ರೈತರ ಜಮೀನಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

KannadaprabhaNewsNetwork | Published : May 1, 2024 1:16 AM

ಸಾರಾಂಶ

ರಣಬಿಸಿಲಿನ ತಾಪಕ್ಕೆ ಬೆಳೆಗಳು ಒಣಗಿಹೋಗಿವೆ. ಎಲ್ಲೋ ಒಂದಷ್ಟು ಬೆಳೆಗಳು ಉಳಿದಿದ್ದು, ಅವುಗಳನ್ನಾದರೂ ಉಳಿಸಿಕೊಳ್ಳೋಣ ಎಂದರೆ ಬೆಸ್ಕಾಂ ಇಲಾಖೆ ವಿದ್ಯುತ್ ಅನ್ನು ಸರಿಯಾಗಿ ಪೂರೈಸದೇ ಕಣ್ಣಾಮುಚ್ಚಾಲೆ ಆಡುತ್ತಿದೆ. ಸಾಲ ಮಾಡಿ ಬೆಳೆಸಿದ ಬೆಳೆಗಳು ಕಣ್ಣುಮುಂದೆಯೇ ಒಣಗುತ್ತಿರುವುದನ್ನು ನೋಡಲು ಆಗುತ್ತಿಲ್ಲ. ಇದನ್ನು ಪ್ರಶ್ನಿಸಿದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಸರ್ಕಾರ ರೈತರ ಜಮೀನಿಗೆ ಏಳು ತಾಸು ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದೆ. ಆದರೆ, ಮೂರು ತಾಸು ವಿದ್ಯುತ್ ಸಹ ನೀಡದೇ ವಂಚಿಸಲಾಗುತ್ತಿದೆ. ಇದರಿಂದ ಇರುವ ಅಲ್ಪ ಸ್ವಲ್ಪ ಬೆಳೆಗಳೂ ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ, ತಾಲೂಕಿನ ಸಂಕಲಗೆರೆ ಫೀಡರ್ ವ್ಯಾಪ್ತಿಗೆ ಒಳಪಡುವ ಹತ್ತಾರು ಗ್ರಾಮಗಳ ರೈತರು ನಗರದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಎಂ.ಜಿ.ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ ಮುಂದೆ ಜಮಾಯಿಸಿದ ರೈತರು, ಬೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಸಂಕಲಗೆರೆ ಫೀಡರ್ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರ ಜಮೀನುಗಳಿಗೆ ಪ್ರತಿನಿತ್ಯ ಮೂರು ತಾಸು ವಿದ್ಯುತ್ ಅನ್ನು ಸಹ ಪೂರೈಸುತ್ತಿಲ್ಲ. ಕರೆಂಟ್ ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ವಿದ್ಯುತ್‌ಗಾಗಿ ರೈತರು ಜಮೀನಗಳ ಬಳಿ ಕಾದು ಕುಳಿತುಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಣಬಿಸಿಲಿನ ತಾಪಕ್ಕೆ ಬೆಳೆಗಳು ಒಣಗಿಹೋಗಿವೆ. ಎಲ್ಲೋ ಒಂದಷ್ಟು ಬೆಳೆಗಳು ಉಳಿದಿದ್ದು, ಅವುಗಳನ್ನಾದರೂ ಉಳಿಸಿಕೊಳ್ಳೋಣ ಎಂದರೆ ಬೆಸ್ಕಾಂ ಇಲಾಖೆ ವಿದ್ಯುತ್ ಅನ್ನು ಸರಿಯಾಗಿ ಪೂರೈಸದೇ ಕಣ್ಣಾಮುಚ್ಚಾಲೆ ಆಡುತ್ತಿದೆ. ಸಾಲ ಮಾಡಿ ಬೆಳೆಸಿದ ಬೆಳೆಗಳು ಕಣ್ಣುಮುಂದೆಯೇ ಒಣಗುತ್ತಿರುವುದನ್ನು ನೋಡಲು ಆಗುತ್ತಿಲ್ಲ. ಇದನ್ನು ಪ್ರಶ್ನಿಸಿದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಲೋಕಸಭಾ ಚುನಾವಣಾ ಗುಂಗಲ್ಲಿ ಮುಳುಗಿದೆ. ಏನಾದರೂ ಪ್ರಶ್ನಿಸಿದರೆ ಎಲ್ಲದಕ್ಕೂ ಅಧಿಕಾರಿಗಳು ನೀತಿ ಸಂಹಿತೆಯ ನೆಪ ಹೇಳುತ್ತಾರೆ. ಅನ್ನದಾತನ ಬದುಕು ಮೂರಾಬಟ್ಟೆಯಾಗಿದೆ. ರೈತರ ಸಮಸ್ಯೆ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕಿಡಿಕಾರಿದ ರೈತರು, ಬೆಸ್ಕಾಂ ಕಚೇರಿಗೆ ಬೀಗ ಜಡಿಯಲು ಸಹ ಮುಂದಾದರು.

ಈ ವೇಳೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳಾದ ಎಇಇ ಪುಷ್ಪಾ, ಜೆಇ ಗಿರೀಶ್, ಬೇಸಿಗೆ ಕಾರಣಕ್ಕೆ ರಾಜ್ಯದ ಎಲ್ಲ ಜಲಾಶಯಗಳು ಬಹುತೇಕ ಬರಿದಾಗಿವೆ. ಇದರಿಂದ ವಿದ್ಯುತ್ ಅಭಾವ ಸೃಷ್ಠಿಯಾಗಿದ್ದು, ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಆದರೆ, ಇದಕ್ಕೆ ಒಪ್ಪದ ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಧ್ಯ ಪ್ರವೇಶಿಸಿದ ರೈತಸಂಘದ ಹಿರಿಯ ಮುಖಂಡ ಆಣಿಗೆರೆ ಮಲ್ಲಯ್ಯ ರೈತರನ್ನು ಸಮಾಧಾನಪಡಿಸಿದರು. ಅಧಿಕಾರಿಗಳು ಹಾರಿಕೆಯ ಉತ್ತರ ಕೊಡುವುದನ್ನು ನಿಲ್ಲಿಸಬೇಕು. ಏಕೆ ಸಮಸ್ಯೆಯಾಗುತ್ತಿದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು. ರೈತರ ಬೆಳೆಗಳನ್ನು ಉಳಿಸುವ ನಿಟ್ಟಿನಲ್ಲಿ ಏಳು ತಾಸು ವಿದ್ಯುತ್ ಅನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರ ಜಮೀನುಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡಿದರೆ ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತದೆ. ಕಾಡುಪ್ರಾಣಿಗಳು, ಹಾವುಗಳ ಕಾಟಕ್ಕೆ ಸಿಲುಕಬೇಕಾಗುತ್ತದೆ. ತಾಲೂಕಿನ ರೈತರ ನೈಜ್ಯ ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಮೇಲಾಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ವಿದ್ಯುತ್ ಸಮಸ್ಯೆ ಪರಿಹರಿಸಬೇಕು. ಒಂದು ವಾರದೊಳಗೆ ಸಮಸ್ಯೆ ಪರಿಹರಿಸದಿದ್ದಲ್ಲಿ ರೈತಸಂಘದ ಜೊತೆಗೂಡಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ರೈತಸಂಘದ ಎಚ್.ಸಿ.ಕೃಷ್ಣಯ್ಯ, ಕೂರಣಗೆರೆ ರವಿ, ಗೋವಿಂದಹಳ್ಳಿ ರಮೇಶ್, ಜಿ.ಡಿ.ಶಿವಕುಮಾರ್, ಸಚಿನ್, ಚಂದ್ರು, ದೀಪು, ದಿನೇಶ್, ಪುಟ್ಟಸ್ವಾಮಿ, ಸಾಗರ್, ಶೀತಲ್, ಕುಮಾರ್, ನಾಗರಾಜು ಸೇರಿದಂತೆ ಹಲವರು ಇದ್ದರು.

Share this article