ಕನ್ನಡಪ್ರಭ ವಾರ್ತೆ ಇಂಡಿ: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರುವಂತೆ ದಲಿತ ಸಮುದಾಯಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸಿ ಮನವಿ ಮಾಡಿದರು.
ದಲಿತ ಸಮುದಾಯವನ್ನು ಕಾಂಗ್ರೆಸ್ ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. 1952ರ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ನಿಜವಾಗಿಯೂ ಕಾಂಗ್ರೆಸ್ಗೆ ಅಂಬೇಡ್ಕರ್ ಅವರ ಬಗ್ಗೆ ಮತ್ತು ದಲಿತ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಅಂಬೇಡ್ಕರ್ ಅವರನ್ನು ಮುಂಬೈ ಕೇಂದ್ರ ದಕ್ಷಿಣ ಕ್ಷೇತ್ರದಿಂದ ಅವಿರೋಧ ಆಯ್ಕೆ ಮಾಡಬೇಕಿತ್ತು. ಆದರೆ, ಆಗಿನ ಪ್ರಧಾನಿ ಅಭ್ಯರ್ಥಿಯಾದ ಜವಾಹರ್ ಲಾಲ್ ನೆಹರು ಅವರು ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಅಂಬೇಡ್ಕರ್ ಅವರ ವಿರುದ್ಧ ನಿಲ್ಲಿಸಿ, ಮುಂಬೈ ಕೇಂದ್ರ, ದಕ್ಷಿಣದಿಂದ ಅಂಬೇಡ್ಕರ್ ವಿರುದ್ಧ ಎರಡು ಬಾರಿ ಆ ಕ್ಷೇತ್ರದಲ್ಲಿ ಅವರನ್ನು ಸೋಲಿಸಿತು ಎಂದು ಆಪಾದಿಸಿದರು.
ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿ ಹಾಗೂ ಅಪಮಾನ ಮಾಡಿದ್ದನ್ನು ನೋಡಿದರೆ ದಲಿತರಿಗೆ ಕಾಂಗ್ರೆಸ್ ಹೇಗೆ ಉದ್ದಾರ ಮಾಡುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ದಲಿತರೆಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ದಲಿತ ಎಂಬ ಸುಳ್ಳು ಹಣೆಪಟ್ಟಿ ಕಟ್ಟಿಕೊಂಡಿರುವ ಕಾಂಗ್ರೆಸ್ ಮುಖವಾಡವನ್ನು ಈ ಲೋಕಸಭಾ ಚುನಾವಣೆಯಲ್ಲಿ ಕಳಚಿ ಹಾಕಬೇಕೆಂದು ಹೇಳಿದರು.ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮತ್ತು ದೇಶದ ಸುಭದ್ರತೆ ದೃಷ್ಟಿಯಿಂದ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಂದಗಲ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಅಲೆಮಾರಿ ಸಮುದಾಯದ ರಾಜ್ಯ ಉಪಾಧ್ಯಕ್ಷ ಸಂಜು ದಶವಂತ್, ಎಸ್ಸಿ ಮೋರ್ಚಾ ಮಂಡಲದ ನೂತನ ಅಧ್ಯಕ್ಷ ಗೋವಿಂದ ರಾಠೋಡ ಮಾತನಾಡಿದರು.ಎಸ್ಸಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ನಾಗು ದಶವಂತ್, ಜಿಲ್ಲಾ ಉಪಾಧ್ಯಕ್ಷೆ ಶಾಂತ ಉತ್ಲಾಸ್ಕರ, ಪುನಿತ ಕಾಂಬಳೆ, ಗಿರೀಶ ರಾಠೋಡ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.