ ಪಾಲಿಗೂ ಸಿಹಿ-ಕಹಿ ಘಟನೆಗಳನ್ನು ತಂದಿಟ್ಟಿದೆ. ಪ್ರಾಕೃತಿಕ ವಿಕೋಪ, ಕಾಡಾನೆ ದಾಳಿ, ಸಾವು ಮಾತ್ರವಲ್ಲ, ರಾಜಕೀಯ ವಿಪ್ಲವ, ಸಾಧಕರ ಅಗಲುವಿಕೆ, ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ, ದುರ್ಘಟನೆಗಳು, ಕುಡಿಯುವ ನೀರಿನ ಕೊರತೆ ಮತ್ತಿತರ ವಿದ್ಯಮಾನಗಳು ಸಂಭವಿಸಿವೆ.
ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಪುತ್ತೂರು: ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯ ಪುತ್ತೂರು ರಾಷ್ಟ್ರದ ಗಮನ ಸೆಳೆಯಿತು. ಬಿಜೆಪಿ ಟಿಕೆಟ್ ನೀಡದ ಸಿಟ್ಟಿನಲ್ಲಿ ಹಿಂದು ಸಂಘಟಕ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಿದ್ದು, ಫಲಿತಾಂಶ ವೇಳೆ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಪುತ್ತೂರಲ್ಲಿ ಕಾಂಗ್ರೆಸ್ನ ಅಶೋಕ್ ರೈ ಗೆದ್ದರೆ, ಅರುಣ್ ಕುಮಾರ್ ಪುತ್ತಿಲ 64 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು. ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟ ಪುತ್ತೂರಿಗೆ ಸ್ಟಾರ್ ಪ್ರಚಾರಕರನ್ನು ಬಿಜೆಪಿ ಕರೆಸಿದರೂ ಗೆಲ್ಲಲಾಗಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಎರಡು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚನೆ ಮಾಡಿದಾಗ ಮಂಗಳೂರು ಶಾಸಕ ಯು.ಟಿ. ಖಾದರ್ ಅವರಿಗೆ 16ನೇ ವಿಧಾನಸಭೆಯ ಅಧ್ಯಕ್ಷ ಸ್ಥಾನ ಒಲಿದು ಬಂತು.ನಾಡಿಗೆ ನುಗ್ಗಿದ ವನ್ಯಜೀವಿಗಳು:
ಫೆ.23ರಂದು ಕಡಬ ತಾಲೂಕು ನೈಲ ಎಂಬಲ್ಲಿ ರಂಜಿತಾ ಹಾಗೂ ರಮೇಶ್ ರೈ ಎಂಬವರನ್ನು ಕಾಡಾನೆ ಬಲಿ ಪಡೆದಿತ್ತು. ಬಳಿಕ ಕಾಡಾನೆಯನ್ನು ಸೆರೆ ಹಿಡಿದು ನಾಗರಹೊಳೆಗೆ ಸ್ಥಳಾಂತರ ಮಾಡಲಾಗಿತ್ತು. ಆ.2ರಂದು ನಾಗರಹೊಳೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮೃತಪಟ್ಟಿತ್ತು. ಸುಳ್ಯ ತಾಲೂಕು ಮಂಡೆಕೋಲು, ಕಡಬ ತಾಲೂಕಿನ ಹಲವು ಕಡೆ ಕಾಡಾನೆ ದಾಳಿ ನಿರಂತರವಾಗಿ ನಡೆಯುತ್ತಿದೆ. ಜತೆಗೆ ಚಿರತೆ ಕಾಟವೂ ಹೆಚ್ಚಾಗಿದೆ.ಗತಿಸಿದ ಸಾಧಕರು:
ತೆಂಕುತಿಟ್ಟಿನ ಹಿರಿಯ ಅಗ್ರಗಣ್ಯ ಭಾಗವತರಾಗಿ 6 ದಶಕಗಳ ಕಾಲ ಅವರು ಕಲಾ ಸೇವೆ ಮಾಡಿದ ಬಲಿಪ ನಾರಾಯಣ ಭಾಗವವತರು ಫೆ.16ರಂದು ವಿಧಿವಶವಾದರು. ಆ.9ರಂದು ಕರ್ಣಾಟಕ ಬ್ಯಾಂಕ್ನ ಮಾಜಿ ಅಧ್ಯಕ್ಷ ಪಿ.ಜಯರಾಮ ಭಟ್ ಅವರು ಹೃದಯಾಘಾತದಿಂದ ನಿಧನರಾದರು. ಜಮ್ಮು ಕಾಶ್ಮೀರದ ರೌರಿ ಜಿಲ್ಲೆಯಲ್ಲಿ ಉಗ್ರರ ಹಾಗೂ ಯೋಧರ ಗುಂಡಿನ ಚಕಮಕಿಯಲ್ಲಿ ಮಂಗಳೂರಿನಲ್ಲಿ ಓದಿ, ಬೆಳೆದ ಕ್ಯಾ.ಫ್ರಾಂಜಲ್ ವೀರ ಮರಣ. ಕುಲಶೇಖರ ಉಮಿಕಾನ ನಿವಾಸಿ ಗಡಿ ಭದ್ರತಾ ಯೋಧ ಹರೀಶ್ ಕುಮಾರ್ ಹೃದಯಾಘಾತದಿಂದ ನಿಧನ. ಜ.23 ಶಕ್ತಿನಗರದ ಯೋಧ ಮುರಳೀಧರ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನ.ರಾಷ್ಟ್ರೀಯ ನಾಯಕರ ಆಗಮನ:
ಫೆ.3ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟಿಸಿದ್ದರು. ಬಳಿಕ ಮಂಗಳೂರಿಗೆ ಆಗಮಿಸಿ ಪಕ್ಷದ ಆಂತರಿಕ ಸಭೆ ನಡೆಸಿ ತೆರಳಿದ್ದರು. ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಬಿಜೆಪಿ ನವಸಂಕಲ್ಪ ಸಮಾವೇಶಕ್ಕೆ ಮೂಲ್ಕಿ ಕೊಳ್ನಾಡಿಗೆ ಆಗಮಿಸಿದ್ದರು. ಏ.29ರಂದು ಅಮಿತ್ಶಾ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಏ.27ರಂದು ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿ, ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಪ್ರಕಟಿಸಿದ್ದರು. ಮೇ 6ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಪುತ್ತೂರು, ಬಂಟ್ವಾಳಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ್ದರು.2023ರ ಪ್ರಮುಖ ಘಟನಾವಳಿಗಳುಜನವರಿ-1-ಹೊಸ ವರ್ಷದ ಮೊದಲ ದಿನವೇ ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಹೊಳೆಯಲ್ಲಿ ಮೀನು ಹಿಡಿಯಲು ಹೋದ ತಂದೆ, ಮಗನ ಮೇಲೆ ಕಾಡಾನೆ ದಾಳಿ ನಡೆಸಿದೆ. ಇದರಲ್ಲಿ ತಂದೆ ತಿಮ್ಮಪ್ಪ ಸಾವಿಗೀಡಾದರೆ, ಪುತ್ರ ಶರಣ್ ಗಾಯಗೊಂಡಿದ್ದಾನೆ. ಈ ಘಟನೆ ಬಳಿಕ ಪದೇ ಪದೇ ಗುಂಡ್ಯ, ಕಡಬ, ಸುಳ್ಯ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಜೋರಾಗಿ ಮುಂದುವರಿದಿದೆ. ಜನವರಿ-5-ದೇಶದ್ರೋಹಿ ಕೃತ್ಯಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ಐಎ) ದೇರಳಕಟ್ಟೆ ಕಾಲೇಜು ವಿದ್ಯಾರ್ಥಿ ರಿಹಾನ್ ಶೇಖ್ ಸೆರೆ. ಜನವರಿ-10-ಹಿರಿಯ ಸಾಹಿತಿ, ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ನಿಧನಜನವರಿ-10-ಮೆಡಿಕಲ್ ಕಾಲೇಜುಗಳಲ್ಲಿ ಉಪನ್ಯಾಸಕರ ಸಹಿತ ವಿದ್ಯಾರ್ಥಿಗಳಲ್ಲಿ ಕೂಡ ಗಾಂಜಾ ಸೇವನೆ ಪತ್ತೆ. ಮೂವರು ವೈದ್ಯ ವಿದ್ಯಾರ್ಥಿ, ವೈದ್ಯರು ಸೇರಿ 10 ಮಂದಿ ಸೆರೆ.ಜನವರಿ-11-ಮತ್ತೆ ಎನ್ಐಎ ಕಾರ್ಯಾಚರಣೆ, ಬಬ್ಬುಕಟ್ಟೆಯ ಅಬ್ದುಲ್ ರಹಮಾನ್ ಸೆರೆಜನವರಿ-12-ಚೇಳ್ಯಾರುನಲ್ಲಿ ರೈಲ್ವೆ ತಡೆಗೋಡೆ ಕಾಮಗಾರಿ ವೇಳೆ ಗುಡ್ಡಕುಸಿತ, ಕಾರ್ಮಿಕ ಓಬಳೇಶ್ ಸಾವು, ಐವರು ಗಾಯಜನವರಿ-14-ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಪಾಳು ಕಟ್ಟಡದಲ್ಲಿ 5.80 ಲಕ್ಷ ರು. ನಗದು ಪತ್ತೆ, ಹಮೀದ್ ಪಡ್ಡಂಗಡಿ ಸೆರೆ.ಜನವರಿ-20-ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ವಿಶೇಷ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಕೆಫೆಬ್ರವರಿ-3-ಮಂಗಳೂರಿನ ಬಲ್ಮಠದಲ್ಲಿ ಜುವೆಲ್ಲರಿ ಸಿಬ್ಬಂದಿ ರಾಘವೇಂದ್ರ ಆಚಾರ್ಯಗೆ ದುಷ್ಕರ್ಮಿ ಇರಿದು ಕೊಲೆಫೆಬ್ರವರಿ-6-ವಿಷಾಹಾರ ಸೇವಿಸಿ ಮಂಗಳೂರಿನ ಸಿಟಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಹಾಸ್ಟೆಲ್ನ 150 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ.ಫೆಬ್ರವರಿ-11-ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರು ಭೇಟಿ, ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಚಾಲನೆ, ಫೆಬ್ರವರಿ-20-ಕಡಬದ ನೈಲದಲ್ಲಿ ಕಾಡಾನೆ ದಾಳಿ, ರಂಜಿತಾ ಹಾಗೂ ರಮೇಶ್ ರೈ ಸಾವುಫೆಬ್ರವರಿ-23-ಕಡಬದಲ್ಲಿ ಇಬ್ಬರನ್ನು ಕೊಂದ ಕಾಡಾನೆಯ ಸೆರೆ.ಫೆಬ್ರವರಿ-23-ಪ್ರವೀಣ್ ನೆಟ್ಟಾರು ಹತ್ಯೆ ಕೇಸಿಗೆ ಸ್ಕೆಚ್ ಹಾಕಿದ ಆರೋಪದಲ್ಲಿ ಮಿತ್ತೂರಿನ ಕಮ್ಯುನಿಟಿ ಹಾಲ್ಗೆ ಬೀಗ ಜಡಿದ ಎನ್ಐಎ ಅಧಿಕಾರಿಗಳು. ಮಾರ್ಚ್-5-ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ತೌಫಿಲ್ನ್ನು ಬಂಧಿಸಿದ ಎನ್ಐಎ. ಬಿಹಾರದಲ್ಲಿ ಪ್ರಧಾನಿ ಮೋದಿ ಸಮಾವೇಶ ವಿದ್ವಂಸಕ್ಕೆ ಯತ್ನ ಆರೋಪದಲ್ಲಿ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಐವರನ್ನು ವಿಚಾರಣೆಗೆ ಒಳಪಡಿಸಿದ ಎನ್ಐಎ ತಂಡ.
ಏಪ್ರಿಲ್-14-ಸುಳ್ಯದ ಸಂಪಾಜೆಯಲ್ಲಿ ಬಸ್-ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮಂಡ್ಯದ 6 ಮಂದಿ ಸಾವುಮೇ- 15-ಪುತ್ತೂರಲ್ಲಿ ಸಂಸದರಾದ ನಳಿನ್ ಕುಮಾರ್ ಮತ್ತು ಡಿ.ವಿ.ಸದಾನಂದ ಗೌಡ ಅವರ ಭಾವಚಿತ್ರಕ್ಕೆ ಬಹಿರಂಗವಾಗಿ ಚಪ್ಪಲಿ ಹಾರ ಹಾಕಿ ಅಭಿನಂದನೆ ಎಂದು ಬ್ಯಾನರ್ ಹಾಕಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಠಾಣೆಯಲ್ಲಿ ಪೊಲೀಸ್ ದೌರ್ಜನ್ಯ.
ಮೇ-18-ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳಕ್ಕೆ ಸುಪ್ರೀಂ ಕೋರ್ಟ್ ಅಸ್ತು.ಮೇ-23-ಕರ್ನಾಟಕ ಅಸೆಂಬ್ಲಿಯ ನೂತನ ಸ್ಪೀಕರ್ ಆಗಿ ಮಂಗಳೂರು ಶಾಸಕ ಯು.ಟಿ.ಖಾದರ್ ಆಯ್ಕೆ.
ಮೇ-26-ದಿ.ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಸರ್ಕಾರದಿಂದ ಅನುಕಂಪದ ಆಧಾರದಲ್ಲಿ ಸಿಎಂ ಕಚೇರಿ ಸೂಚನೆ ಮೇರೆಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಪತ್ನಿ ನೂತನ ತಾಂತ್ರಿಕ ಕಾರಣದಿಂದ ಕೆಲಸದಿಂದ ವಜಾ, ಮರು ನೇಮಕ ಬಗ್ಗೆ ಮರುದಿನ ಮುಖ್ಯಮಂತ್ರಿ ಟ್ವೀಟ್.ಮೇ-31-ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಹಾರ ಚುನಾವಣಾ ಪ್ರಚಾರ ವೇಳೆ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ದ.ಕ.ಜಿಲ್ಲೆಯ 16 ಕಡೆಗಳಿಗೆ ಎನ್ಐಎ ದಾಳಿ
ಜೂನ್-1-ವರ್ಷಗಳ ಬಳಿಕ ಮಂಗಳೂರಿನಲ್ಲಿ ಮೊದಲ ಬಾರಿಗೆ ಕಾಣಿಸಿದ ನೈತಿಕ ಪೊಲೀಸ್ಗಿರಿ. ಉಳ್ಳಾಲದ ಸೋಮೇಶ್ವರ ಬೀಚ್ನಲ್ಲಿ ಅನ್ಯಕೋಮಿನ ಮೂರು ಮಂದಿ ಯುವಕರ ಮೇಲೆ ಹಲ್ಲೆ.ಜೂನ್-16-ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಕೇಸಿನ ತೀರ್ಪು 11 ವರ್ಷ ತನಿಖೆ ನಡೆಸಿ ಪ್ರಕಟಿಸಿದ ಸಿಬಿಐ ಬೆಂಗಳೂರು ಕೋರ್ಟ್. ಆರೋಪಿಯಾಗಿದ್ದ ಸಂತೋಷ್ ರಾವ್ನನ್ನು ನಿರ್ದೋಷಿಯಾಗಿ ಬಿಡುಗಡೆ.
ಜೂನ್-16-ಒಂದು ವರ್ಷದ ಹಿಂದೆ ಕೋಮು ದ್ವೇಷದ ಇರಿತ ಪ್ರಕರಣಗಳಲ್ಲಿ ಮೃತಪಟ್ಟ ಮಸೂದ್, ಪಾಜಿಲ್, ಜಲೀಲ್, ದೀಪಕ್ ರಾವ್ ಕುಟುಂಬಕ್ಕೆ ಸರ್ಕಾರಿಂದ ತಲಾ 25 ಲಕ್ಷ ರು. ಪರಿಹಾರ ಪ್ರಕಟ.ಜೂನ್-27-ಪ್ರವೀಣ್ ನೆಟ್ಟಾರು ಹತ್ಯೆ ಕೇಸಿನಲ್ಲಿ ನಾಪತ್ತೆಯಾದ ಐವರು ಆರೋಪಿಗಳ ಪತ್ತೆಗೆ ಎನ್ಐಎ ಆರೋಪಿಗಳ ಮನೆಗೆ ನೋಟಿಸ್ ಜಾರಿ ಹಾಗೂ ಸಾರ್ವಜನಿಕ ಜಾಗಗಳಲ್ಲಿ ಧ್ವನಿ ವರ್ಧಕ ಮೂಲಕ ಪ್ರಚಾರ.
ಜುಲೈ-5-ಕುಳಾಯಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕುಷ್ಟಗಿ ನಿವಾಸಿ ಸಂತೋಷ್ ಸಾವುಜುಲೈ-6-ದ.ಕ.ಜಿಲ್ಲೆಯಲ್ಲಿ ಇಬ್ಬರು ಪ್ರಾಕೃತಿಕ ದುರಂತಕ್ಕೆ ಸಾವು. ಮೂಡುಬಿದಿರೆಯಲ್ಲಿ ಕೆರೆಗೆ ಬಿದ್ದು ಅಂಗವಿಕಲ ನಿರಂಜನ ಸಾವು, ಸುಳ್ಯದ ಅಲೆಟ್ಟಿಯಲ್ಲಿ ಪಾಲದಲ್ಲಿ ಹೊಳೆ ದಾಟುತ್ತಿದ್ದಾಗ ಕೇರಳಿಗ ನೀರು ಪಾಲು
ಜುಲೈ-7-ಬಂಟ್ವಾಳದ ನಂದಾವರದಲ್ಲಿ ಗುಡ್ಡಜರಿದು ಝರೀನಾ ಸಾವು, ಪುತ್ರ ಶಫಿ ಬಚಾವ್.ಜುಲೈ-15-ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿದ್ದ ಐವರ ಪತ್ತೆಗೆ ಸುಳ್ಯ ಮತ್ತು ಪುತ್ತೂರಲ್ಲಿ 2ನೇ ಬಾರಿ ಎನ್ಐಎ ನೋಟಿಸ್ ಹಾಗೂ ಧ್ವನಿವರ್ಧಕದಲ್ಲಿ ಮಾಹಿತಿ ಬಿತ್ತರ.
ಜುಲೈ 30-ದ.ಕ.ಜಿಲ್ಲೆಯ ವಿವಿಧ ಕಡೆ ನೀರಿಗೆ ಬಿದ್ದು ಇಬ್ಬರು ಸಾವುಆಗಸ್ಟ್-14-ಬಂಟ್ವಾಳ ಮತ್ತು ಉಳ್ಳಾಲಗಳಲ್ಲಿ ಬಿಹಾರ ಸ್ಫೋಟ ಯತ್ನ ಘಟನೆಗೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎನ್ಐಎ ದಾಳಿ
ಅಕ್ಟೋಬರ್-30-ಚಿಕ್ಕಮಗಳೂರಿನ ತರಕಾರಿ ವ್ಯಾಪಾರಿ ಪ್ರಸನ್ನ ಕುಮಾರ್ ಎಂಬಾತ ಜೆಪ್ಪಿನಮೊಗರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆನವೆಂಬರ್-6-ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡ ಮುಖ್ಯಸ್ಥ ಅಕ್ಷಯ್ ಕಲ್ಲೇಗನನ್ನು ಇರಿದು ಕೊಂದ ದುಷ್ಕರ್ಮಿಗಳು.
ನವೆಂಬರ್-9-ಕರ್ಣಾಟಕ ಬ್ಯಾಂಕ್ ಹಿರಿಯ ಅಧಿಕಾರಿ ವಾದಿರಾಜ್ ತನ್ನ ಮನೆಯಲ್ಲಿ ತಾನೇ ಇರಿದುಕೊಂಡು ವಿಲಕ್ಷಣ ಆತ್ಮಹತ್ಯೆನವೆಂಬರ್-27-ಬಹಳ ದಿನಗಳ ಬಳಿಕ ಮತ್ತೆ ಕಾಣಿಸಿದ ಮಂಗಳೂರಿನ ಮೋಗರ್ನ್ಗೇಟ್ ಬಳಿ ನೈತಿಕ ಪೊಲೀಸ್ಗಿರಿ, ಮಳಿಗೆಯ ಹಿಂದು-ಮುಸ್ಲಿಂ ಸಿಬ್ಬಂದಿ ಮೇಲೆ ಇಬ್ಬರ ಹಲ್ಲೆ.
ಡಿಸೆಂಬರ್-27-ಮಂಗಳೂರು ವಿಮಾನ ನಿಲ್ದಾಣಕ್ಕೆ ಇ ಮೇಲ್ ಮೂಲಕ ಬೆದರಿಕೆ ಕರೆ ಪತ್ತೆ.ಡಿಸೆಂಬರ್-30-ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಂಗಳೂರು-ಮಡ್ಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ.