ಕನ್ನಡಪ್ರಭವಾರ್ತೆ ಸೋಮವಾರಪೇಟೆ
ನವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಕಾರ್ಯಕ್ರಮವನ್ನು ಈಶ್ವರೀಯ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿದ್ದು, 12ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 8ರ ವರೆಗೆ ಕಾರ್ಯಕ್ರಮ ನಡೆಯಲಿದೆ. 14ರಿಂದ ಮಿನಿ ವಿಧಾನಸೌಧ ಹಿಂಬದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ‘ನೆಮ್ಮದಿಯ ಜೀವನಕ್ಕೆ ಧ್ಯಾನವೇ ದಿವ್ಯ ಔಷಧಿ ಬಗ್ಗೆ ಉಚಿತ ಪ್ರವಚನ ನಡೆಯಲಿದೆ ಎಂದು ಮೈಸೂರು ವಲಯದ ಪ್ರಧಾನ ಸಂಚಾಲಕಿ ಬಿ.ಕೆ. ಲಕ್ಷಿ ತಿಳಿಸಿದರು.ಪ್ರವಚನ ನೀಡಿದ ಅವರು, ಭಾರತ ಆಧ್ಯಾತ್ಮಿಕ ದೇಶವಾಗಿದ್ದು, ಇಡೀ ಪ್ರಪಂಚಕ್ಕೆ ಜ್ಞಾನ ಹಂಚುವ ಶಕ್ತಿಯಿದೆ. ಆಧುನಿಕ ಯುಗದಲ್ಲಿ ಮನಸ್ಸುಗಳು ಹಂಚಿಹೋಗಿದ್ದು, ಇವುಗಳನ್ನು ಒಂದುಗೂಡಿಸುವ ಶಕ್ತಿ ಆಧ್ಯಾತ್ಮಿಕಕ್ಕೆ ಇದೆ ಎಂದರು.ಆಧ್ಯಾತ್ಮಿಕ ಜ್ಞಾನದಿಂದ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಕಾರಾತ್ಮಕ ಚಿಂತನೆಯಿಂದ ದೂರ ಉಳಿಯಲು ಇದು ಸಹಕಾರಿಯಾಗಿದೆ. ಕರ್ಮದಲ್ಲಿ ಶುದ್ಧತೆಯಿಟ್ಟುಕೊಳ್ಳಬೇಕು. ಕರ್ಮ ಶ್ರೇಷ್ಠತೆ ಮಾತ್ರ ಮಾನವನನ್ನು ಮರಣಾನಂತರವೂ ಹಿಂಬಾಲಿಸುತ್ತದೆ ಎಂದು ತಿಳಿ ಹೇಳಿದರು.ಜೀವನವನ್ನು ಸುಧಾರಿಸಿಕೊಳ್ಳಲು ಭಗವಂತನು ಕಲಿಸುವ ರಾಜಯೋಗವು ಸಹಕಾರಿಯಾಗುತ್ತದೆ. ದಿನದ 24 ಗಂಟೆಯಲ್ಲಿ ಒಂದು ಗಂಟೆಯನ್ನು ಆಧ್ಯಾತ್ಮಿಕ ಪ್ರವಚನ ಕೇಳಲು ಮೀಸಲಿಟ್ಟರೆ ಆರೋಗ್ಯ, ನೆಮ್ಮದಿ ಲಭಿಸುತ್ತದೆ ಎಂದ ಅವರು, ರಾಜಯೋಗ ಕಾರ್ಯಕ್ರಮದಲ್ಲಿ ನೀತಿ ಶಿಕ್ಷಣದ ಜೊತೆಗೆ ವ್ಯಸನಮುಕ್ತ ಆಂದೋಲನವನ್ನು ನಡೆಸಲಾಗುತ್ತಿದೆ ಎಂದರು.ಈ ಸಂದರ್ಭ ವಿರಾಜಪೇಟೆ ಸೆಂಟರ್ನ ಸಂಚಾಲಕಿ ಬಿ.ಕೆ. ಕೋಮಲ, ಮೈಸೂರು ವಿದ್ಯಾರಣ್ಯಪುರದ ಸಂಚಾಲಕಿ ಬಿ.ಕೆ. ಯತ್ನ, ಜಯಲಕ್ಷ್ಮೀಪುರಂ ಸೆಂಟರ್ನ ಜಯಂತಿ, ಕುಶಾಲನಗರದ ಪಶು ವೈದ್ಯರಾದ ಡಾ. ಮೋಟಯ್ಯ ಅವರು ಉಪಸ್ಥಿತರಿದ್ದರು.