ಜಿಂಕೆ ಹಾವಳಿ, ಬೆಳೆ ರಕ್ಷಣೆಗೆ ರೈತರ ಪರದಾಟ

KannadaprabhaNewsNetwork |  
Published : Jul 22, 2024, 01:20 AM IST
ಹೋಲದಲ್ಲಿ ಬೆಳೆದು ನಿಂತ ಬೆಳೆಗಳನ್ನ ತಿನ್ನಲು ದಾಂಗುಡಿ ಇಟ್ಟ ಜಿಂಕೆ ಹಿಂಡು. | Kannada Prabha

ಸಾರಾಂಶ

ಪ್ರಸಕ್ತ ವರ್ಷ ಸಕಾಲದಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಶೇಂಗಾ, ಹೆಸರು, ಹತ್ತಿ, ಗೋವಿನಜೋಳ ಇನ್ನಿತರ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ರೈತರು ಉತ್ತಮ ಫಸಲು ಬರುವ ಆಶಾಭಾವನೆ ಹೊಂದಿದ್ದಾರೆ

ಮಹೇಶ ಛಬ್ಬಿ ಗದಗ

ಈ ವರ್ಷ ಉತ್ತಮ ಮುಂಗಾರು ಮಳೆಯಾಗಿರುವುದರಿಂದ ಬಿತ್ತನೆ ಮಾಡಿದ ಸಸಿಗಳು ಸಮೃದ್ಧವಾಗಿ ಬೆಳೆಯುತ್ತಿವೆ. ಆದರೆ ಜಿಂಕೆ ಹಾವಳಿ ಹಾಗೂ ನಿರಂತರ ಮಳೆಗೆ ರೈತರು ತತ್ತರಿಸುತ್ತಿದ್ದಾರೆ.

ಕಳೆದ ಬಾರಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಪ್ರಸಕ್ತ ವರ್ಷ ಉತ್ತಮ ಮುಂಗಾರು ಮಳೆಯಾಗಿದ್ದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಜಿಂಕೆ, ಕೃಷ್ಣಮೃಗಗಳು ಹೊಲಗಳಿಗೆ ಲಗ್ಗೆ ಇಡುತ್ತಿವೆ. ಹೊಲದಲ್ಲಿ ಬಿತ್ತನೆ ಮಾಡಿದ ಶೇಂಗಾ, ಹೆಸರು, ಹತ್ತಿ ಇನ್ನಿತರ ಸಸಿಗಳನ್ನು ತಿನ್ನುತ್ತಿವೆ. ಬೆಳೆ ರಕ್ಷಣೆಗೆ ಮಾಡಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

ಬೆಳೆ ರಕ್ಷಣೆಗೆ ಬಿಯರ್‌ ಬಾಟಲ್‌:

ಪ್ರಸಕ್ತ ವರ್ಷ ಸಕಾಲದಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಶೇಂಗಾ, ಹೆಸರು, ಹತ್ತಿ, ಗೋವಿನಜೋಳ ಇನ್ನಿತರ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ರೈತರು ಉತ್ತಮ ಫಸಲು ಬರುವ ಆಶಾಭಾವನೆ ಹೊಂದಿದ್ದಾರೆ. ಆದರೆ ಜಿಂಕೆಗಳು ಸಸಿಯ ಚಿಗುರು ತಿನ್ನುವ ಜತೆಗೆ ಸಸಿಗಳನ್ನು ತುಳಿದು ನಾಶಪಡಿಸುತ್ತಿವೆ. ಜಿಂಕೆ ಹಾವಳಿ ತಪ್ಪಿಸಿ, ಬೆಳೆ ರಕ್ಷಿಸಲು ನಾನಾ ತಂತ್ರಗಳನ್ನು ಬಳಸಲಾರಂಭಿಸಿದ್ದಾರೆ. ಕೆಲವು ರೈತರು ರಸ್ತೆ ಅಕ್ಕ-ಪಕ್ಕದಲ್ಲಿ ಬಿದ್ದಿರುವ ಖಾಲಿ ಬಿಯರ್‌ ಬಾಟಲಿಗಳನ್ನು ತಂದು ಹೊಲದಲ್ಲಿರುವ ಗಿಡ, ಮರಗಳಿಗೆ ನೇತು ಹಾಕುತ್ತಿದ್ದಾರೆ. ಗಾಳಿ ಬೀಸುವ ರಭಸಕ್ಕೆ ಬಿಯರ್ ಬಾಟಲಿಗಳು ಒಂದಕ್ಕೊಂದು ತಾಗಿದಾಗ ಅವುಗಳ ಶಬ್ದಕ್ಕೆ ಜಿಂಕೆಗಳು ಭಯಗೊಂಡು ಓಡುತ್ತವೆ. ಕೆಲವೆಡೆ ಈ ತಂತ್ರವೂ ಫಲಿಸುತ್ತಿಲ್ಲ.

ಕಪ್ಪತ್ತಗುಡ್ಡ ಸೆರಗಿನ ನಾಗಾವಿ, ಬೆಳದಡಿ, ಸೊರಟೂರ, ಕಣವಿ, ಹೊಸೂರು, ಹರ್ತಿ, ಶಿರುಂಜ, ಯಲಿಶಿರುಂಜ, ಮಹಾಲಿಂಗಪುರ, ಮುಳಗುಂದ, ಚಿಂಚಲಿ, ಕಲ್ಲೂರ, ನೀಲಗುಂದ, ಕುರ್ತಕೋಟಿ ಇನ್ನಿತರ ಭಾಗಗಳಲ್ಲಿ ಜಿಂಕೆ ಹಾವಳಿ ವ್ಯಾಪಕವಾಗಿದೆ. ೨೦-೩೦ ಜಿಂಕೆಗಳು ತಂಡೋಪತಂಡವಾಗಿ ತೋಟಗಾರಿಕೆ, ಮಳೆಯಾಶ್ರಿತ ಬೆಳೆಗಳಿಗೆ ದಾಳಿ ಮಾಡಿ ಬೆಳೆ ನಾಶಪಡಿಸುತ್ತಿವೆ. ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ಕೆಲಸವಾಗಿದೆ ಎನ್ನುತ್ತಾರೆ ರೈತರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಜಿಂಕೆ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.

ಪ್ರಸಕ್ತ ವರ್ಷ ಉತ್ತಮ ಮಳೆಯಾಗಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದೇವೆ. ಆದರೆ ಬೆಳೆದು ನಿಂತ ಬೆಳೆಗಳನ್ನು ಜಿಂಕೆ, ಕೃಷ್ಣಮೃಗಗಳು ತಿಂದು, ತುಳಿದು ನಾಶಪಡಿಸುತ್ತಿವೆ. ಬೆಳೆಗಳ ರಕ್ಷಣೆ ಮಾಡುವುದೆ ಒಂದು ಕೆಲಸವಾಗಿದೆ. ಜಿಂಕೆ ಹಾವಳಿ ತಪ್ಪಿಸಲು ಸಂಬಂಧಪಟ್ಟ ಇಲಾಖೆ ಶಾಶ್ವತ ಕ್ರಮಕೈಗೊಳ್ಳಬೇಕು ಎಂದು ರೈತ ಮಹಾಂತೇಶ ಗುಂಜಳ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ