ಕನ್ನಡಪ್ರಭ ವಾರ್ತೆ ಮಂಗಳೂರು
ಗಡಿನಾಡು ಕಾಸರಗೋಡಿನ ಎಡನೀರು ಸಂಸ್ಥಾನದ ಶ್ರೀಸಚ್ಚಾದಾನಂದ ಭಾರತೀ ಸ್ವಾಮೀಜಿ ಅವರ ಕಾರಿನ ಮೇಲೆ ಕಾಸರಗೋಡಿನ ಬೋವಿಕ್ಕಾನ ಬಳಿ ಪುಂಡರು ದಾಳಿ ನಡೆಸಿದ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಈ ಘಟನೆಯನ್ನು ಕೇರಳದ ಹಿಂದು ಐಕ್ಯವೇದಿ ಸಂಘಟನೆ ಹಾಗೂ ಕರ್ನಾಟಕದ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ವಿರೋಧಿಸಿದ್ದಾರೆ. ಅಲ್ಲದೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಕಾಸರಗೋಡಿನ ಬೋವಿಕ್ಕಾನದಲ್ಲಿ ಮಂಗಳವಾರ ಭಾರಿ ಪ್ರತಿಭಟನೆ ನಡೆಯಿತು.ಎಡನೀರು ಶ್ರೀಗಳು ಸಾರ್ವಜನಿಕ ಕಾರ್ಯಕ್ರಮದಿಂದ ಮಠಕ್ಕೆ ತಮ್ಮ ಕಾರಿನಲ್ಲಿ ವಾಪಸ್ ಬರುತ್ತಿರಬೇಕಾದರೆ ಭಾನುವಾರ ಸಂಜೆ ಬೋವಿಕ್ಕಾನ-ಇರಿಯಣ್ಣಿ ಮಾರ್ಗ ಮಧ್ಯೆ ಪುಂಡರು ವಾಹನ ತಡೆದಿದ್ದಾರೆ. ತಗಾದೆ ತೆಗೆದ ಪುಂಡರು ಶ್ರೀಗಳ ವಾಹನ ಹಿಂಬಾಲಿಸಿ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹಾನಿ ಎಸಗಿದ್ದಾರೆ. ಈ ಸಂದರ್ಭ ಕಾರಿನಲ್ಲಿದ್ದ ಸ್ವಾಮೀಜಿ ಅವರು ಕಾರು ನಿಲ್ಲಿಸದೆ ಶಾಂತರಾಗಿ ಮುಂದುವರಿದಿದ್ದಾರೆ. ಬಳಿಕ ಪುಂಡರ ಪರವಾಗಿ ಕೆಲವರು ಮಠಕ್ಕೆ ಆಗಮಿಸಿ ಬೇಷರತ್ ಕ್ಷಮೆ ಕೋರಿ ತೆರಳಿದ್ದಾರೆ.
ಹಿಂದು ಸಂಘಟನೆಗಳ ಪ್ರತಿಭಟನೆ:ಎಡನೀರು ಸ್ವಾಮೀಜಿ ಅವರ ಕಾರಿಗೆ ಪುಂಡರು ಹಾನಿ ಎಸಗಿದ ವಿದ್ಯಮಾನ ಬಹಿರಂಗವಾಗುತ್ತಲೇ ಮಠದ ಅಭಿಮಾನಿಗಳು, ಶಿಷ್ಯವರ್ಗ, ಹಿಂದು ಸಂಘಟನೆಗಳು ಸಿಡಿದೆದ್ದಿವೆ. ಸ್ವಾಮೀಜಿಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ. ಬೋವಿಕ್ಕಾನದಲ್ಲಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಪ್ರತಿಭಟನೆಯಲ್ಲಿ ಕಾಸರಗೋಡು ಮುಖಂಡ ಕುಂಟಾರು ರವೀಶ್ ತಂತ್ರಿ, ಕರ್ನಾಟಕದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರಿದ್ದರು.ವಿಹಿಂಪ ಖಂಡನೆ:
ಎಡನೀರು ಶ್ರೀಗಳುಸಂಚರಿಸುತಿದ್ದ ವಾಹನಕ್ಕೆ ಕಿಡಿಗೇಡಿಗಳು ತಡೆಯೊಡ್ಡಿ ಕೃತ್ಯ ಎಸಗಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಖಂಡಿಸಿದೆ. ಪೂಜ್ಯ ಸಾಧು ಸಂತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಕೇರಳ ಸರಕಾರಕ್ಕೆ ಆಗ್ರಹಿಸಿದ್ದಾರೆ.ಬ್ರಾಹ್ಮಣ ಮಹಾಸಭಾ ಆಗ್ರಹ:
ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಗಳು ಸಂಚರಿಸುತ್ತಿದ್ದ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡ್ಡಗಟ್ಟಿ ಹಾನಿಗೊಳಿಸಿರುವುದು ಧರ್ಮದ ಮೇಲಾಗಿರುವ ದಾಳಿಯಾಗಿದ್ದು, ದಾಳಿ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.ಕಿಡಿಗೇಡಿಗಳು ನಡುರಸ್ತೆಯಲ್ಲೇ ಈ ರೀತಿ ಕಾನೂನು ಕೈಗೆತ್ತಿಕೊಂಡು ಹಲ್ಲೆಗೆ ಮುಂದಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದು ಮಹಾಸಭಾದ ಜಿಲ್ಲಾ ಸಂಚಾಲಕ ಶ್ರೀಧರ ಹೊಳ್ಳ ಹೇಳಿದ್ದಾರೆ.ಕೇರಳ ಸರ್ಕಾರ ಸ್ವಾಮೀಜಿ ಮೇಲಿನ ಹಲ್ಲೆ ಯತ್ನ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು. ಮಾತ್ರವಲ್ಲದೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆಯನ್ನು ಕೇರಳ ಸರ್ಕಾರ ನೀಡಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.ಬಾಕ್ಸ್----
ಕ್ರಮಕ್ಕೆ ಆಗ್ರಹಿಸಿ ಕೇರಳ ಸಿಎಂಗೆ ದ.ಕ. ಸಂಸದ ಪತ್ರ ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಗಳು ಸಂಚರಿಸುತ್ತಿದ್ದ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡ್ಡಗಟ್ಟಿ ಹಾನಿಗೊಳಿಸಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಕೇರಳ ಸಿಎಂ ಪಣರಾಯಿ ವಿಜಯನ್ಗೆ ಪತ್ರ ಬರೆದಿದ್ದಾರೆ.ಸುಮಾರು 400 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಎಡನೀರು ಸಂಸ್ಥಾನದ ಪೀಠಾಧಿಪತಿಯಾಗಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಕೇರಳ ಸರ್ಕಾರ ಕೂಡಲೇ ಬಂಧಿಸಿ ಇಂಥಹ ವಿಕೃತಿ ಮನಸ್ಥಿತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸ್ವಾಮೀಜಿಗೆ ಭದ್ರತೆಗೆ ಆಗ್ರಹ:ಕೇರಳ ಸರ್ಕಾರವು ಸ್ವಾಮೀಜಿ ಮೇಲಿನ ಹಲ್ಲೆ ಯತ್ನ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆಯನ್ನು ಸರ್ಕಾರದ ಕಡೆಯಿಂದ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
--------------ಬೋವಿಕಾನದಲ್ಲಿ ಸಂಘಟನೆಯೊಂದು ಸೈಕಲ್ ರ್ಯಾಲಿ ಹಮ್ಮಿಕೊಂಡಿತ್ತು. ಅದರ ಪದಾಧಿಕಾರಿಗಳು ಸಂಚಾರ ನಿಯಂತ್ರಿಸಲು ಮುಂದಾಗಿದ್ದರು. ಆಗ ಎಡನೀರು ಸ್ವಾಮೀಜಿ ಕಾರಿನಲ್ಲಿ ಆಗಮಿಸಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದವರು ಕಾರನ್ನು ತಡೆದಿದ್ದಾರೆ. ಇದನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಳಿಕ ಸಂಘಟಕರು ಸ್ವಾಮೀಜಿ ಬಳಿ ತೆರಳಿ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಯಾವುದೇ ಕೇಸು ದಾಖಲಾಗಿಲ್ಲ.-ಡಿ.ಶಿಲ್ಪಾ, ಎಸ್ಪಿ, ಕಾಸರಗೋಡು.