ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಒಗ್ಗಟ್ಟು ಅಗತ್ಯವಾಗಿದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಬಾಣಾವಾರ ಸಮೀಪದ ಅರಸಿನಕುಪ್ಪೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೇವತೆ ಸಮುದಾಯ ಭವನದ ಉದ್ಘಾಟನೆಯನ್ನು ಅಖಿಲ ಭಾರತೀಯ ಸಂತ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷರು ಹಾಗೂ ಅರಸಿನಕುಪ್ಪೆಯ ಶ್ರೀಮಂಜುನಾಥಸ್ವಾಮಿ ದೇವಾಲಯದ ಗುರು ಶ್ರೀ ರಾಜೇಶ್ನಾಥ್ಜಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಒಗ್ಗಟ್ಟು ಅಗತ್ಯವಾಗಿದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಈ ನಿಟ್ಟಿನಲ್ಲಿ ಅರಸಿನಕುಪ್ಪೆ ಗ್ರಾಮದಲ್ಲಿ ಮಹಿಳೆಯರು ಸರ್ಕಾರದ ಯಾವುದೇ ಅನುದಾನವಿಲ್ಲದೇ, ದಾನಿಗಳಿಂದ ಹಣ ಸಂಗ್ರಹಿಸಿ ಗ್ರಾಮದ ಎಲ್ಲರ ಉಪಯೋಗಕ್ಕಾಗಿ ಸಮುದಾಯ ಭವನವನ್ನು ನಿರ್ಮಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಟಿ.ಬೇಬಿ, ತೀರ್ಥಾನಂದ, ಕೆ.ಬಿ.ದೇವರಾಜು, ಮಂಜುನಾಥಸ್ವಾಮಿ ಕ್ಷೇತ್ರದ ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ.ಮೋಹನ್, ಗ್ರಾಮದ ಪ್ರಮುಖರಾದ ರಾಮಣ್ಣ, ಉತ್ತಪ್ಪ, ಅರ್ಜುನ್, ಬಸಿರುಗುಪ್ಪೆಯ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಧನಂಜಯ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್, ಹೆಬ್ಬಾಲೆಯ ಸೋಮಣ್ಣ ಮತ್ತಿತರರು ಈ ಸಂದರ್ಭ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದೇವತೆ ಸಮುದಾಯ ಭವನದ ಅಧ್ಯಕ್ಷೆ ಸಿ.ಎ.ವಿಮಲ ವಹಿಸಿದ್ದರು.
ಪ್ರಾರ್ಥನೆಯನ್ನು ಗೌತಮಿ ಗಿರೀಶ್, ಮಿಥುನ ಪ್ರಕಾಶ್ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಎಚ್.ಎಸ್.ವೀಣಾ ಸ್ವಾಗತಿಸಿ, ಅರ್ಪಿತ ಪುಟ್ಟರಾಜು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ 7ಗಂಟೆಗೆ ಗಣಪತಿ ಹೋಮ ಮತ್ತು ಸತ್ಯನಾರಾಯಣಸ್ವಾಮಿ ಪೂಜೆಯನ್ನು ಶ್ರೀಮಂಜುನಾಥಸ್ವಾಮಿ ದೇವಾಲಯದ ಅರ್ಚಕರಾದ ಜಗದೀಶ್ ಉಡುಪ ಅವರು ನೆರವೇರಿಸಿದರು. ಅರ್ಚಕರಾದ ಹರಿಭಟ್, ಮೂರ್ತಿ ಪೂಜಾ ಕಾರ್ಯದಲ್ಲಿ ಸಹಕರಿಸಿದರು. ನಂತರ ಸಂಘದ ಮಹಿಳೆಯರು ದೇವಾಲಯದ ಆವರಣದಿಂದ ಕಳಸವನ್ನು ಹೊತ್ತು ಮೆರವಣಿಗೆಯಲ್ಲಿ ಸಮುದಾಯದ ಸಭಾಂಗಣಕ್ಕೆ ಆಗಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.