- ಸರ್ಕಾರದ ಯೋಜನೆಗಳ ಕುರಿತು ಪ್ರತಿ ಹಳ್ಳಿಯಲ್ಲಿಯೂ ಬ್ಯಾನರ್ ಕಟ್ಟಿ, ಜಾಗೃತಿ ಮೂಡಿಸಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಸರ್ಕಾರದ ಯೋಜನೆಗಳು ಸಾಕಷ್ಟು ಇದ್ದು, ಅವುಗಳನ್ನು ರೈತರಿಗೆ ತಲುಪುವಂತೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಯಲ್ಲಿಯೂ ಸಹ ಬ್ಯಾನರ್ ಕಟ್ಟಿ, ಜಾಗೃತಿ ಮೂಡಿಸಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜೀವನಸಾಬ ಮಾಹಿತಿ ನೀಡುತ್ತಿದ್ದ ವೇಳೆಯಲ್ಲಿ ತಾಕಿತು ಮಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರು, ಇಷ್ಟೆಲ್ಲಾ ಯೋಜನೆಗಳು ಇದ್ದರೂ ರೈತರಿಗೆ ಯಾಕೆ ತಲುಪಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಸೋಲಾರ್ ಪಂಪ್ಸೆಟ್ಗಳಿಗೆ ಸರ್ಕಾರ ಸಾಕಷ್ಟು ಸಹಾಯಧನ ನೀಡುತ್ತಿದೆ. ರೈತರು ಕೇವಲ ₹60 ಸಾವಿರ ಪಾವತಿ ಮಾಡಿದರೇ ರೈತರಿಗೆ ₹6 ಲಕ್ಷ ಮೌಲ್ಯದ ಪಂಪ್ಸೆಟ್ ನೀಡುತ್ತಾರೆ. ಅಷ್ಟೇ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ಇದು ಸಾಕಷ್ಟು ಅನುಕೂಲವಾಗುತ್ತದೆ. ನಿತ್ಯವೂ ಹತ್ತು ಗಂಟೆ ಸೋಲಾರ್ ಪಂಪ್ ರನ್ ಆಗುತ್ತದೆ ಎನ್ನುವುದು ಬಹಳ ಅತ್ಯುಪಯುಕ್ತ ಯೋಜನೆಯಾಗಿದೆ. ಇದನ್ನು ಯಾಕೆ ನೀವು ರೈತರಿಗೆ ಮನವರಿಕೆ ಮಾಡಿಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ನರೇಗಾ ಯೋಜನೆಯಲ್ಲಿಯೂ ಸಾಕಷ್ಟು ರೈತಪರ ಯೋಜನೆಗಳು ಇವೆ. ಆದರೆ, ಇವುಗಳನ್ನು ರೈತರು ಬಳಕೆ ಮಾಡಿಕೊಳ್ಳುವಂತೆ ನೀವು ಮಾಡುವುದೇ ಇಲ್ಲ. ಹಾಗಾಗಿ ಕೂಡಲೇ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 104 ಗ್ರಾಮಗಳಲ್ಲಿಯೂ ಬ್ಯಾನರ್ ಕಟ್ಟಬೇಕು. ನಿಮ್ಮ ಸಂಪರ್ಕ ಸಂಖ್ಯೆ ನಮೂದಿಸಬೇಕು. ಆಗ ರೈತರು ಕರೆ ಮಾಡಿ ಅದರ ಸದ್ಬಳಕೆಗೆ ಮುಂದಾಗುತ್ತಾರೆ. ಡಿ. 20ರೊಳಗಾಗಿ ಪ್ರತಿ ಹಳ್ಳಿಯಲ್ಲಿಯೂ ಬ್ಯಾನರ್ ಹಾಕಬೇಕು ಎಂದು ಸೂಚನೆ ನೀಡಿದರು.ಮಣ್ಣು ಪರೀಕ್ಷೆಯನ್ನು ಮಾಡಲು ರೈತರ ಹೊಲಗಳಿಗೆ ತೆರಳಲು ವಾಹನ ಬಿಡಲಾಗಿತ್ತು. ಈಗ ಅವು ಕಾಣುತ್ತಲೇ ಇಲ್ಲ. ಯಾರಾದರೂ ನೋಡಿದ್ದಿರಾ ಎಂದು ಶಾಸಕರು ಪ್ರಶ್ನೆ ಮಾಡಿದರು. ಆಗ ಮಧ್ಯೆ ಪ್ರವೇಶ ಮಾಡಿದ ಕೃಷಿ ಇಲಾಖೆ ಅಧಿಕಾರಿ, ಎಲ್ಲಾ ವಾಹನಗಳು ಸುಸಜ್ಜಿತವಾಗಿವೆ. ಅವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು. ಹಾಗಾದರೇ ಈ ಬಾರಿ ನನ್ನ ಗ್ರಾಮಗಳ ಕಾರ್ಯಕ್ರಮಗಳಿಗೆ ಅವುಗನ್ನು ತರಿಸಿ ಎಂದು ಸೂಚನೆ ನೀಡಿದರು.
ಆಸ್ಪತ್ರೆ ಮೇಲ್ದರ್ಜೆಗೆ:ಆರೋಗ್ಯ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ಹುಲಿಗಿ ಮತ್ತು ಹಿರೇಸಿಂದೋಗಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 30 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 50 ಹಾಸಿಗೆ ಆರೋಗ್ಯ ಕೇಂದ್ರಗಳನ್ನು ಪರಿವರ್ತಿಸಲಾಗಿದೆ ಎಂದರು.ತೋಟಗಾರಿಕಾ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ತೋಟಗಾರಿಕಾ ಬೆಳೆಗಳ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ನಿರೀಕ್ಷೆ ಮೀರಿ ರೈತರು ತೋಟಗಾರಿಕಾ ಬೆಳೆಯತ್ತ ಬರುತ್ತಿದ್ದಾರೆ. ಹೀಗಾಗಿ, ನಮ್ಮ ಗುರಿಗಳನ್ನು ಮೀರಿ ಹೆಚ್ಚುವರಿ ಗುರಿಗಳನ್ನು ನಿಗದಿ ಮಾಡಿಕೊಂಡು ರೈತರಿಗೆ ಸಹಾಯ ಮಾಡುತ್ತಿದ್ದೇವೆ ಎಂದರು.
ಜೇನು ಸಾಕಾಣಿಕೆಗೂ ಬೇಡಿಕೆ ಬಂದಿದ್ದು, ಅದಕ್ಕೆ ಇರುವ ಪ್ರೋತ್ಸಾಹದಾಯಿಕ ಯೋಜನೆಗಳಿಗೆ ಈಗಾಗಲೇ ರೈತರನ್ನು ಆಯ್ಕೆ ಮಾಡಲಾಗಿದ್ದು, ಹಂತಹಂತವಾಗಿ ಜಾರಿ ಮಾಡಲಾಗುತ್ತದೆ ಎಂದರು.ವಿಳಂಬವಾದ ಸಭೆ:
ಕೊಪ್ಪಳ ತಾಪಂ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆ ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾಗಿತ್ತು. ಆದರೆ, ಪ್ರಾರಂಭವಾಗಿದ್ದು ಮಾತ್ರ ಮಧ್ಯಾಹ್ನ 1 ಗಂಟೆಗೆ. ಬೆಳಗ್ಗೆಯೇ ಬಂದಿದ್ದ ಅಧಿಕಾರಿಗಳು ಶಪಿಸುತ್ತಾ ಕುಳಿತುಕೊಂಡಿದ್ದರು. ಶಾಸಕ ರಾಘವೇಂದ್ರ ಹಿಟ್ನಾಳ ಸಭೆಗೆ ಬರುವುದಕ್ಕೆ ತಡ ಮಾಡಿದ್ದೇ ವಿಳಂಬಕ್ಕೆ ಕಾರಣವಾಯಿತು.ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಸೀಲ್ದಾರ ವಿಠ್ಠಲ ಚೌಗಲೆ, ತಾಪಂ ಇಒ ದುಂಡಪ್ಪ ತುರಾದಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಪ್ಪಳ ತಾಲೂಕು ಅಧ್ಯಕ್ಷ ಬಾಲಚಂದ್ರ ಇದ್ದರು.