ಕನಕಪುರ: ಜಮೀನು ಖಾತೆ ಸಮಸ್ಯೆ, ಭೂ ವ್ಯಾಜ್ಯ, ಮನೆ ಖಾತೆ, ನಿವೇಶನ, ಗುತ್ತಿಗೆ ಆಧಾರದ ಮೇಲೆ, ಅನುಕಂಪದ ಆಧಾರದ ಮೇಲೆ ಉದ್ಯೋಗ,ಹಾಸ್ಟೆಲ್ ಸೀಟು,ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸಮಸ್ಯೆಗಳ ಅರ್ಜಿ ಹೊತ್ತು ಬಂದಿದ್ದ ನೂರಾರು ಜನರ ಅಹವಾಲುಗಳನ್ನು ಕನಕಪುರ ಕ್ಷೇತ್ರದ ಶಾಸಕ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ವೀಕರಿಸಿ, ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕ್ಷೇತ್ರದ ಜನರ ಅಹವಾಲು ಸ್ವೀಕರಿಸಲು ಪ್ರತಿ 2 ಹಾಗೂ 4ನೇ ಶನಿವಾರ ಮೀಸಲಿಡುವುದಾಗಿ ಹೇಳಿದ್ದ ಶಿವಕುಮಾರ್ ಅವರು ತಮ್ಮ ಮಾತಿನಂತೆ ಕನಕಪುರದ ನಿವಾಸದ ಬಳಿ ಶನಿವಾರ ಜನರ ಕಷ್ಟಗಳನ್ನು ಆಲಿಸಿದರು.
ನಿವೇಶನವನ್ನು ಖಾತೆ ಮಾಡಿಕೊಡಲು ಸತಾಯಿಸುತ್ತಿದ್ದೀರಂತೇ? ಸಾರ್ವಜನಿಕರು ನನ್ನ ಮೊಬೈಲ್ ಗೆ ಸಂದೇಶ ಕಳುಹಿಸುತ್ತಿದ್ದಾರೆ. ಕರೆ ಮಾಡಿ ಕಷ್ಟ ಹೇಳಿ ಕೊಳ್ಳುತ್ತಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಏನು ಕೆಲಸ ಮಾಡುತ್ತಿದ್ದೀರಿ? ಜನರನ್ನು ಬೆಳಗ್ಗೆ, ಸಾಯಂಕಾಲ ಅಲೆದಾಡಿಸುದ್ದೀರಾ? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾರು? ಎಂದು ಶಿವಕುಮಾರ್ ತಾಪಂ ಇಒಗೆ ತರಾಟೆಗೆ ತೆಗೆದುಕೊಂಡರು. ಮಹಿಳೆಯೊಬ್ಬರು ಸ್ವಾಮಿ ತಾವು ನೀಡಿದ ನಿವೇಶನದ ಖಾತೆ ಮಾಡಿಕೊಡಲು ಅಲೆದಾಡಿಸುತ್ತಿದ್ದಾರೆ ಎಂದು ದೂರಿದಾಗ, ಕಾನೂನು ಬದ್ಧವಾಗಿದ್ದರೆ ಯಾವುದೇ ಅರ್ಜಿಗಳನ್ನು ಒಂದು ದಿನದ ಮೇಲೆ ಇಟ್ಟುಕೊಳ್ಳಬಾರದು ಸಂಬಂಧಪಟ್ಟ ಅಧಿಕಾರಿ ಮತ್ತು ಕೇಸ್ ವರ್ಕರ್ ಗಳಿಗೆ ಸೂಚನೆ ನೀಡಿ ಎಂದಾಗ ಇನ್ನೆರಡು ದಿನದಲ್ಲಿ ಈ ಸಮಸ್ಯೆ ಪರಿಹರಿಸುತ್ತೇವೆ ಎಂದು ಅಧಿಕಾರಿ ಡಿಸಿಎಂಗೆ ತಿಳಿಸಿದರು.
ಮನೆ ಮತ್ತು ನಿವೇಶನ ಬೇಕು ಎಂದು ಅರ್ಜಿ ಸಲ್ಲಿಸಿದವರಿಗೆ ಪ್ರತ್ಯೇಕ ಅರ್ಜಿ ನಮೂನೆ ಕೊಡಲಾಗುವುದು. ಆಗ ಸಮಸ್ಯೆ ಇರುವ ಸಾರ್ವಜನಿಕರು ಅರ್ಜಿ ಹಾಕಬಹುದು, ನೀವು ಕೊಟ್ಟಿರುವ ಮನೆ ಮಹಿಳೆಗೆ ಸಿಗುತ್ತದೆಯೋ, ಇಲ್ಲವೋ ಎಂದು ವಯೋ ವೃದ್ಧರೊಬ್ಬರು ಮನವಿ ಸಲ್ಲಿಸಿದಾಗ, ಅವರ ಅರ್ಜಿಯನ್ನು ಪರಿಶೀಲಿಸಿದ ಡಿಸಿಎಂ ಅವರು "ಹೆದರಬೇಡಿ, ನಿಮಗೆ ಮನೆ ದೊರೆಯುತ್ತದೆ. ಸ್ವಲ್ಪ ದಿನದಲ್ಲಿ ನಿಮ್ಮ ಹೆಸರಿಗೆ ಆಗುತ್ತದೆ ಎಂದು ಭರವಸೆ ನೀಡಿದರು.
ಕಂಪ್ಯೂಟರ್ ಸೈನ್ಸ್ ಓದಬೇಕು, ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಕೊಡಿಸಿ ಎಂದು ವಿದ್ಯಾರ್ಥಿನಿಯೊಬ್ಬರು ಮನವಿ ಸಲ್ಲಿಸಿದಾಗ ನಾಗಮಂಗಲದಲ್ಲಿ ಓದಬಹುದಾ? ಚುಂಚನಗಿರಿ ಸ್ವಾಮೀಜಿಯವರಿಗೆ ಲೆಟರ್ ಹಾಕಿಸುತ್ತೇವೆ. ಹೋಗಿ ಕಾಲೇಜಿನವರನ್ನು ಸಂಪರ್ಕಿಸಿ. ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆ. ಮುಂದೆ ಚೆನ್ನಾಗಿ ಓದು, ಒಳ್ಳೆಯದಾಗಲಿ ಎಂದು ಹಾರೈಸಿದರು.
ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿನಿಯೊಬ್ಬರು ತಾಲೂಕಿನ ಯಾವುದಾದರೂ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸಿ ಎಂದು ಮನವಿ ಮಾಡಿದಾಗ, ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ನೀಡಿ "ಕೂಡಲೇ ಈ ಹುಡುಗಿಗೆ ಕೆಲಸ ಕೊಡಿಸಿ " ಎಂದು ಆದೇಶಿಸಿದರು.
ಆಸ್ತಿ ವ್ಯಾಜ್ಯ ಸಂಬಂಧ ಸಮಸ್ಯೆ ಬಗೆಹರಿಸಿ ಎಂದು ಮನವಿ ಸಲ್ಲಿಸಿದವರಿಗೆ, "ಆಸ್ತಿ ವ್ಯಾಜ್ಯ ಇಟ್ಟುಕೊಂಡು ಕೋರ್ಟು, ಕಚೇರಿಗೆ ಏಕೆ ಅಲೆಯುತ್ತೀರಿ? ರಾಜಿ ಪಂಚಾಯಿತಿ ಮಾಡಿಕೊಂಡು ನಿಮ್ಮ ನಿಮ್ಮಲ್ಲೇ ಬಗೆಹರಿಸಿಕೊಳ್ಳಿ. ಅಧಿಕಾರಿಗಳಿಗೆ ಮತ್ತು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಶೀಘ್ರ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚನ್ನಪಟ್ಟಣದಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದಂತೆ ಇಲ್ಲಿಯೂ ಜನ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಕೇಳಿದಾಗ, “ಇಲ್ಲಿ ಈಗಾಗಲೇ ನಾನು 100 ಎಕರೆಯಷ್ಟು ಜಾಗದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಿದ್ದೇನೆ. ರಾಮನಗರದಲ್ಲೂ ಬಡವರಿಗೆ ನೀಡಲು ನಿವೇಶನ ಸಿದ್ಧ ಮಾಡಲಾಗುತ್ತಿದೆ. ಚನ್ನಪಟ್ಟಣದಲ್ಲಿ 112 ಎಕರೆಯಷ್ಟು ಜಮೀನು ಗುರುತಿಸಲಾಗಿದೆ . ಅಗತ್ಯ ಬಿದ್ದರೆ ಜಮೀನು ಖರೀದಿ ಮಾಡುತ್ತೇವೆ. ಖಾಸಗಿಯವರು ಜಮೀನು ನೀಡಲು ಮುಂದೆ ಬಂದರೆ ಮಾರುಕಟ್ಟೆ ದರದಲ್ಲಿ ಮಾರ್ಗಸೂಚಿ ಅನುಸಾರ ಹಣ ನೀಡಿ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.