ರೈತರು-ಕಾರ್ಮಿಕರ ಭರವಸೆ ಈಡೇರಿಕೆಗೆ ಆಗ್ರಹ

KannadaprabhaNewsNetwork | Published : Nov 27, 2024 1:00 AM

ಸಾರಾಂಶ

ರಾಷ್ಟ್ರೀಯ ಕನಿಷ್ಠ ವೇತನ ತಿಂಗಳಿಗೆ ೨೬ ಸಾವಿರ ರು. ಜಾರಿಗೊಳಿಸಿ ಮತ್ತು ಮಾಸಿಕ ಪಿಂಚಣಿ ೧೦ ಸಾವಿರ ರು.ಗೆ ನಿಗದಿಪಡಿಸುವುದು. ಸಂಘಟಿತ, ಅಸಂಘಟಿತ ಯೋಜನೆ ಕಾರ್ಯಕರ್ತರು ಮತ್ತು ಗುತ್ತಿಗೆ ಕಾರ್ಮಿಕರು ಮತ್ತು ಕೃಷಿ ವಲಯ ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರು ಮತ್ತು ಕಾರ್ಮಿಕರ ಭರವಸೆ ಈಡೇರಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ- ಕರ್ನಾಟಕ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತರು.

ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನ ಬದ್ಧಗೊಳಿಸಿ ಜಾರಿಗೊಳಿಸಬೇಕು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ ಯಾವುದೇ ರೂಪದಲ್ಲೂ ಕಾರ್ಮಿಕರ ಗುತ್ತಿಗೆ ಅಥವಾ ಹೊರಗುತ್ತಿಗೆ ಪದ್ಧತಿ ಇರಬಾರದು ಎಂದು ಹೇಳಿದರು.

ರಾಷ್ಟ್ರೀಯ ಕನಿಷ್ಠ ವೇತನ ತಿಂಗಳಿಗೆ ೨೬ ಸಾವಿರ ರು. ಜಾರಿಗೊಳಿಸಿ ಮತ್ತು ಮಾಸಿಕ ಪಿಂಚಣಿ ೧೦ ಸಾವಿರ ರು.ಗೆ ನಿಗದಿಪಡಿಸುವುದು. ಸಂಘಟಿತ, ಅಸಂಘಟಿತ ಯೋಜನೆ ಕಾರ್ಯಕರ್ತರು ಮತ್ತು ಗುತ್ತಿಗೆ ಕಾರ್ಮಿಕರು ಮತ್ತು ಕೃಷಿ ವಲಯ ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಒತ್ತಾಯಿಸಿದರು.

ಸಾಲಬಾಧೆ ಮತ್ತು ಆತ್ಮಹತ್ಯೆಗಳನ್ನು ಕೊನೆಗೊಳಿಸಲು ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಮಗ್ರ ಸಾಲ ಮನ್ನಾ, ರೈತರಿಗೆ ಮತ್ತು ಕಾರ್ಮಿಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಖಚಿತಪಡಿಸುವುದು. ರಕ್ಷಣೆ, ರೈಲ್ವೆ, ಆರೋಗ್ಯ, ಶಿಕ್ಷಣ, ವಿದ್ಯುತ್ ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣ ಮಾಡದಂತೆ ಆಗ್ರಹಿಸಿದರು.

ಕೃಷಿ ಪಂಪ್‌ ಸೆಟ್‌ಗಳಿಗೆ ಉಚಿತ ವಿದ್ಯುತ್, ಪ್ರೀ-ಪೇಯ್ಡ್, ಸ್ಮಾರ್ಟ್ ಮೀಟರ್‌ಗಳು, ಗೃಹ ಬಳಕೆದಾರರಿಗೆ, ಅಂಗಡಿಗಳಿಗೆ ೩೦೦ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜನವಾದಿ ಸಂಘಟನೆಯ ದೇವಿ, ಪ್ರಾಂತ ರೈತಸಂಘದ ಎನ್.ಎಲ್. ಭರತ್‌ರಾಜ್, ಕೃಷಿ ಕೂಲಿಕಾರರ ಸಂಘದ ಎಂ.ಪುಟ್ಟಮಾದು, ಎಸ್.ಲತಾ, ಎಂ.ಸಿದ್ದರಾಜು, ಎಂ.ಎಂ. ಶಿವಕುಮಾರ್, ವರದರಾಜೇಂದ್ರ, ಮಹದೇವಮ್ಮ, ಜಿ.ಪೂರ್ಣಿಮಾ, ಸಿ.ಕುಮಾರಿ ಇತರರಿದ್ದರು.

Share this article