ಕನ್ನಡಪ್ರಭ ವಾತೆ ಮಡಿಕೇರಿ
ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ವಿನಯ್ ಸಹೋದರ ಜೀವನ್ ಜೊತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ನೇತೃತ್ವದ ಬಿಜೆಪಿ ನಿಯೋಗ ದೂರು ಸಲ್ಲಿಸಿದೆ.107 ಸೆಕ್ಷನ್ ಹಾಕಿದ್ದೇವೆ ಎಂದು ವಿನಯ್ಗೆ ಪದೇ ಪದೇ ಕರೆ ಮಾಡಿದ ವ್ಯಕ್ತಿಯ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿ ದೂರು ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕರೆ ಬಂದಿದ್ದ ಫೋನ್ ಸಂಖ್ಯೆ ಮತ್ತು ಇತರ ದಾಖಲಾತಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರಿಗೆ ಬಿಜೆಪಿ ನಿಯೋಗ ನೀಡಿದೆ. ಮಾ.21 ರಂದು ಬೆಳಗ್ಗೆ 10.09 ಗಂಟೆಗೆ ವಿನಯ್ಗೆ ಈ ಕರೆ ಬಂದಿತ್ತು. 2.45 ನಿಮಿಷ ವಿನಯ್ ಸೋಮಯ್ಯ ಜತೆ ಆ ವ್ಯಕ್ತಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭ ನಗರದಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ವಿನಯ್ ಆತ್ಮಹತ್ಯೆ ಮಾಡಿಕೊಂಡು ನಾಲ್ಕು ದಿನಗಳಾಯ್ತು. ಆದರೂ ಈವರೆಗೆ ಯಾರೊಬ್ಬರ ಬಂಧನ ಆಗಿಲ್ಲ. ವಿನಯ್ ತನ್ನ ಸಾವಿಗೆ ಕಾರಣ ಎಂದು ಬರೆದಿದ್ದ ಕಾಂಗ್ರೆಸ್ ಮುಖಂಡ ಜಿಲ್ಲೆಯ ಶಾಸಕರೊಬ್ಬರ ಮನೆಯಲ್ಲಿ ಅವಿತಿರುವ ಸಾಧ್ಯತೆ ಇದ್ದು, ಪೊಲೀಸರು ಮೊದಲು ಅವರ ಮನೆ ತಪಾಸಣೆ ಮಾಡಬೇಕು ಎಂದು ಆಗ್ರಹಿಸಿದರು.ವಿನಯ್ ಸೋಮಯ್ಯ ತನಗೆ ಗೊತ್ತಿಲ್ಲ ಎಂದು ವಿನಯ್ ತನ್ನ ಡೆತ್ ನೋಟ್ನಲ್ಲಿ ಹೆಸರಿಸಿರುವ ಶಾಸಕ ಹೇಳಿದ್ದಾರೆ. ಆದರೆ ಅವರು ಕಾವೇರಿ ತಾಯಿ ಇಗ್ಗುತಪ್ಪ ಮನಸ್ಸಿನಲ್ಲಿಟ್ಟು ವಿನಯ್ ಸೋಮಯ್ಯ ಗೊತ್ತಿಲ್ಲಾ ಎಂದು ಹೇಳುತ್ತಾರಾ ಎಂದು ಸವಾಲು ಹಾಕಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೂ ನಿಯೋಗದಿಂದ ದೂರು ಸಲ್ಲಿಸಲಾಯಿತು. ದೂರು ನೀಡುವ ವೇಳೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಾಜಿ ಅಧ್ಯಕ್ಷರಾದ ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್ ಮತ್ತಿತರರು ಇದ್ದರು.