ಶಿಕಾರಿಪುರ: ಉಪನ್ಯಾಸಕರಿಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸುವ ಆತಂಕ ಹೆಚ್ಚಾಗಿದ್ದು ಈ ದಿಸೆಯಲ್ಲಿ ಸರ್ಕಾರ ಕೂಡಲೇ ಉಪನ್ಯಾಸಕರನ್ನು ನೇಮಕಗೊಳಿಸುವಂತೆ ಆಗ್ರಹಿಸಿ ಗುರುವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಸ್ರಾರು ವಿದ್ಯಾರ್ಥಿಗಳು ತಾಲೂಕು ಕಚೇರಿ ಮುಂಭಾಗ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಪ್ರತಿಭಟಿಸಿದರು.
ಇತ್ತೀಚಿನ ವರ್ಷದಲ್ಲಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಹೆಚ್ಚಾಗಿದ್ದು, ಪರೀಕ್ಷೆ ಸಮೀಸುತ್ತಿರುವ ಸಂದರ್ಬದಲ್ಲಿ ಉಪನ್ಯಾಸಕರಿಲ್ಲದೆ ಫಲಿತಾಂಶದಲ್ಲಿ ತೀವ್ರ ಹಿನ್ನಡೆ ಉಂಟಾಗುವ ಆತಂಕ ಎದುರಾಗಿದೆ ಎಂದು ನೇತೃತ್ವ ವಹಿಸಿದ್ದ ಎಬಿವಿಪಿ ತಾ.ಸಂಚಾಲಕ, ವಿದ್ಯಾರ್ಥಿ ದರ್ಶನ್ ಆತಂಕ ವ್ಯಕ್ತಪಡಿಸಿದರು.ರಾಜ್ಯಾದ್ಯಂತ 432 ಪದವಿ ಕಾಲೇಜುಗಳಲ್ಲಿನ 6 ಸಾವಿರ ಕಾಯಂ ಉಪನ್ಯಾಸಕರಲ್ಲಿ ಅರ್ಧಕ್ಕಿಂತ ಅಧಿಕ ನಿವೃತ್ತರಾಗಿದ್ದು ಉಳಿದವರ ಜತೆ 12 ಸಾವಿರ ಅತಿಥಿ ಉಪನ್ಯಾಸಕರ ಸೇವಾ ನೆರವಿನಿಂದ ಕಾಲೇಜಿನಲ್ಲಿ ಪಾಠ ನಡೆಯುತ್ತಿತ್ತು ಎಂದು ತಿಳಿಸಿದರು.
ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು. ಗುಣಮಟ್ಟದ ಶಿಕ್ಷಣ ಖಾತರಿಪಡಿಸಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಇದೀಗ ಕರ್ತವ್ಯ ಪ್ರಜ್ಞೆ ಮರೆತಿರುವ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕರ ನೇಮಕಾತಿ ಬಗ್ಗೆ ದೃಢ ನಿರ್ದಾರ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿನ ಎಲ್ಲ ವಿಭಾಗದ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಪಾಠ ಪ್ರವಚನಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಪರಿಣಾಮ ಫಲಿತಾಂಶದಲ್ಲಿ ತೀವ್ರ ಕುಸಿತ ಉಂಟಾಗುವ ಅಪಾಯವಿದ್ದು ಭವಿಷ್ಯದಲ್ಲಿ ಸಮಾಜ ಇದರ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾಲೇಜು ಆರಂಭವಾಗಿ ತಿಂಗಳು ಕಳೆದಿದ್ದು ಇಂದಿಗೂ ಅತಿಥಿ ಉಪನ್ಯಾಸಕರ ನೇಮಕವಿಲ್ಲದೆ ತರಗತಿ ನಡೆಯುತ್ತಿಲ್ಲ,ಖಾಯಂ ಉಪನ್ಯಾಸಕರ ನೇಮಕಾತಿ ಯೋಗ್ಯತೆ ಸರ್ಕಾರಕ್ಕೆ ಅಸಾದ್ಯವಾಗಿದ್ದು ಅತಿಥಿ ಉಪನ್ಯಾಸಕರ ಮೂಲಕ ದೈನಿಂದಿನ ಪಾಠ ಪ್ರವಚನಕ್ಕೆ ತುರ್ತು ಕ್ರಮ ಕೈಗೊಳ್ಳಬೇಕಾದ ಸರ್ಕಾರದ ಅನಿಶ್ಚಿತೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ. ಈಗಾಗಲೇ 20 ಸಾವಿರ ಅಧಿಕ ಅಭ್ಯರ್ಥಿಗಳು ಯುಜಿಸಿ ನಿಯಮಾನುಸಾರ ಅರ್ಹತೆ ಗಳಿಸಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಸಿದ್ದರಾಗಿದ್ದು ಖಾಲಿಯಾಗಿರುವ ಹುದ್ದೆಯ ನೇಮಕಾತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಬದಲ್ಲಿ ವಿವಿಧ ಕಾರಣಗಳಿಂದ ವಿಳಂಭ ಧೋರಣೆ ಅನುಸರಿಸಿ ಗೊಂದಲ ಸೃಷ್ಟಿಯಾಗುತ್ತಿದ್ದು ಸರ್ಕಾರ ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಗುಣಮಟ್ಟದ ಶಿಕ್ಷಣಕ್ಕೆ ಯುಜಿಸಿ ನಿಯಮದಡಿ ಅರ್ಹತೆ ಗಳಿಸಿ ಅಭ್ಯರ್ಥಿಗಳ ನೇಮಕಾತಿ ಬಗ್ಗೆ ಸರ್ಕಾರ ಹೆಚ್ಚು ಆಸಕ್ತಿ ವಹಿಸಬೇಕಾಗಿದೆ ಮತ್ತು ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಅಗತ್ಯವಿರುವ ಪ್ರಯೋಗಾಲಯ ಸಲಕರಣೆ,ಕಂಪ್ಯೂಟರ್ ಮತ್ತಿತರ ಸೌಲಭ್ಯ ತಕ್ಷಣ ಕಲ್ಪಿಸಿಕೊಡುವಂತೆ ಆಗ್ರಹಿಸಿದರು.ಆರಂಭದಲ್ಲಿ ಕಾಲೇಜಿನಿಂದ ಬೃಹತ್ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಹಾಕಿ ತಾಲೂಕು ಕಚೇರಿ ಮುಂಭಾಗ ಆಗಮಿಸಿದ ವಿದ್ಯಾರ್ಥಿಗಳು ನಂತರದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ರಂಗನಾಥ್, ಚೇತನ್, ಆಕಾಶ್, ಸಂಪತ್, ರುಚಿತಾ, ಸಹಸ್ರಾರು ವಿದ್ಯಾರ್ಥಿಗಳು ಹಾಜರಿದ್ದರು.