ಕನ್ನಡಪ್ರಭ ವಾರ್ತೆ ಜಗಳೂರು
ಜಗಜ್ಯೋತಿ ಬಸವಣ್ಣನವರ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮೂರು ದಿನ ಕಾಲ ನಡೆದ ಸಾಣೇಹಳ್ಳಿ ಶಿವ ಸಂಚಾರ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ ಕಲ್ಯಾಣದ ಕಣ್ಮಣಿ ಬಸವಣ್ಣನವರ ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿ ಘೋಷಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ವಿವಿಧ ಮಠಾಧೀಶರು, ಪ್ರಗತಿಪರ ಸಂಘಟನೆಗಳು ಸೇರಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದೆವು ಎಂದರು.
ಬಸವಣ್ಣನವರ ಸಾಂಸ್ಕೃತಿಕ ನೇತಾರ ಎಂದು ಘೋಷಿಸಿದ್ದರಿಂದ ಬಸವಣ್ಣ ಯಾರು? ಎಂದು ಪ್ರತಿಯೊಬ್ಬರಿಗೂ ಯೋಚನೆ ಹುಟ್ಟುತ್ತದೆ. ಬಸವಣ್ಣನಿಂದ ಸಮಾಜಕ್ಕೆ ಕೊಡುಗೆ ಏನು? ಅಷ್ಟೇ ಅಲ್ಲ ಬಸವಣ್ಣನವರ ಸಂದೇಶ ತಿಳಿದುಕೊಳ್ಳಲು ಜನ ಸಾಮಾನ್ಯರಲ್ಲಿ ಕುತೂಹಲ ಉಂಟಾಗುತ್ತದೆ ಎಂದು ಹೇಳಿದರು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿ, ಆರ್ಥಿಕ ತಜ್ಞ, ಸಮಾಜ ಸುಧಾರಕರಾಗಿ ಬಸವಣ್ಣ ಮಾಡಿದ ಕ್ರಾಂತಿ ಪರಿಣಾಮ ಅವರನ್ನು ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂದು ಶ್ರೀಗಳು ಆಗ್ರಹಿಸಿದರು.100ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯ: ಶಾಸಕ
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನಾನೂ ಮೂಲತಃ ಕಲಾವಿದ, ಗುರು ಪರಂಪರೆ ಅನುಗ್ರಹದಿಂದ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ತರಳಬಾಳು ಮಠದ ಭಕ್ತರಾದ ನನ್ನ ಗುರುಗಳಾದ ಡಾ.ಟಿ.ತಿಪ್ಪೇಸ್ವಾಮಿಯವರಿಂದ ಮಾರ್ಗದರ್ಶನದಿಂದ ಸಾಕಷ್ಟು ಕಲಿತೆ. ಶರಣ ಸತಿ ಲಿಂಗಪತಿ, ಜೋಕುಮಾರಸ್ವಾಮಿ ನಾಟಕಗಳಲ್ಲಿ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದೇನೆ. 12ನೇ ಶತಮಾನದ ಕಲ್ಯಾಣ ಪರಂಪರೆಯನ್ನು ಪಂಡಿತಾರಾಧ್ಯ ಶ್ರೀಗಳಲ್ಲಿ ಕಾಣುತ್ತಿದ್ದೇನೆ ಎಂದರು.ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಹೃದಯವನ್ನು ಕಟ್ಟುವ ಹಾಗೆ, ಮನಸ್ಸು ಮುಟ್ಟುವಹಾಗೆ ಬದುಕಬೇಕು. ಯಾರಿಗೆ ಅನುಮಾನ ಹೊಟ್ಟೆ ಕಿಚ್ಚು ಇರುತ್ತದೋ ಅವರು ನಾಶವಾಗುತ್ತಾರೆ ಎಂದರು.
ಆರೈಕೆ ಆಸ್ಪತ್ರೆ ಮುಖ್ಯಸ್ಥ, ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಟಿ.ಜಿ. ರವಿಕುಮಾರ್ ಮಾತನಾಡಿ, ಸಾಮಾಜಿಕ, ಆರ್ಥಿಕ ರಂಗಗಳಲ್ಲಿ ಜನ ಸಾಮಾನ್ಯರು ಮುಂದೆ ಬರಬೇಕು ಎನ್ನುವ ಉದ್ದೇಶದಿಂದ ಸಾಣೇಹಳ್ಳಿ ಶ್ರೀಗಳು ಕಳೆದ 23 ವರ್ಷದಿಂದ ನಾಟಕದ ಮೂಲಕ ಸಾಕಷ್ಟು ಪರಿವರ್ತನೆ ಮಾಡುತ್ತಿರುವುದಕ್ಕೆ ಶ್ಲಾಘಿಸಿದರು.ಮೂರು ದಿನಗಳ ನಾಟಕೋತ್ಸವದಲ್ಲಿ ''''''ಜೊತೆಗಿರುವನು ಚಂದಿರ'''', ''''ತಾಳಿಯ ತಕರಾರು'''''''' ಮತ್ತು ''''ಕಲ್ಯಾಣದ ಬಾಗಿಲು'''''''' ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ.ಸದಸ್ಯ ಎಸ್.ಕೆ.ಮಂಜುನಾಥ್, ಕೆಪಿಸಿಸಿ ಎಸ್ಟಿ ಘಟಕದ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ, ಶಿವನಗೌಡ, ನಾಗರಾಜ್, ಪಾಟೀಲ್ ಹರ್ಷ, ಇದ್ದರು.