ರಾಮನಗರ: ತಾಲೂಕಿನ ಕಸಬಾ ಹೋಬಳಿಯ ಅರಳಿಮರದದೊಡ್ಡಿ ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳು ದಾಖಲಾಗದಿದ್ದರೂ ಮಕ್ಕಳಿದ್ದಾರೆಂದು ಸುಳ್ಳು ದಾಖಲೆ ಸೃಷ್ಟಿಸಿ ಆಹಾರ ಪದಾರ್ಥಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಹಾಯಕ ಕಾರ್ಯಕರ್ತೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕರ್ನಾಟಕ ರೈತಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಗ್ರಾಮಸ್ಥರು ಮಕ್ಕಳ ಹೆಸರಿನಲ್ಲಿ ಆಹಾರ ಪದಾರ್ಥಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಂಗನವಾಡಿ ಸಹಾಯಕ ಕಾರ್ಯಕರ್ತೆ ವಿಜಯಲಕ್ಷ್ಮಿ ವಿರುದ್ಧಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ದೂರು ಸಲ್ಲಿಸಿದರು.
ಅರಳಿಮರದದೊಡ್ಡಿ ಗ್ರಾಮದಲ್ಲಿ 300 ಜನಸಂಖ್ಯೆಯಿದ್ದು, ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯಾಗಿ ವಿಜಯಲಕ್ಷ್ಮಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕೇಂದ್ರಕ್ಕೆ ಯಾವ ಮಕ್ಕಳು ದಾಖಲಾಗಿಲ್ಲ. ಆದರೂ ಮಕ್ಕಳ ದಾಖಲಾತಿ ತೋರಿಸಿ ಪ್ರತಿ ತಿಂಗಳು ಸರ್ಕಾರ ನೀಡುವ ಆಹಾರ ಪದಾರ್ಥಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.ಅಂಗನವಾಡಿಯನ್ನು ಸರಿಯಾದ ಸಮಯಕ್ಕೆ ತೆರೆಯುತ್ತಿಲ್ಲ. ಹೀಗಾಗಿ ಗ್ರಾಮದ ಪೋಷಕರು ತಮ್ಮ ಮಕ್ಕಳನ್ನು ಪ್ಲೇ ಹೋಮ್ ಗಳಿಗೆ ಸೇರಿಸಿದ್ದಾರೆ. ಮಕ್ಕಳೇ ದಾಖಲಾಗದಿದ್ದರೂ ಪ್ರತಿ ತಿಂಗಳು ಇಲಾಖೆಯಿಂದ ಆಹಾರ ಪದಾರ್ಥಗಳು ಸರಬರಾಜಾಗುತ್ತಿದ್ದು, ಅದನ್ನು ವಿಜಯಲಕ್ಷ್ಮಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರು ಪ್ರಶ್ನಿಸಿದರೆ ಕಾರ್ಯಕರ್ತೆ ವಿಜಯಲಕ್ಷ್ಮಿ ಬೇಜವಾಬ್ದಾರಿಯಿಂದ ವರ್ತಿಸಿ ಉಡಾಫೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರವಿ, ಪುಟ್ಟಯ್ಯ, ಪುಟ್ಟಸ್ವಾಮಯ್ಯ, ಸತೀಶ್, ರಾಜು, ಶಿವನಂಜಯ್ಯ, ಚನ್ನಪ್ಪ, ನಾಗಪ್ಪ, ಸುದರ್ಶನ್, ಲಿಂಗಯ್ಯ, ಗಿರೀಶ್, ಎಂ.ಶಿವಣ್ಣ, ಯಶೋಧಮ್ಮ, ನಾಗಮ್ಮ, ಜಯಲಕ್ಷ್ಮಿ, ಲೋಕೇಶ್ , ಚಿಕ್ಕಮ್ಮ ಹಾಜರಿದ್ದರು.10ಕೆಆರ್ ಎಂಎನ್ 3.ಜೆಪಿಜಿಕರ್ನಾಟಕ ರೈತಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಅರಳಿಮರದದೊಡ್ಡಿ ಗ್ರಾಮಸ್ಥರು ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರಿಗೆ ದೂರು ಸಲ್ಲಿಸಿದರು.