ಹಳಿಯಾಳದಲ್ಲಿ ಗೂಡಂಗಡಿಕಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ

KannadaprabhaNewsNetwork | Published : Dec 13, 2024 12:47 AM

ಸಾರಾಂಶ

ಕರವೇ ಘಟಕದ ಮುಂದಾಳತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೂಡಂಗಡಿಕಾರರು ಪುರಸಭೆಗೆ ತೆರಳಿ ಅಧ್ಯಕ್ಷೆ ದ್ರೌಪದಿ ಅಗಸರ ಅವರೊಂದಿಗೆ ಸಭೆ ನಡೆಸಿ ತಮ್ಮ ಅಳಲನ್ನು ತೋಡಿಕೊಂಡರು.

ಹಳಿಯಾಳ: ಪುರಸಭೆಯವರು ಗೂಡಂಗಡಿಗಳನ್ನು ತೆರವು ಮಾಡುವಾಗ ನೀಡಿದ ಭರವಸೆಯಂತೆ ಗೂಡಂಗಡಿಕಾರರ ಬದುಕಿಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ತಾಲೂಕು ಕರವೇ ಘಟಕ ಆಗ್ರಹಿಸಿದೆ.ಗುರುವಾರ ತಾಲೂಕು ಕರವೇ ಘಟಕದ ಮುಂದಾಳತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೂಡಂಗಡಿಕಾರರು ಪುರಸಭೆಗೆ ತೆರಳಿ ಅಧ್ಯಕ್ಷೆ ದ್ರೌಪದಿ ಅಗಸರ ಅವರೊಂದಿಗೆ ಸಭೆ ನಡೆಸಿ ತಮ್ಮ ಅಳಲನ್ನು ತೋಡಿಕೊಂಡರು.

ಕರವೇ ಘಟಕದ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಮಾತನಾಡಿ, ಬೆಳಗಾವಿ ರಸ್ತೆಲ್ಲಿ ಸಾರಿಗೆ ಘಟಕದ ಆವರಣಕ್ಕೆ ತಾಗಿಕೊಂಡು ಗೂಡಂಗಡಿಕಾರರು ಸಣ್ಣಪುಟ್ಟ ವಹಿವಾಟು ನಡೆಸಿ ತಮ್ಮ ಬದುಕನ್ನು ಸಾಗಿಸುತ್ತಿದ್ದರು. ಹೀಗಿರುವಾಗ ಊರಿನ ಸೌಂದರ್ಯಿಕರಣಕ್ಕಾಗಿ ಗೂಡಂಗಡಿಗಳ ತೆರವು ಕಾರ್ಯಾಚರಣೆಯನ್ನು ಪುರಸಭೆಯವರು ಆರಂಭಿಸಿದ್ದರು. ಪುರಸಭೆ ತೆರವು ಕಾರ್ಯಾಚರಣೆಗೆ ಸಂಪೂರ್ಣವಾಗಿ ಬೆಂಬಲಿಸಿದ ಗೂಡಂಗಡಿಕಾರರು ಅಂಗಡಿಗಳನ್ನು ತೆರವುಗೊಳಿಸಿ ಸಹಕರಿಸಿದರಲ್ಲದೇ ತಮಗೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಆಗ್ರಹಿಸಿದ್ದರು. ಅದಕ್ಕೆ ಸ್ಪಂದಿಸಿದ ಪುರಸಭೆಯವರು ಹೊಸದಾಗಿ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆಯಲ್ಲಿ ಅವಕಾಶ ಕಲ್ಪಿಸುವ ಭರವಸೆ ನೀಡಿ, ಈಗ ವಾಣಿಜ್ಯ ಮಳಿಗೆಗಳನ್ನು ಬೇರೆ ಜನರಿಗೆ ನೀಡಿದ್ದಾರೆ ಎಂದರು. ಪುರಸಭೆಯವರು ಈ ರೀತಿ ಬಡ ಗೂಡಂಗಡಿಕಾರರನ್ನು ಮಾತು ಕೊಟ್ಟು ಮೋಸಗೊಳಿಸಿದನ್ನು ಖಂಡಿಸುತ್ತೇವೆ. ನೀಡಿದ ಮಾತಿನಂತೆ ಗೂಡಂಗಡಿಕಾರರ ಉಪಜೀವನಕ್ಕಾಗಿ ಅಂಗಡಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.ಕರವೇ ರೈತ ಘಟಕ ಅಧ್ಯಕ್ಷ ಸುರೇಶ ಕೋಕಿತಕರ, ಉಪಾಧ್ಯಕ್ಷ ರಾಮಾ ಜಾವಳೇಕರ, ರಮೇಶ ತೊರ್ಲೆಕರ, ಪರಶುರಾಮ ಶಾಪೂರಕರ ಸೇರಿದಂತೆ ಹಲವರು ಇದ್ದರು.ಪುರಸಭೆಯವರಿಗೆ ಮನವಿ ಸಲ್ಲಿಸಿ ಸುದ್ದಿಗಾರರ ಜತೆ ವ್ಯಾಪಾರಸ್ಥರು ಮಾತನಾಡಿದರು.

ಮರಳು ಸಮಸ್ಯೆಗೆ ಬಿಜೆಪಿಯವರೇ ನೇರ ಕಾರಣ: ವೆಂಕಟೇಶ ನಾಯ್ಕ

ಭಟ್ಕಳ: ತಲೆದೋರಿರುವ ಮರಳಿನ ಸಮಸ್ಯೆಗೆ ಬಿಜೆಪಿಯವರೇ ನೇರ ಕಾರಣವಾಗಿದ್ದಾರೆ. ಮಾಜಿ ಶಾಸಕ ಸುನೀಲ ನಾಯ್ಕ ಅವರು ಮರಳು ಸಮಸ್ಯೆ ಬಗೆಹರಿಸಲು ಸಹಕಾರ ನೀಡುವುದನ್ನು ಬಿಟ್ಟು ಪತ್ರಿಕಾ ಹೇಳಿಕೆ ನೀಡಿ ಮರಳು ಸಮಸ್ಯೆ ಮತ್ತಷ್ಟು ಜಟಿಲ ಮಾಡುವುದು ಸರಿಯಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಟೀಕಿಸಿದರು.ಬುಧವಾದ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರ ಕುಮ್ಮಕ್ಕಿನಿಂದಲೇ ಕೆಲ ಸಂಘಟನೆಯವರು ಮರಳು ಸಮಸ್ಯೆ ಉಂಟಾಗಿದೆ ಎಂದು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಎರಡು ದಿನ ಮೊದಲೇ ಮರಳು ಸಮಸ್ಯೆ ಪರಿಹಾರಕ್ಕೆ ಸಚಿವ ಮಂಕಾಳ ವೈದ್ಯ ಅವರು ಪ್ರಯತ್ನಿಸಿ ಎಲ್ಲವೂ ಸುಸೂತ್ರವಾಗುವಂತೆ ಮಾಡಿದ್ದರು.ಆದರೆ ಬಿಜೆಪಿಯವರ ಕುಮ್ಮಕ್ಕಿನಿಂದ ಕೆಲ ಸಂಘಟನೆಯವರು ಪ್ರತಿಭಟನೆ ನಡೆಸಿ ಸರ್ಕಾರ, ಸಚಿವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದ ಅವರು, ಮತ್ಸ್ಯಮೇಳವನ್ನು ಮೀನುಗಾರರಿಗೋಸ್ಕರ ಮಾಡಿದ್ದು, ಇದರಿಂದ ಮೀನುಗಾರರಿಗೆ ಅನುಕೂಲವಾಗಿದೆ. ಆದರೆ ಮಾಜಿ ಶಾಸಕರು ಮತ್ಸ್ಯಮೇಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಒಬ್ಬ ಮೀನುಗಾರಿಕಾ ಸಚಿವರಾಗಿ ಸ್ವ ಕ್ಷೇತ್ರದಲ್ಲಿ ಮೀನುಗಾರರಿಗೆ ಅನುಕೂಲ ಆಗಲು ಮತ್ಸ್ಯಮೇಳ ಮಾಡುವುದು ತಪ್ಪೇ? ಮತ್ಸ್ಯಮೇಳದ ಕಾರ್ಯಕ್ರಮದಲ್ಲಿ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಬಗ್ಗೆಯೂ ಅವರು ಅಪಸ್ವರ ಎತ್ತಿ ಟೀಕಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಮಹಿಳಾ ಅಧ್ಯಕ್ಷೆ ನಯನಾ ನಾಯ್ಕ, ಮುಖಂಡರಾದ ಟಿ.ಡಿ. ನಾಯ್ಕ, ವಿಷ್ಣು ದೇವಡಿಗ, ಭಾಸ್ಕರ ಮೊಗೇರ, ಮಂಜುನಾಥ ನಾಯ್ಕ, ಗಣಪತಿ ನಾಯ್ಕ, ಮಂಜಪ್ಪ ನಾಯ್ಕ, ನಾಗೇಶ ನಾಯ್ಕ, ನಾಗೇಂದ್ರ ನಾಯ್ಕ ಮುಂತಾದವರಿದ್ದರು.

Share this article