ಕೋಲಾರ: ಬೆಂಗಳೂರಿಗೆ ಕೂದಲೆಳೆ ದೂರದಲ್ಲಿದ್ದು, ಏನೂ ಅಭಿವೃದ್ಧಿ ಕಾಣದೆ, ರಾಮನಗರ, ತುಮಕೂರು ಜಿಲ್ಲೆಗಳಂತೆ ಎಲ್ಲಾ ಅರ್ಹತೆ ಇರುವ, ಅಭಿವೃದ್ಧಿ ದೃಷ್ಠಿಯಿಂದ ಅತೀ ಹಿಂದುಳಿದ ಕೋಲಾರ ಜಿಲ್ಲೆಯನ್ನು ಬೆಂಗಳೂರು ಪೂರ್ವ ಜಿಲ್ಲೆಯನ್ನಾಗಿ ಘೋಷಿಸಲು ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ರಮೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿದ ಅವರು, ಈ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯ ರಾಜಕೀಯ ಮುತ್ಸದ್ಧಿಗಳನ್ನು ಹಾಗೂ ಒಳ್ಳೆಯ ಅಧಿಕಾರಿಗಳನ್ನು ಕೊಟ್ಟ ಈ ಜಿಲ್ಲೆ ಈಗಿನ ರಾಜಕೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಜಿಲ್ಲೆಯಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟ ರಾಜಕಾರಣ ಹಾಗೂ ಭ್ರಷ್ಟ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೇಂದ್ರದ ಎನ್ಡಿಎ ಸರ್ಕಾರದ ಒಬ್ಬ ಸಂಸದರಿದ್ದು, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಲ್ಕು ಶಾಸಕರಿದ್ದರೂ ಬರೀ ಖಾಸಗಿ ಕಾರ್ಯಕ್ರಮಗಳಾದ ಮದುವೆ, ಜಾತ್ರೆ ಇತ್ಯಾದಿಗಳಲ್ಲಿ ಭಾಗವಹಿಸಲು ಸೀಮಿತವಾಗಿದ್ದು, ಹಿಗೋ, ಆಗೋ ಯಾವುದಾದರೂ ಕಾರ್ಯಕ್ರಮಗಳಿಗೆ ಮಾತ್ರ ಬಂದು ಹೋಗುವ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ಜಿಲ್ಲೆಯ ಅಭಿವೃದ್ಧಿ ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದ್ದಾರೆ.