ದೇಶ, ವಿದೇಶದಲ್ಲಿ ಎಂಜಿನೀಯರಿಂಗ್ ಕ್ಷೇತ್ರಕ್ಕೆ ಬೇಡಿಕೆ

KannadaprabhaNewsNetwork | Published : Dec 20, 2024 12:48 AM

ಸಾರಾಂಶ

ಯುವ ಸಂಶೋಧಕರಿಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕೈ ಬೀಸಿ ಕರೆಯುತ್ತಿದೆ

ಗದಗ: ಇಂದು ಎಂಜಿನೀಯರಿಂಗ್ ಪದವೀಧರರಿಗೆ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಭಾರೀ ಬೇಡಿಕೆ ಇದೆ. ಎಂಜಿನೀಯರಿಂಗ್ ಕ್ಷೇತ್ರ ಮೊದಲಿಗಿಂತಲೂ ವಿಸ್ತಾರವಾಗಿ, ಭವ್ಯವಾಗಿ ಬೆಳೆದು ನಿಂತಿದೆ ಎಂದು ಅಬ್ಬಾಟ್ ಕಂ.ಸೀನಿಯರ್ ಸಾಫ್ಟವೇರ್ ಎಂಜಿನೀಯರ್ ಶೃತಿ ಹಬೀಬ್ ಹೇಳಿದರು.

ನಗರದ ಸನ್ಮಾರ್ಗ ಪಪೂ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಎಂಜಿನೀಯರಿಂಗ್ ಕ್ಷೇತ್ರದ ಬಗ್ಗೆ ನಡೆದ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಂದು ಎಂಜಿನೀಯರಿಂಗ್ ಯಾವುದೇ ಶಾಖೆ ಆಯ್ಕೆ ಮಾಡಿಕೊಂಡರು ಅದರಲ್ಲಿ ಸಂಶೋಧನೆಗಳಿಗೆ ಭಾರೀ ಅವಕಾಶವಿದೆ. ಉತ್ತಮ ಉದ್ಯೋಗವಕಾಶಗಳು ಇವೆ. ಸನ್ಮಾರ್ಗ ಮಹಾವಿದ್ಯಾಲಯವು ಒಳ್ಳೆಯ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಏನಾದರೂ ಹೊಸತನ ಸಾಧಿಸಬೇಕೆಂಬ ಹಂಬಲ ಇಲ್ಲಿನ ಎಲ್ಲ ಉಪನ್ಯಾಸಕರಲ್ಲಿ, ಆಡಳಿತ ಮಂಡಳಿಯವರಲ್ಲಿ ಇದೆ ಎಂದರು.

ನಿರ್ದೇಶಕ ಪ್ರೊ.ಉಡುಪಿ ದೇಶಪಾಂಡೆ ಮಾತನಾಡಿ, ಎಂಜಿನೀಯರಿಂಗ್ ವಿಭಾಗದಲ್ಲಿ ಇಂದು ನಾನಾ ಶಾಖೆಗಳಿವೆ. ಪ್ರತಿ ಶಾಖೆಯಲ್ಲಿ ತನ್ನದೇ ಆದ ಮಹತ್ವ ಹೊಂದಿದ್ದು, ಯುವ ಸಂಶೋಧಕರಿಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕೈ ಬೀಸಿ ಕರೆಯುತ್ತಿದೆ. ಇಂತಹ ಸುವರ್ಣಾವಕಾಶ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಪ್ರಾ.ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ಖ್ಯಾತ ವಿಜ್ಞಾನಿಗಳೆಲ್ಲ ಗ್ರಾಮೀಣ ಪ್ರದೇಶದಿಂದಲೇ ಬಂದವರು ಕಡು ಬಡತನವನ್ನೇ ಅನುಭವಿಸಿದರು. ಇಂದಿನ ವಿದ್ಯಾರ್ಥಿಗಳಾದ ನೀವು ಗ್ರಾಮೀಣ ನಿವಾಸಿಗಳೇ ಆಗಿದ್ದರೂ ಬಡತನ ಇದ್ದರೂ ಯಾವ ಕೀಳರಿಮೆ ಬೆಳೆಸಿಕೊಳ್ಳದೇ ಛಲದಿಂದ ಎಂಜಿನೀಯರಿಂಗ್ ಕ್ಷೇತ್ರವನ್ನು ಅಪ್ಪಿಕೊಂಡಿದ್ದಾದಲ್ಲಿ ನಿರಾಸೆ ಎಂಬುದು ನಿಮ್ಮ ಜೀವನದಲ್ಲಿ ಇಲ್ಲವೇ ಇಲ್ಲ ಎಲ್ಲವೂ ಒಳ್ಳೆಯದಾಗುತ್ತೆ ನೀವು ಮನಸ್ಸು ಮಾಡಬೇಕು ಅಷ್ಟೇ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಈ ವೇಳೆ ಸಂಸ್ಥೆಯ ಚೇರಮನ್‌ ಪ್ರೊ.ರಾಜೇಶ ಕುಲಕರ್ಣಿ ಮಾತನಾಡಿದರು.

ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ನಿರ್ದೇಶಕ ಪ್ರೊ. ರೋಹಿತ, ಪ್ರೊ. ರಾಹುಲ್‌ ಒಡೆಯರ, ಪ್ರೊ.ಪುನೀತ ದೇಶಪಾಂಡೆ, ಪ್ರೊ.ಸೈಯ್ಯದ್ ಮತಿನ್ ಮುಲ್ಲಾ ಹಾಗೂ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರೊ. ಸಂತೋಷ ನಾಗರಾಳ ಸ್ವಾಗತಿಸಿದರು. ಪ್ರೊ.ರಾಧಿಕಾ ಪಾಟೀಲ ವಂದಿಸಿದರು.

Share this article