ಸೊರಬ: ಆರ್ಥಿಕ ಪ್ರಗತಿ ಸಾಧಿಸುವುದಕ್ಕೆ ಮತ್ತು ಸ್ವಾವಲಂಬಿ ಜೀವನ ನಿರ್ವಹಣೆಗೆ ಹೈನುಗಾರಿಕೆ ವರದಾನವಾಗಿದೆ. ಆದ್ದರಿಂದ ರೈತರು ಕೃಷಿಯ ಒಂದು ಭಾಗವಾಗಿ ಹೈನುಗಾರಿಕೆ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ನೂತನ ತಾಲೂಕು ನಿರ್ದೇಶಕ ದಯಾನಂದ ಗೌಡ ತ್ಯಾವಗೋಡು ಹೇಳಿದರು.
ಮಂಗಳವಾರ ತಾಲೂಕಿನ ತ್ಯಾವಗೋಡು ಗ್ರಾಮದಲ್ಲಿ ಶಿಮೂಲ್ ನೂತನ ತಾಲೂಕು ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆ ಗ್ರಾಮೀಣ ಸೇವಾ ಬಳಗದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಹೈನುಗಾರಿಕೆ ನಿರುದ್ಯೋಗ ಸಮಸ್ಯೆ ದೂರ ಮಾಡುತ್ತದೆ. ಆದ್ದರಿಂದ ಇಂದು ವಿದ್ಯಾವಂತ ಯುವಕರೂ ನಿತ್ಯ ಆದಾಯ ಕೊಡುವ ಹೈನುಗಾರಿಕೆ ಕ್ಷೇತ್ರಕ್ಕೆ ಉತ್ಸಾಹ ತೋರುತ್ತಿದ್ದಾರೆ. ಸನಾತನ ಧರ್ಮ ಕಾಲದಿಂದಲೂ ಹೈನುಗಾರಿಕೆ ರೈತರ ಪೋಷಣೆ ಮಾಡುತ್ತಾ ಕೈ ಹಿಡಿದು ನಡೆಸುತ್ತಿದೆ. ಹಾಗಾಗಿ, ಹಲವು ಸಮುದಾಯ ಮತ್ತು ದೇಶದ ಆರ್ಥಿಕತೆ, ರಾಷ್ಟ್ರದ ಸಮೃದ್ಧಿಗೆ ಹೈನುಗಾರಿಕೆ ಕೊಡುಗೆ ಅನನ್ಯವಾಗಿದೆ ಎಂದರು.
ತಾಲೂಕಿನಲ್ಲಿ ಹಾಲು ಸಂಗ್ರಹ ಕೇಂದ್ರ ಪ್ರಾರಂಭ ಮಾಡುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತರಲಾಗಿದೆ. ಹೈನುಗಾರಿಕೆಯ ಜೊತೆಗೆ ಹಾಲು ಸಂಗ್ರಹ ಕೇಂದ್ರ ಪ್ರಾರಂಭವಾದರೆ ರೈತರಿಗೆ ಹಚ್ಚಿನ ಲಾಭ ದೊರೆಯುತ್ತದೆ ಮತ್ತು ಉದ್ಯೋಗ ಸೃಷ್ಠಿಯಾಗುತ್ತದೆ ಎಂದರು.ಮುಂದಿನ ದಿನಗಳಲ್ಲಿ ಹೈನುಗಾರಿಕೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುವುದು. ತಾಲೂಕಿನಲ್ಲಿ ಹೊಸದಾಗಿ ಡೈರಿಗಳನ್ನು ಸ್ಥಾಪಿಸಲಾಗುವುದು, ಬೆಂಗಳೂರಿನಂತಹ ನಗರಗಳಿಗೆ ಉದ್ಯೋಗಕ್ಕೆ ವಲಸೆ ಹೋಗುವ ಯುವಕರು ಸ್ವಯಂ ಉದ್ಯೋಗ ಮಾಡಬೇಕು. ಈ ಕ್ಷೇತ್ರದಲ್ಲಿ ಹೈನುಗಾರಿಕೆಯಲ್ಲಿ ಹೊಸ ಬದಲಾವಣೆ ತರುವ ಮೂಲಕ ಹೆಚ್ಚು ಹಾಲು ಉತ್ಪಾದಿಸುವ ತಾಲೂಕಾಗಿ ರೂಪಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಸೇವಾ ಬಳಗದ ಅನಿಲ್ಕುಮಾರ್, ಮಂಜುನಾಥ, ಪುನೀತ್, ವಿಜಯಕುಮಾರ್, ಗಣಪತಿ ಸೇರಿದಂತೆ ತ್ಯಾವಗೋಡು ಗ್ರಾಮಸ್ಥರು ಹಾಜರಿದ್ದರು.