- ಸಿರಿಗೆರೆ ತರಳಬಾಳು ಶ್ರೀ ಸಾನಿಧ್ಯ, ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರಿಂದ ಉದ್ಘಾಟನೆ: ಅಧ್ಯಕ್ಷ ಬಿ.ಕೆ.ಶಿವಕುಮಾರ ಮಾಹಿತಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ (ದಾಮ್ಕೋಸ್) ರಜತ ಮಹೋತ್ಸವ ಸಮಾರಂಭವನ್ನು ಸೆ.19ರಂದು ನಗರದ ಡಾ.ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಬಿ.ಕೆ.ಶಿವಕುಮಾರ ಹಳೇಬಾತಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ 25ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸುವರು ಎಂದರು.ವಿವಿಧ ಗಣ್ಯರು ಭಾಗಿ:
ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಕೆ.ಎಸ್. ಬಸವಂತಪ್ಪ, ಆರಗ ಜ್ಞಾನೇಂದ್ರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕ ಮಧು ಶ್ರೀನಿವಾಸ, ಮಂಗಳೂರಿನ ಕ್ಯಾಂಪ್ಕೋ ಲಿಮಿಟೆಡ್ ಅಧ್ಯಕ್ಷ ಕಿಶೋರಕುಮಾರ ಕೊಡ್ಲಿ, ದಾವಣಗೆರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ದಾಮ್ಕೊಸ್ ಅಧ್ಯಕ್ಷ ಬಿ.ಕೆ.ಶಿವಕುಮಾರ, ನಿರ್ದೇಶಕರಾದ ಜೆ.ಆರ್.ಷಣ್ಮುಖಪ್ಪ, ಮುದೇಗೌಡ್ರ ಗಿರೀಶ, ಎನ್.ಜಿ.ಪುಟ್ಟಸ್ವಾಮಿ, ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾ ಮಂಡಳ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ದಾಮ್ಕೋಸ್ ಸಂಸ್ಥಾಪಕ ಅಧ್ಯಕ್ಷ ಎಚ್.ಜಯಣ್ಣ, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಆರ್.ಎಂ.ರವಿ ಅಜ್ಜಿಹಳ್ಳಿ ಇತರರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಹೇಳಿದರು.ಕೃಷಿ ಯಂತ್ರೋಪಕರಣ ಮೇಳ:
ಸೆ.18ರಿಂದ 20ರವರೆಗೆ 3 ದಿನಗಳ ಕಾಲ ಕೃಷಿ ಯಂತ್ರ ಮೇಳ ಹಮ್ಮಿಕೊಳ್ಳಲಾಗಿದೆ. ಅಡಕೆ ಕೃಷಿಯಲ್ಲಿ ಬಳಸುವ ಅಡಕೆ ಸುಲಿಯುವ, ಸ್ವಚ್ಛ ಮಾಡುವ, ಒಣಗಿಸುವ ಯಂತ್ರ ಸೇರಿದಂತೆ ರೈತರಿಗೆ ಉಪಯುಕ್ತ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಕೃಷಿ ಯಂತ್ರೋಪಕರಣಗಳು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯ. ಸೆ.20ರ ಬೆಳಗ್ಗೆ 11 ಗಂಟೆಗೆ ಅಡಕೆ ಕೃಷಿ ಹಾಗೂ ಅಡಕೆ ಉದ್ಯಮದ ಹೊಸ ಸಾಧ್ಯತೆಗಳು ವಿಷಯವಾಗಿ ವಿಚಾರ ಸಂಕಿರಣ ನಡೆಯಲಿದೆ. ಪ್ರಗತಿಪರ ಅಡಕೆ ಬೆಳೆಗಾರರು, ಅಡಕೆ ಸಂಸ್ಕರಣೆ, ಸಂಶೋಧನಾ ಕ್ಷೇತ್ರದಲ್ಲಿ ತೊಡಗಿರುವ ಪರಿಣಿತರು, ತಜ್ಞರು, ವಿಜ್ಞಾನಿಗಳು ವಿಚಾರ ಸಂಕಿರಣ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.ಸಂಸ್ಥೆಯ ನಿರ್ದೇಶಕರಾದ ಎಚ್.ಜಿ. ಮಲ್ಲಿಕಾರ್ಜುನ, ಎಚ್.ಜಿ. ಮರುಳಸಿದ್ದಪ್ಪ, ಬಿ.ಬಸವರಾಜಯ್ಯ, ಕೆ.ಜಿ.ಉಮೇಶ, ಎಂ.ಆರ್.ಮಂಜುನಾಥಯ್ಯ, ಜಿ.ಸಿ.ವಾಮದೇವಪ್ಪ, ರಾಂಪುರ ನರೇಂದ್ರ, ಶಿವಕುಮಾರ, ಲಿಂಗರಾಜ ಇತರರು ಇದ್ದರು.
- - -ಬಾಕ್ಸ್ * 1999ರಲ್ಲಿ ಆರಂಭ, 1353 ಸದಸ್ಯರ ನೋಂದಣಿ ದಾಮ್ಕೋಸ್ ಅನ್ನು 1999ರಲ್ಲಿ ಆರಂಭಿಸಿದ್ದು, 2000ರಲ್ಲಿ ಅಡಕೆ ಮಾರುಕಟ್ಟೆ ಉದ್ಘಾಟಿಸಲಾಯಿತು. 2006ರಲ್ಲಿ ಕ್ಯಾಂಪ್ಕೋ ಸಹಭಾಗಿತ್ವದಲ್ಲಿ ರೈತರಿಗೆ ನೇರವಾಗಿ ಅಡಕೆ ಖರೀದಿಸುವ ಕೇಂದ್ರ ಸ್ಥಾಪಿಸಲಾಯಿತು. ಷೇರುದಾರರಿಗೆ ಶೇ.12ರಿಂದ 16ರಷ್ಟು ಡಿವಿಡೆಂಟ್ ಸಹ ನೀಡುತ್ತಿದೆ. ಕೊರೋನಾ ಹಾವಳಿ ಕಾಲದಲ್ಲೂ ಡಿವಿಡೆಂಟ್ ಕೊಟ್ಟ ಶ್ರೇಯ ಸಂಸ್ಥೆಗೆ ಸಲ್ಲುತ್ತದೆ. 2023-24ನೇ ಸಾಲಿನ ಅಂತ್ಯದಲ್ಲಿ ಒಟ್ಟು 1353 ಸದಸ್ಯರು ನೋಂದಣಿಯಾಗಿದ್ದಾರೆ. ದಾವಣಗೆರೆ ತಾಲೂಕಿನಲ್ಲಿ 15-20 ಸಾವಿರ ಅಡಕೆ ಬೆಳೆಗಾರರಿದ್ದು, ಆ ಎಲ್ಲರನ್ನೂ ಷೇರುದಾರರಿಗೆ ಮಾಡುವ ಗುರಿ, ಉದ್ದೇಶ ಇದೆ ಎಂದು ಶಿವಕುಮಾರ ಮಾಹಿತಿ ನೀಡಿದರು. ₹10 ಕೋಟಿ ಮೌಲ್ಯದ ಆಸ್ತಿ: ಆರಂಭದಲ್ಲಿ ಕೇವಲ ₹14 ಲಕ್ಷ ಇದ್ದ ಷೇರು ಮೊತ್ತ ಈಗ ₹45 ಲಕ್ಷಕ್ಕೆ ಏರಿಕೆಯಾಗಿದೆ. ಸಂಸ್ಥೆ ಸ್ಥಾಪಿಸಿದ್ದ ವೇಳೆ ಅಡಕೆ ಖರೀದಿಗೂ ಹಣ ಇರಲಿಲ್ಲ. ಈಗ ಸಂಸ್ಥೆ ₹10 ಕೋಟಿ ಮೌಲ್ಯದ ಆಸ್ತಿ ಮಾಡಿದೆ. ಅಡಕೆಯಿಂದ ಉಪ್ಪಿನಕಾಯಿ, ಸುಪಾರಿ ಪಾಕ್ ಸೇರಿದಂತೆ ವಿವಿಧ ತಿನಿಸು, ಪಾನೀಯ ಮಾಡುವ ಕೆಲಸಲಾಗುತ್ತಿದೆ. ಅಡಕೆಯಿಂದ ಉಪ ಉತ್ಪನ್ನ ತಯಾರಿಸುವ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಈ ಹಿಂದೆ ಸಂಸದರಿದ್ದ ಜಿ.ಎಂ.ಸಿದ್ದೇಶ್ವರ, ಸಚಿವರಿದ್ದ ಎಸ್.ಎ. ರವೀಂದ್ರನಾಥ ಪ್ರಯತ್ನದಿಂದ ಸಂಸ್ಥೆಗೆ ಕಡಿಮೆ ಬೆಲೆಗೆ ತಾಲೂಕು ಕಚೇರಿ ಬಳಿ 6200 ಅಡಿ ಜಾಗ ಕೊಡಿಸಿದ್ದರು ಎಂದು ಅವರು ಸ್ಮರಿಸಿದರು. ಬೆಳೆಗಾರರಿಗೆ ಆಸರೆ ಮುಖ್ಯ ಉದ್ದೇಶ: ₹5 ಸಾವಿರ ಷೇರು ಮೊತ್ತವಿದ್ದು, ಸಂಸ್ಥೆಯು ವಾರ್ಷಿಕ ₹30 ಕೋಟಿ ವಹಿವಾಟು ನಡೆಸಿದೆ. ಸರ್ಕಾರಕ್ಕೆ ₹80 ಲಕ್ಷ ಜಿಎಸ್ಟಿ, ₹8 ಲಕ್ಷ ಆರ್ಎಂಸಿ ಕಟ್ಟುತ್ತಿದ್ದ, ₹30 ಲಕ್ಷ ಲಾಭದಲ್ಲಿದೆ. ನಮ್ಮದು ಲಾಭದ ಉದ್ದೇಶದ ಸಂಸ್ಥೆಯಲ್ಲ. ಒಳ್ಳೆಯ ಧಾರಣೆ, ಬೆಲೆ ಕುಸಿತವಾದಾಗ ಅಡಕೆ ಸಂರಕ್ಷಣೆ ಮಾಡಿ, ಬೆಳೆಗಾರರಿಗೆ ಆಸರೆ ಆಗುವುದು ಸಂಸ್ಥೆಯ ಉದ್ದೇಶ. ಸರ್ಕಾರ ಮನಸ್ಸು ಮಾಡಿದರೆ, ಅಬಕಾರಿ ಇಲಾಖೆಗಿಂತಲೂ ಹೆಚ್ಚು ಆದಾಯವು ಅಡಕೆ ಬೆಳೆಯಿಂದಲೇ ಬರುತ್ತದೆ. ಇದಕ್ಕೆ ಅಕೌಂಟ್ ಮೂಲಕವೇ ರೈತರು ಅಡಕೆ ಮಾರಿದರೆ ಇದೆಲ್ಲವೂ ಸಾಧ್ಯವಾಗಲಿದೆ ಎಂದು ತಿಳಿಸಿದರು.- - - -14ಕೆಡಿವಿಜಿ3:
ದಾವಣಗೆರೆಯಲ್ಲಿ ದಾಮ್ಕೋಸ್ ಅಧ್ಯಕ್ಷ ಬಿ.ಕೆ.ಶಿವಕುಮಾರ ಹಳೆಬಾತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.