ಸೋಮರಡ್ಡಿ ಅಳವಂಡಿ
ಹಿಂದೆಂದಿಗಿಂತಲೂ 2024ನೇ ವರ್ಷದಲ್ಲಿ ಮೂರ್ನಾಲ್ಕು ತಿಂಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಈ ರಸ್ತೆಗಳನ್ನು ನೋಡಿದರೆ ಈ ರಸ್ತೆಗಳ ದುರಸ್ತಿ ಮಾಡಿ ಅಥವಾ ಡಾಂಬರು ಹಾಕಿ ಎಷ್ಟು ವರ್ಷವಾಯಿತೋ ಎಂಬ ಭಾವನೆ ಬರದೇ ಇರದು. ವಾಹನ ಸಂಚಾರವಿರಲಿ, ಚಕ್ಕಡಿಗಳೂ ಸಹ ಅಲ್ಲಿ ಸಾಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಣಿಗೆ ಸಂಗ್ರಹಿಸಿ ರಿಪೇರಿಇದರಿಂದ ರೊಚ್ಚಿಗೆದ್ದ ಕಿನ್ನಾಳ ಗ್ರಾಮದ ಯುವಕರು ತಾವೇ ಸ್ವಯಂ ಪ್ರೇರಿತರಾಗಿ ಹಣ ಸಂಗ್ರಹ ಮಾಡಿ, ಕೊಪ್ಪಳದಿಂದ ಕಿನ್ನಾಳ ವರೆಗಿನ ರಸ್ತೆಯನ್ನು ದುರಸ್ತಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಕೊಟ್ಟು ಕೊಟ್ಟು ಸುಸ್ತಾಗಿ, ಕೊನೆಗೆ ವಿಧಿಯಿಲ್ಲದೆ ಗ್ರಾಮದ ಯುವಕರು ಲಕ್ಷಾಂತರ ರುಪಾಯಿ ವೆಚ್ಚ ಮಾಡಿ, ದುರಸ್ತಿ ಮಾಡಿಸಿಕೊಂಡಿದ್ದಾರೆ.
ಇದೊಂದೇ ಪ್ರಕರಣವಲ್ಲ, ತಾಲೂಕಿನ ಕಾತರಕಿ ಗ್ರಾಮದ ರಸ್ತೆಯೂ ತೀವ್ರ ಹದಗೆಟ್ಟು ಹೋಗಿತ್ತು. ಗ್ರಾಮಸ್ಥರು ತಾವೇ ದುಡ್ಡು ಹಾಕಿಕೊಂಡು ಗ್ರಾಮದಲ್ಲಿಯೇ ಇರುವ ಟಿಪ್ಪರ್ ಮತ್ತು ಜೆಸಿಬಿ ಬಳಕೆ ಮಾಡಿಕೊಂಡು ರಸ್ತೆ ದುರಸ್ತಿ ಮಾಡಿಸಿದ್ದಾರೆ.
ಕವಲೂರು ಗ್ರಾಮದ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ತಮ್ಮೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮದಲ್ಲಿ ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ತಹಸೀಲ್ದಾರ್ ಅವರ ಜೀಪ್ ತಳ್ಳಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕವಲೂರು ಗ್ರಾಮಕ್ಕೆ ಹೋಗುವ ಯಾವುದೇ ರಸ್ತೆಯಲ್ಲಿ ಸಂಚಾರ ಮಾಡಿದರೂ ಮೈಕೈಯಲ್ಲಾ ನೋವಾಗುತ್ತದೆ. ಗರ್ಭಿಣಿಯರಿಗೆ ಹೆರಿಗೆಯಾಗುತ್ತದೆ. ರಸ್ತೆಗಳು ಅಷ್ಟು ಹದಗೆಟ್ಟಿವೆ. ಇಂಥ ರಸ್ತೆ ದುರಸ್ತಿಗೆ ಆಗ್ರಹಿಸಿ ಹೋರಾಟ ಮಾಡಿದಾಗ ಗ್ರಾಮಸ್ಥರ ಮೇಲೆಯೇ ಕೇಸ್ ಜಡಿಯಲಾಗಿದೆ.