ಕನ್ನಡಪ್ರಭ ವಾರ್ತೆ ಹಾಸನಹಾಸನಾಂಬಾ ಕಲಾಕ್ಷೇತ್ರವು ಅಪರೂಪದ ನೃತ್ಯ ವೈಭವಕ್ಕೆ ಸಾಕ್ಷಿಯಾಯಿತು. ಅಭಿಜ್ಞಾ ಟ್ರಸ್ಟ್ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಆಯೋಜಿಸಲಾಗಿದ್ದ ಕುಮಾರಿ ಸ್ಮೃತಿಶ್ರೀ ಶ್ರೀ ಡಿ. ನಾವದ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ಜರುಗಿತು. ವಿದುಷಿ ಸಮೀಕ್ಷಾ ಕೆ.ಎಂ. ಅವರ ಗರಡಿಯಲ್ಲಿ ಪಳಗಿದ ಸ್ಮೃತಿಶ್ರೀ , ತಮ್ಮ ಮೊದಲ ಅಧಿಕೃತ ವೇದಿಕೆ ಪ್ರದರ್ಶನದಲ್ಲಿಯೇ ಹಿರಿಯ ಕಲಾವಿದರನ್ನೂ ಬೆರಗುಗೊಳಿಸುವಂತಹ ಪ್ರೌಢಿಮೆಯನ್ನು ಮೆರೆದರು. ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಸ್ಮೃತಿಶ್ರೀ, ಕೇವಲ ನೃತ್ಯ ಮಾತ್ರವಲ್ಲದೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣಾ ವಾದನದಲ್ಲಿಯೂ ಪ್ರಭುತ್ವ ಸಾಧಿಸಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಯಿತು. ಕಾರ್ಯಕ್ರಮವು ಪುಷ್ಪಾಂಜಲಿಯೊಂದಿಗೆ ಸಾಂಪ್ರದಾಯಿಕವಾಗಿ ಆರಂಭವಾಯಿತು. ಜತಿಸ್ವರಂನಲ್ಲಿನ ಅವರ ಲಯಬದ್ಧ ಪಾದವಿನ್ಯಾಸ ಮತ್ತು ವರ್ಣಂ ಪ್ರಸ್ತುತಿಯಲ್ಲಿ ಕಂಡುಬಂದ ಅಭಿನಯ ಚಾತುರ್ಯವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ವಿಶೇಷವಾಗಿ ಸಂತ ತುಳಸಿದಾಸರ ಶ್ರೀರಾಮಚಂದ್ರ ಕೃಪಾಲು ಭಜಮನು ಭಜನೆಗೆ ಸ್ಮೃತಿಶ್ರೀ ನೀಡಿದ ಪ್ರದರ್ಶನವು ಕಾರ್ಯಕ್ರಮದ ಮುಕುಟಪ್ರಾಯವಾಗಿತ್ತು. ಈ ಭಜನೆಯ ಪ್ರತಿ ಸಾಲಿಗೂ ಅನುಗುಣವಾಗಿ ಅವರು ತೋರಿದ ಶ್ರೀರಾಮನ ವಿವಿಧ ರೂಪಗಳು, ಧೈರ್ಯ ಮತ್ತು ಕಾರುಣ್ಯದ ಮುದ್ರೆಗಳು ಕಲಾಭವನದಲ್ಲಿ ಸಾಕ್ಷಾತ್ ರಾಮಚಂದ್ರನನ್ನೇ ಆಹ್ವಾನಿಸಿದಂತಹ ಭಕ್ತಿಪರವಶ ವಾತಾವರಣವನ್ನು ನಿರ್ಮಿಸಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಅವರು ಜ್ಯೋತಿ ಬೆಳಗಿಸಿ ಸಂಸ್ಕೃತಿ ಅವರಿಗೆ ಹರಸಿದರು. ಭರತನಾಟ್ಯ ಎಂಬುದು ಕೇವಲ ಪ್ರದರ್ಶಕ ಕಲೆಯಲ್ಲ, ಅದು ಭಾರತದ ದೈವೀ ಶಕ್ತಿ ಹಾಗೂ ಋಷಿ-ಮುನಿಗಳ ತಪಸ್ಸಿನ ಪ್ರತೀಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸ್ಮöÈತಿಶ್ರೀ ಅವರ ಅಜ್ಜ ಶ್ರೇಷ್ಠ ಯಕ್ಷಗಾನ ಕಲಾವಿದರಾಗಿದ್ದು, ಆ ಕಲಾ ಪರಂಪರೆಯು ಇಂದು ಮೊಮ್ಮಗಳ ಮೂಲಕ ಭರತನಾಟ್ಯವಾಗಿ ಅರಳುತ್ತಿರುವುದು ವಿಶೇಷ ಎಂದು ಶ್ಲಾಘಿಸಿದರು. ಮೈಸೂರಿನ ನೃತ್ಯಗಿರಿ ಸಂಶೋಧನಾ ಕೇಂದ್ರದ ನಿರ್ದೇಶಕಿ ವಿದುಷಿ ಡಾ. ಕೃಪಾ ಫಡ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.ಸಂಗೀತ ಸಹಕಾರದಲ್ಲಿ ನಟುವಾಂಗ ನೀಡಿದ ವಿದುಷಿ ಸಮೀಕ್ಷಾ, ಗಾಯನದಲ್ಲಿ ವಿದ್ವಾನ್ ದೀಪು ಕರುಣಾಕರನ್, ಮೃದಂಗದಲ್ಲಿ ವಿದ್ವಾನ್ ಶಿವಪ್ರಸಾದ್ ಹಾಗೂ ಕೊಳಲಿನಲ್ಲಿ ವಿದ್ವಾನ್ ಎ.ಪಿ. ಕೃಷ್ಣ ಪ್ರಸಾದ್ ಅವರ ಜುಗಲ್ಬಂದಿ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿತು. ಕೆ.ವಿ. ದಿನೇಶ್ ಭಟ್ ಹಾಗೂ ಎ.ವಿ. ಸುಬ್ಬಲಕ್ಷ್ಮೀ ದಂಪತಿಯ ಪುತ್ರಿಯ ಸಾಧನೆಗೆ ಜಿಲ್ಲೆಯ ಅನೇಕ ಸಾಂಸ್ಕೃತಿಕ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದರು.