ದತ್ತಮಾಲಾ ಅಭಿಯಾನ: 42 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ

KannadaprabhaNewsNetwork |  
Published : Nov 06, 2024, 12:38 AM IST
ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ. | Kannada Prabha

ಸಾರಾಂಶ

ಚಿಕ್ಕಮಗಳೂರು, ಶ್ರೀರಾಮ ಸೇನೆ ನ. 4 ರಿಂದ 10 ರವರೆಗೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಕಾರ್ಯ ಕ್ರಮದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ 42 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ( ಸ್ಪೆಷಲ್‌ ಸೆಕ್ಟರ್‌ ಮ್ಯಾಜಿಸ್ಟೇಟ್‌) ಗಳನ್ನು ನೇಮಕ ಮಾಡಿದೆ.

ನ. 10 ರವರೆಗೆ ಕಾರ್ಯನಿರ್ವಹಣೆ, ಜಿಲ್ಲೆಯಲ್ಲಿ 32 ಚೆಕ್‌ ಪೋಸ್ಟ್‌, ಪ್ರವಾಸಿಗರಿಗೆ ನಿರ್ಬಂಧ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರೀರಾಮ ಸೇನೆ ನ. 4 ರಿಂದ 10 ರವರೆಗೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಕಾರ್ಯ ಕ್ರಮದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ 42 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ( ಸ್ಪೆಷಲ್‌ ಸೆಕ್ಟರ್‌ ಮ್ಯಾಜಿಸ್ಟೇಟ್‌) ಗಳನ್ನು ನೇಮಕ ಮಾಡಿದೆ.

ಜಿಲ್ಲೆಯಾದ್ಯಂತ ತೆರೆಯಲಾಗಿರುವ 32 ಚೆಕ್‌ ಪೋಸ್ಟ್‌ಗಳಲ್ಲಿ ತಲಾ ಓರ್ವರಂತೆ 32 ಮಂದಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇನ್ನುಳಿದ ಕಡೆಗಳಲ್ಲಿ ತಕ್ಷಣಕ್ಕೆ ಕಾರ್ಯ ಪ್ರವೃತ್ತರಾಗಲು 10 ಮಂದಿ ಅಧಿಕಾರಿಗಳಿಗೆ ಮೀಸಲು (ರಿಸರ್ವೆ) ವ್ಯವಸ್ಥೆ ಮಾಡಲಾಗಿದೆ. ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವುದು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಲು ಈ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಈ ಅಧಿಕಾರಿಗಳು ಸೋಮವಾರವೇ ನಿಯೋಜನೆ ಮಾಡಲಾಗಿದ್ದು, ನ.10 ಸಂಜೆ ವರೆಗೆ ಕಾರ್ಯನಿರ್ವಹಿಸಲಿದ್ದಾರೆ.ನಾಳೆ ದತ್ತ ದೀಪ ಅಭಿಯಾನ:

ಶ್ರೀರಾಮ ಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಈಗಾಗಲೇ ದತ್ತಮಾಲೆ ಧರಿಸಿದ್ದಾರೆ. ಅಭಿಯಾನದ ಹಿನ್ನಲೆಯಲ್ಲಿ ನ. 7 ರಂದು ಸಂಜೆ ದತ್ತ ದೀಪ ಅಭಿಯಾನ ನಡೆಯಲಿದೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈ ಕಾರ್ಯಕ್ರಮ ಜರುಗಲಿದೆ.

ನ. 9 ರಂದು ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ದತ್ತಮಾಲಾಧಾರಿಗಳಿಂದ ಭಿಕ್ಷಾಟನೆ ನಡೆಯಲಿದ್ದು, ನ. 10 ರಂದು ಚಿಕ್ಕ ಮಗಳೂರಿನಲ್ಲಿ ಶೋಭಾಯಾತ್ರೆ ನಡೆದ ಬಳಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಲಿದ್ದಾರೆ.

--- ಬಾಕ್ಸ್‌--ನ. 9 ರಿಂದ 11 ರವರೆಗೆ ಪ್ರವಾಸಿಗರಿಗೆ ನಿರ್ಬಂಧಚಿಕ್ಕಮಗಳೂರು: ಶ್ರೀರಾಮ ಸೇನೆ ಸಂಘಟನೆಯವರು ನ. 4 ರಿಂದ ನ. 10ರವರೆಗೆ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, ನ. 10 ರಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಾಹನಗಳಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ಆಗಮಿಸುವುದರಿಂದ ಇಲ್ಲಿಗೆ ತೆರಳುವ ರಸ್ತೆ ತುಂಬಾ ಕಿರಿದಾಗಿದೆ. ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನ ಸಂದಣಿಯಾಗಿ ಅನಾನುಕೂಲವಾಗುವ ಸಂಭವವಿರುವುದರಿಂದ ನ. 9 ರ ಬೆಳಿಗ್ಗೆ 6 ರಿಂದ ನ. 11 ರ ಬೆಳಿಗ್ಗೆ 6 ರವರೆಗೆ ಯಾವುದೇ ಪ್ರವಾಸಿಗರು, ಯಾತ್ರಾರ್ಥಿಗಳು ಬರುವುದನ್ನು, ಭೇಟಿ ನೀಡುವುದನ್ನು ನಿರ್ಬಂಧಿ ಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಮತ್ತು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ದತ್ತಮಾಲಾಧಾರಿಗಳು ಶ್ರೀರಾಮ ಸೇನಾ ಮುಖಂಡರು, ಕಾರ್ಯಕರ್ತರು ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ಬರುವ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುವ ವರು ಮತ್ತು ಈಗಾಗಲೇ ಹೋಮ್ ಸ್ಟೇ, ರೆಸಾರ್ಟ್‌ಗಳನ್ನು ಬುಕ್ಕಿಂಗ್ ಮಾಡಿಕೊಂಡವರನ್ನು ಹೊರತುಪಡಿಸಿ ಇತರೆ ಯಾವುದೇ ಪ್ರವಾಸಿಗರು ಯಾತ್ರಾರ್ಥಿಗಳು ಬರುವುದನ್ನು, ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

--ವಾಹನ ಸಂಚಾರ ನಿಷೇಧ

ಚಿಕ್ಕಮಗಳೂರು: ಇಲ್ಲಿನ ಅತ್ತಿಗುಂಡಿ ಸಮೀಪ ಕವಿಕಲ್ ಗಂಡಿ ಅರಣ್ಯ ಚೆಕ್ ಪೋಸ್ಟ್ ಬಳಿಯಿಂದ ಸಿಎನ್‌ಆರ್‌ ಹೋಂ ಸ್ಟೇ ವರೆಗಿನ ಭಾಗದಲ್ಲಿ ಅತಿಯಾದ ಮಳೆಯಿಂದ ರಸ್ತೆ ಕುಸಿದಿದ್ದು, ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಶಾಶ್ವತ ದುರಸ್ತಿ ಕಾರ್ಯದ ಕಾಮಗಾರಿಯು ಟೆಂಡರ್ ಪ್ರಕ್ರಿಯೆಯಲ್ಲಿದೆ. ಈ ಬಾಧಿತ ಸ್ಥಳದಲ್ಲಿ ರಸ್ತೆ ಅಗಲ ಕಡಿಮೆಯಿದ್ದು, ಒಂದು ಬಾರಿಗೆ ಕೇವಲ ಒಂದೇ ವಾಹನ ಸಂಚರಿಸಲು ಮಾತ್ರವೇ ಅವಕಾಶವಿದ್ದು ವಾಹನಗಳ ಸಂಚಾರ ಅಪಾಯಕಾರಿಯಾಗಿದೆ. ಆದ್ದರಿಂದ ಶಾಶ್ವತ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಈ ಭಾಗದಲ್ಲಿ ಎಲ್ಲಾ ರೀತಿಯ ಎರಡು ಆಕ್ಸಲ್‌ಗಿಂತ ಹೆಚ್ಚಿನ ಆಕ್ಸಲ್‌ಗಳನ್ನು ಹೊಂದಿರುವ ಲಾರಿ ಮತ್ತು ಬಸ್ಸುಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. 5 ಕೆಸಿಕೆಎಂ 4ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ.( ಸಾಂಧರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ