ಧರ್ಮಸ್ಥಳ ಗ್ರಾಮ : ಹೊಸ ಜಾಗದಲ್ಲಿ ಸಿಗದ ಅವಶೇಷ

Published : Aug 07, 2025, 10:29 AM IST
DHARMASTALA SIT INVSTIGATION 13

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ಸಾಕ್ಷಿ ದೂರುದಾರ ನೀಡಿದ ದೂರಿನಂತೆ ಬುಧವಾರ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಉತ್ಖನನ ಕಾರ್ಯ ಮುಂದುವರಿಯಿತು.

 ಬೆಳ್ತಂಗಡಿ :  ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ಸಾಕ್ಷಿ ದೂರುದಾರ ನೀಡಿದ ದೂರಿನಂತೆ ಬುಧವಾರ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಉತ್ಖನನ ಕಾರ್ಯ ಮುಂದುವರಿಯಿತು. ನಿಗದಿತ 13ನೇ ಪಾಯಿಂಟ್‌ನ ಬದಲು ಹೊಸ ಜಾಗದಲ್ಲಿ ಅಗೆದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.

ಬುಧವಾರ ಮಧ್ಯಾಹ್ನದ ವೇಳೆಗೆ ಎಸ್‌ಐಟಿ ತಂಡ ಸಾಕ್ಷಿ ದೂರುದಾರನೊಂದಿಗೆ ನೇತ್ರಾವತಿ ಸ್ನಾನಘಟ್ಟದ ಸಮೀಪಕ್ಕೆ ಆಗಮಿಸಿತು. ಆತ ಗುರುತಿಸಿದ್ದ ೧೩ನೇ ಸ್ಥಳವನ್ನು ಅಗೆಯದೆ ಪಾಯಿಂಟ್‌ 11 ರ ಸಮೀಪವೇ ಇರುವ ಬಂಗ್ಲೆಗುಡ್ಡೆಯ ಅರಣ್ಯಕ್ಕೆ ಈ ಹಿಂದೆ ಗುರುತಿಸದ ಸ್ಥಳಕ್ಕೆ ತೆರಳಿದರು. ರಸ್ತೆಯಿಂದ‌ ಸುಮಾರು ೨೦೦ ಮೀ. ದೂರದಲ್ಲಿ ಸಾಕ್ಷಿ ದೂರುದಾರ ತೋರಿಸಿದ ಹೊಸ ಜಾಗದಲ್ಲಿ ಬುಧವಾರ ಉತ್ಖನನ ನಡೆಸಲಾಯಿತು. ಆದರೆ ಇಲ್ಲಿ ಯಾವುದೇ ಅವಶೇಷಗಳು ಗುರುತುಗಳು ಪತ್ತೆಯಾಗಿಲ್ಲ. ಸಂಜೆ 4.30ರ ಸುಮಾರಿಗೆ ತಂಡ ಕಾರ್ಯಾಚರಣೆ ಮುಗಿಸಿ ಹಿಂತಿರುಗಿತು.

ಅನಾಮಿಕ ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಬುಧವಾರ ಅಗೆಯುವ ಕಾರ್ಯ ನಡೆಯಬೇಕಾಗಿತ್ತು. ಆದರೆ ಈ ಸ್ಥಳದ ಸಮೀಪ ಕಿಂಡಿ ಅಣೆಕಟ್ಟು, ವಿದ್ಯುತ್ ಪರಿವರ್ತಕ ಇತ್ಯಾದಿ ಇದ್ದು ಇಲ್ಲಿ ಕಾರ್ಯಾಚರಣೆ ನಡೆಸುವುದು ಸವಾಲಿನ ಕೆಲಸವಾಗಿದೆ. ಇದಕ್ಕೆ ಸಣ್ಣ ನೀರಾವರಿ ಇಲಾಖೆ, ಮೆಸ್ಕಾಂ ಸಹಕಾರವು ಬೇಕಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಇಲ್ಲಿ ಶೋಧ ಕಾರ್ಯ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಗುರುವಾರ ಇಲ್ಲಿ ಶೋಧ ಕಾರ್ಯ ನಡೆಯುತ್ತದೆಯೇ ಎಂಬ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

ದಾಖಲೆ ಸಂಗ್ರಹ:

ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಬುಧವಾರ ಆಗಮಿಸಿದ ಎಸ್‌ಐಟಿಯ ತಂಡ ಹಲವಾರು ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. 1995 ರಿಂದ 2014ರವರೆಗೆ ಕರ್ತವ್ಯ ಮಾಡಿದ ಪಿಡಿಒಗಳು, ಇತರ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳ ಬಗೆಗಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಲಾಗಿದೆ.

ಎಸ್‌ಐಟಿ ಕಚೇರಿಯಲ್ಲಿ ಸಭೆ:

ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ, ಡಿಜಿಪಿ ಅನುಚೇತ್ ಸೇರಿದಂತೆ ಎಸ್ಐಟಿ ತಂಡ, ಪುತ್ತೂರು ಉಪ ವಿಭಾಧಿಕಾರಿ ಸ್ಟೆಲ್ಲಾ ವರ್ಗಿಸ್ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಬುಧವಾರ ಬೆಳಗ್ಗೆ ಹಾಗೂ ಸಂಜೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಮೂರು ಪ್ರಕರಣ ಎಸ್‌ಟಿಗೆ

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಪ್ರಕರಣವನ್ನು ಜು.19ರಂದು ಎಸ್‌ಐಟಿಗೆ ವರ್ಗಾಯಿಸಲಾಗಿದೆ. ಇದರ ಹೊರತಾಗಿ ಈವರೆಗೆ ಎಸ್‌ಐಟಿ ತಂಡದಿಂದ ಎರಡು ಅಸ್ವಾಭಾವಿಕ ಮರಣ (ಯುಡಿಆರ್) ಪ್ರಕರಣದ ದೂರುಗಳು ಮತ್ತು ಜಯಂತ್ ಎಂಬುವವರಿಂದ ಒಂದು ದೂರರ್ಜಿ ಧರ್ಮಸ್ಥಳ ಪೊಲೀಸ್ ಠಾಣೆಗೆ ವರದಿಯಾಗಿದೆ.

ಜು.31ರಂದು ಎಸ್‌ಐಟಿ ತಂಡ ಶೋಧ ಕಾರ್ಯ ಮಾಡುತ್ತಿದ್ದಾಗ 6ನೇ ಸ್ಥಳದಲ್ಲಿ ದೊರೆತ ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಯುಡಿಆರ್ ಪ್ರಕರಣ, ಆ.4ರಂದು ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ದೂರುದಾರ ಗುರುತಿಸದ ಸ್ಥಳದಲ್ಲಿ ಮಣ್ಣಿನ ಮೇಲೆ ಕಂಡುಬಂದ ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ ಆ.5ರ ಯುಡಿಆರ್ ಪ್ರಕರಣ ದಾಖಲಾಗಿದೆ.

ಜಯಂತ್ ಎಂಬವರು ಬಾಲಕಿಯೊಬ್ಬಳ ಶವವನ್ನು ಯಾವುದೇ ಅಗತ್ಯ ಪ್ರಕ್ರಿಯೆ ನಡೆಸದೆ ವಿಲೇವಾರಿ ಮಾಡಲಾಗಿದೆ ಎಂದು ನೀಡಿದ ದೂರಿಗೆ ಸಂಬಂಧಿಸಿದಂತೆ, ಆ.4ರಂದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರರ್ಜಿ ಪ್ರಕರಣವನ್ನು ಡಿಜಿ ಮತ್ತು ಐಜಿಪಿ ಅನುಮೋದನೆ ಪಡೆದು ಎಸ್‌ಐಟಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ನೆಲ್ಲಿಕಟ್ಟೆ ಉದ್ಯಾನವನ: ಬೃಹತ್ ರಾಷ್ಟ್ರಧ್ವಜಸ್ತಂಭ ಶಿಲಾನ್ಯಾಸ
ಪತ್ರಕರ್ತೆ ಪ್ರೇಮಶ್ರೀ, ಉದ್ಯಮಿ ಶಾಂತಲಾಗೆ ‘ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ